ದೇವರ ವಿಗ್ರಹದ ಬಳಿ ದರ್ಶನ್ ಫೋಟೋ ಇಟ್ಟು ಪೂಜೆ: ಬಳ್ಳಾರಿ ಅರ್ಚಕ ಅಮಾನತು - Darshan Photo near Temple Idol - DARSHAN PHOTO NEAR TEMPLE IDOL
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದ ಮೇರೆಗೆ ನಟ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆ ಮುಂದುವರಿದಿದೆ. ಇದೀಗ ದೇವರ ಮೂರ್ತಿ ಬಳಿಯೇ ದರ್ಶನ್ ಫೋಟೋ ಇಟ್ಟು ಪೂಜೆ ನಡೆಸಿರುವುದು ವಿವಾದಕ್ಕೆ ಗುರಿಯಾಗಿದೆ.


Published : Aug 6, 2024, 1:25 PM IST
ಬಳ್ಳಾರಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ಮುಂದುವರಿದಿದೆ. ಇದೀಗ ದೇವಸ್ಥಾನವೊಂದರಲ್ಲಿ ದರ್ಶನ್ ಫೋಟೋ ಇಟ್ಟು ಪೂಜೆ ಮಾಡಲಾಗಿದ್ದು, ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದ ಐತಿಹಾಸಿಕ ದೊಡ್ಡಬಸವೇಶ್ವರ ದೇವಸ್ಥಾನದಲ್ಲಿನ ಬೃಹತ್ ನಂದಿ ವಿಗ್ರಹದ ಎದುರು ಅಮವಾಸ್ಯೆಯಂದು ನಟ ದರ್ಶನ್ ಪೋಟೋಗಳನ್ನು ಇಟ್ಟು ಪೂಜೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಹಲವು ಭಕ್ತರು ಅಸಮಾಧಾನ ಹೊರಹಾಕಿದ್ದಾರೆ.
ಕೊಲೆ ಆರೋಪದ ಮೇಲೆ ಜೈಲು ಸೇರಿರುವ ನಟ ದರ್ಶನ್ ಅವರ ವಿವಿಧ ಭಂಗಿಯ ಫೋಟೋಗಳನ್ನು ದೇವರ ಮುಂದೆ ಇರಿಸಿ ಅರ್ಚಕರು ಪೂಜೆ ಮಾಡಿರುವ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸರ್ಕಾರದ ಧಾರ್ಮಿಕ ಇಲಾಖೆಯ ಸುಪರ್ದಿಯಲ್ಲಿರುವ ದೇವಸ್ಥಾನದಲ್ಲಿ ಹೀಗೆ ಮಾಡುವುದು ಸರಿಯೇ? ಎನ್ನುವ ಪ್ರಶ್ನೆ ಎದ್ದಿದೆ. ದರ್ಶನ್ ಅವರಿಗೆ ಒಳ್ಳೆಯದಾಗಲಿ, ಸಂಕಷ್ಟಗಳು ದೂರವಾಗಲಿ ಎಂದು ಪೂಜೆ ಮಾಡಿಸಲಿ. ಅದು ಬಿಟ್ಟು ದೇವರ ಮುಂದೆ ಫೋಟೋ ಇಟ್ಟು ಪೂಜೆ ಮಾಡಿರುವುದು ಎಷ್ಟು ಸರಿ ಎಂದು ಅನೇಕರು ಅಸಮಾಧಾನ ಹೊರಹಾಕಿದ್ದಾರೆ.
ಅರ್ಚಕ ಅಮಾನತು: ಕುರುಗೋಡು ಪಟ್ಟಣದ ಐತಿಹಾಸಿಕ ದೊಡ್ಡಬಸವೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ನಟ ದರ್ಶನ್ ತೂಗುದೀಪ ಅವರ ಭಾವಚಿತ್ರಗಳನ್ನು ಇರಿಸಿ, ಪೂಜಿಸಿದ ಆರೋಪದ ಮೇಲೆ ಅರ್ಚಕ ಜೀರ್ ಮಲ್ಲಿಕಾರ್ಜುನ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ದೇವಸ್ಥಾನ ಮಂಡಳಿ ಆದೇಶ ಹೊರಡಿಸಿದೆ.
