ಕರ್ನಾಟಕ

karnataka

ಮರುಕಳಿಸಿದ ಹಿಂಸಾಚಾರ: ಜಾಗರೂಕರಾಗಿರುವಂತೆ ಬಾಂಗ್ಲಾದೇಶದಲ್ಲಿನ ಭಾರತೀಯರಿಗೆ ಸೂಚನೆ - India issues advisory

By ETV Bharat Karnataka Team

Published : Aug 4, 2024, 5:05 PM IST

ಬಾಂಗ್ಲಾದೇಶದಲ್ಲಿ ಹಿಂಸಾಚಾರ ಮತ್ತೆ ಆರಂಭವಾಗಿರುವುದರಿಂದ ಅಲ್ಲಿ ವಾಸಿಸುವ ಭಾರತೀಯ ಪ್ರಜೆಗಳು ಜಾಗರೂಕರಾಗಿರುವಂತೆ ರಾಯಭಾರ ಕಚೇರಿ ಸಲಹೆ ನೀಡಿದೆ.

ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ಒಂದು ದೃಶ್ಯ
ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ಒಂದು ದೃಶ್ಯ (IANS)

ಢಾಕಾ : ಸಿಲ್ಹೆಟ್​ ನಗರದಲ್ಲಿ ವಿದ್ಯಾರ್ಥಿಗಳ ಹಿಂಸಾತ್ಮಕ ಪ್ರತಿಭಟನೆ ಪುನರಾರಂಭಗೊಂಡಿರುವುದರಿಂದ ಬಾಂಗ್ಲಾದೇಶದಲ್ಲಿ ವಾಸಿಸುತ್ತಿರುವ ಭಾರತೀಯ ಪ್ರಜೆಗಳು ಎಚ್ಚರಿಕೆ ವಹಿಸಬೇಕು ಎಂದು ಬಾಂಗ್ಲಾದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿ ರವಿವಾರ ಸಲಹೆ ನೀಡಿದೆ. ಮೀಸಲಾತಿಯ ವಿರುದ್ಧ ಬಾಂಗ್ಲಾದೇಶದಲ್ಲಿ ಪ್ರತಿಭಟನೆಗಳು ಮತ್ತೆ ಆರಂಭವಾಗಿದ್ದು, ಓರ್ವ ಪ್ರತಿಭಟನಾಕಾರನಿಗೆ ಒಬ್ಬರಿಗೆ ಗುಂಡು ತಗುಲಿದ್ದು, ಆತನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

"ಸಿಲ್ಹೆಟ್​ನ ಸಹಾಯಕ ಹೈಕಮಿಷನ್ ವ್ಯಾಪ್ತಿಯಲ್ಲಿ ವಾಸಿಸುವ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಭಾರತೀಯ ಪ್ರಜೆಗಳು ಈ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ವಿನಂತಿಸಲಾಗಿದೆ ಮತ್ತು ಜಾಗರೂಕರಾಗಿರಲು ಸೂಚಿಸಲಾಗಿದೆ" ಎಂದು ಸಹಾಯಕ ಹೈಕಮಿಷನ್ ಆಫ್ ಇಂಡಿಯಾ (ಎಎಚ್​ಸಿಐ) ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್​ ಮಾಡಿ ತಿಳಿಸಿದೆ. ತುರ್ತು ಪರಿಸ್ಥಿತಿಗಳಿಗಾಗಿ ಸಹಾಯವಾಣಿ ಸಂಖ್ಯೆಯನ್ನು ಸಹ ಶೇರ್ ಮಾಡಲಾಗಿದೆ.

ಎಎಚ್​​ಸಿಐ ಇದು ಸಿಲ್ಹೆಟ್​ನಲ್ಲಿರುವ ಭಾರತ ಸರ್ಕಾರದ ಪ್ರತಿನಿಧಿ ಕಚೇರಿಯಾಗಿದೆ ಮತ್ತು ಅದರ ಕಾನ್ಸುಲರ್ ನ್ಯಾಯವ್ಯಾಪ್ತಿಯಲ್ಲಿ (ಸಿಲ್ಹೆಟ್, ಮೌಲ್ವಿಬಜಾರ್, ಸುನಮ್ ಗಂಜ್, ಹಬಿಗಂಜ್, ಕಿಶೋರ್​ ಗಂಜ್ ಮತ್ತು ನೆಟೊರೊಕೋನ ಜಿಲ್ಲೆಗಳು), ದ್ವಿಪಕ್ಷೀಯ ವ್ಯಾಪಾರ, ಸಂಸ್ಕೃತಿ ಇತ್ಯಾದಿಗಳ ಉತ್ತೇಜನಕ್ಕಾಗಿ ವೀಸಾ ವಿತರಣೆ ಮತ್ತು ಭಾರತೀಯ ಪ್ರಜೆಗಳ ಕಲ್ಯಾಣಕ್ಕೆ ಜವಾಬ್ದಾರವಾಗಿದೆ. ಎಎಚ್​ಸಿಐ ಢಾಕಾದ ಭಾರತೀಯ ಹೈಕಮಿಷನ್​​ನ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತದೆ.

ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ಸರ್ಕಾರಿ ಉದ್ಯೋಗ ಕೋಟಾ ಕುರಿತು ಪ್ರತಿಭಟನೆ ಮುಂದುವರಿದಿದ್ದು, ಬಾಂಗ್ಲಾದೇಶದಲ್ಲಿ ಪ್ರತಿಭಟನಾಕಾರರು ಮತ್ತು ಆಡಳಿತಾರೂಢ ಅವಾಮಿ ಲೀಗ್ ಬೆಂಬಲಿಗರ ನಡುವೆ ಭಾನುವಾರ ನಡೆದ ಭೀಕರ ಘರ್ಷಣೆಯಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ ಮತ್ತು ಡಜನ್​​ಗಟ್ಟಲೆ ಜನರು ಗಾಯಗೊಂಡಿದ್ದಾರೆ.

1971 ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದವರ ಸಂಬಂಧಿಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇಕಡಾ 30 ರಷ್ಟು ಮೀಸಲಾತಿ ನೀಡುವ ವಿವಾದಾತ್ಮಕ ಕೋಟಾ ವ್ಯವಸ್ಥೆಯನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ಪೊಲೀಸರು ಮತ್ತು ಹೆಚ್ಚಾಗಿ ವಿದ್ಯಾರ್ಥಿ ಪ್ರತಿಭಟನಾಕಾರರ ನಡುವಿನ ಹಿಂಸಾತ್ಮಕ ಘರ್ಷಣೆಗಳಲ್ಲಿ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಕೆಲ ದಿನಗಳ ನಂತರ ಹೊಸ ಸುತ್ತಿನ ಘರ್ಷಣೆಗಳು ಭುಗಿಲೆದ್ದಿವೆ.

ಭಾನುವಾರ ಸಂಜೆ 6 ಗಂಟೆಯಿಂದ ದೇಶಾದ್ಯಂತ ಅನಿರ್ದಿಷ್ಟ ಕರ್ಫ್ಯೂ ವಿಧಿಸಲು ಗೃಹ ಸಚಿವಾಲಯ ನಿರ್ಧರಿಸಿದೆ. ಏತನ್ಮಧ್ಯೆ, ಪ್ರತಿಭಟನೆಯ ಹೆಸರಿನಲ್ಲಿ ಬಾಂಗ್ಲಾದೇಶದಾದ್ಯಂತ ವಿಧ್ವಂಸಕ ಕೃತ್ಯದಲ್ಲಿ ತೊಡಗಿರುವವರು ವಿದ್ಯಾರ್ಥಿಗಳಲ್ಲ, ಅವರು ಭಯೋತ್ಪಾದಕರು ಎಂದು ಪ್ರಧಾನಿ ಹಸೀನಾ ಹೇಳಿದ್ದಾರೆ.

ಇದನ್ನೂ ಓದಿ : ಟ್ರಂಪ್ ಅಧ್ಯಕ್ಷೀಯ ಚರ್ಚೆಯ ಆಹ್ವಾನ ತಿರಸ್ಕರಿಸಿದ ಕಮಲಾ ಹ್ಯಾರಿಸ್ - US Presidential Election

ABOUT THE AUTHOR

...view details