'ಗರ್ಭಗುಡಿಯ ಮೂಲ ವಿಗ್ರಹದ ಮುಂಭಾಗದಲ್ಲಿ ನಟ ದರ್ಶನ್ ಅವರ ವಿವಿಧ ಭಂಗಿಯ ಆರು ಚಿತ್ರಗಳನ್ನು ಇರಿಸಿ ವಿಶೇಷ ಪೂಜೆ ನೆರವೇರಿಸಿದ ವಿಡಿಯೊ ಸೋಮವಾರ ಜಾಲತಾಣದಲ್ಲಿ ಹರಿದಾಡಿತ್ತು. ಇದಕ್ಕೆ ಭಕ್ತರಿಂದ ಟೀಕೆ ವ್ಯಕ್ತವಾಗಿತ್ತು. ದೇವಸ್ಥಾನದ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ' ಎಂದು ದೇವಸ್ಥಾನದ ಆಡಳಿತಾಧಿಕಾರಿ ಹನುಮಂತಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ: ಜೈಲಿನಲ್ಲಿರುವ ನಟ ದರ್ಶನ್ ಭೇಟಿಯಾಗಿದ್ದು ಒಟ್ಟು 30 ಮಂದಿ: ಯಾರೆಲ್ಲಾ ಗೊತ್ತಾ? - Darshan
ಜೈಲಿನಲ್ಲಿರುವ ದರ್ಶನ್ ಭೇಟಿಯಾದವರೆಷ್ಟು? ದರ್ಶನ್ ಅವರ ನ್ಯಾಯಾಂಗ ಬಂಧನ ಮುಂದುವರಿದಿದೆ. ಆಗಸ್ಟ್ 14ರವರೆಗೆ ಜುಡಿಷಿಯಲ್ ಕಸ್ಟಡಿಯನ್ನು ಮುಂದುವರಿಸಲಾಗಿದೆ. ಜೈಲುದಿನಗಳನ್ನು ದೂಡುತ್ತಿರುವ ದರ್ಶನ್ ಅವರನ್ನು ಮಾತನಾಡಿಸಲು ಪರಪ್ಪನ ಅಗ್ರಹಾರ ಜೈಲಿಗೆ ಹೆಂಡತಿ, ಮಗ, ಸಂಬಂಧಿಕರು ಹಾಗೂ ಉದ್ಯಮದ ಸ್ನೇಹಿತರು ಭೇಟಿ ನೀಡಿರುತ್ತಾರೆ. ಆರ್ಟಿಐ ಮೂಲಕ ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಎಂಬಾತರು ಸಲ್ಲಿಸಿದ್ದ ಅರ್ಜಿಗೆ ಕಾರಾಗೃಹ ಇಲಾಖೆ ಮಾಹಿತಿ ಒದಗಿಸಿದೆ. ಜೂನ್ 25 ರಿಂದ ಜುಲೈ 26ರ ವರೆಗೆ ಒಟ್ಟು 30 ಮಂದಿ ನಟ ದರ್ಶನ್ ಸಲುವಾಗಿ ಜೈಲಿಗೆ ಭೇಟಿ ನೀಡಿರುತ್ತಾರೆ.
ನ್ಯಾಯಾಂಗ ಬಂಧನ ವಿಸ್ತರಣೆ: ಆಗಸ್ಟ್ 1ರಂದು ಪ್ರಕರಣ ಸಂಬಂಧ ವಿಚಾರಣೆ ನಡೆದಿತ್ತು. ವಿಚಾರಣೆ ಬಳಿಕ 24ನೇ ಎಸಿಎಂಎಂ ನ್ಯಾಯಾಲಯ, ನಟನ ನ್ಯಾಯಾಂಗ ಬಂಧನವನ್ನು ಆಗಸ್ಟ್ 14ರ ವರೆಗೆ ವಿಸ್ತರಿಸಿ ಆದೇಶ ಹೊರಡಿಸಿತ್ತು. ರೇಣುಕಾಸ್ವಾಮಿ ಕೊಲೆ ಪ್ರಕರಣ ತನಿಖಾ ಹಂತದಲ್ಲಿದೆ. ಈ ಸಂದರ್ಭ ಜಾಮೀನು ಒದಗಿಸಿದರೆ, ಸಾಕ್ಷ್ಯನಾಶದ ಸಾಧ್ಯತೆ ಇರುತ್ತದೆ ಎಂದು ಜಾಮೀನು ಮಂಜೂರಾತಿಗೆ ಆಕ್ಷೇಪಿಸಿ ಪ್ರಮುಖ 11 ಅಂಶಗಳನ್ನು ಸರ್ಕಾರದ ಪರ ವಕೀಲರು ನ್ಯಾಯಾಲಯದಲ್ಲಿ ತಿಳಿಸಿದ್ದರು. ಬಳಿಕ ದರ್ಶನ್ನ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಯಿತು.