thumbnail

By

Published : Jul 8, 2023, 7:46 PM IST

ETV Bharat / Videos

ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ವಿಜಯಪುರ ಯೋಧನ ಅಂತ್ಯಕ್ರಿಯೆ: ವಿಡಿಯೋ

ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಯೋಧ ರಾಜಶೇಖರ ಮುಜಗೊಂಡ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಇಂದು ನೆರವೇರಿತು. ಪುಣೆಯ ಮಿಲಿಟರಿ ಆಸ್ಪತ್ರೆಯಲ್ಲಿ ಶುಕ್ರವಾರ ಅನಾರೋಗ್ಯದಿಂದ ಮೃತಪಟ್ಟಿದ್ದ ಯೋಧ ರಾಜಶೇಖರ ಮುಜಗೊಂಡ ಪಾರ್ಥಿವ ಶರೀರವನ್ನು ಇಂದು ಬೆಳಗ್ಗೆ ಸ್ವಗ್ರಾಮ ಲಚ್ಯಾಣಕ್ಕೆ ತರಲಾಯಿತು. 

ಪಾರ್ಥಿವ ಶರೀರವನ್ನು ಗ್ರಾಮಕ್ಕೆ ತರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಯೋಧನ ಅಗಲಿಕೆಗೆ ತಂದೆ ಶರಣಪ್ಪ, ತಾಯಿ ಸುಶೀಲಾಬಾಯಿ, ಸಹೋದರರಾದ ಸೈನಿಕ ಸುರೇಶ, ಸಾರಿಗೆ ಸಂಸ್ಥೆಯ ವಾಹನ ಚಾಲಕ ಗುರುನಾಥ ಹಾಗೂ ಬಂಧು ಬಳಗದವರು ಕಣ್ಣೀರಿಟ್ಟರು. ಯೋಧನ ಪಾರ್ಥಿವ ಶರೀರದ ದರ್ಶನಕ್ಕೂ ಮುನ್ನ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಸಿದರು.

ನಂತರ ಪ್ರೌಢಶಾಲಾ ಆವರಣದಲ್ಲಿ ಯೋಧನ ಪಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಈ ಸಂದರ್ಭದಲ್ಲಿ ಲಚ್ಯಾಣ ಹಾಗೂ ಬಂಥನಾಳ ಮಠದ ಪೀಠಾಧೀಶ ಡಾ. ವೃಷಭಲಿಂಗ ಮಹಾಶಿವಯೋಗಿಗಳು, ಶಾಸಕ ಯಶವಂತರಾಯಗೌಡ ಪಾಟೀಲ, ತಹಸೀಲ್ದಾರ್ ನಾಗೇಂದ್ರ ಹಿರೇಮಠ, ಮಾಜಿ ಸೈನಿಕರು, ಗ್ರಾಮದ ಗಣ್ಯರು ಹೂವಿನಮಾಲೆ ಹಾಕಿ ಗೌರವ ಸಲ್ಲಿಸಿದರು. 

ನಂತರ ಮಿಲಿಟರಿ ಪಡೆ ಹಾಗೂ ಸಶಸ್ತ್ರ ಮೀಸಲು ಪಡೆ ತಂಡದವರು ಗಾಳಿಯಲ್ಲಿ ಮೂರು ಸುತ್ತಿನ ಗುಂಡು ಹಾರಿಸುವ ಮೂಲಕ ಹುತಾತ್ಮ ಯೋಧನಿಗೆ ಗೌರವ ಸಮರ್ಪಿಸಿದರು. ಜಿಲ್ಲಾಡಳಿತ ಹಾಗೂ ತಾಲೂಕಾಡಳಿತದ ನೇತೃತ್ವದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಹಾಗೂ ಕುಟುಂಬದ ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಹುತಾತ್ಮ ಯೋಧ ರಾಜಶೇಖರನ ಅಂತ್ಯಕ್ರಿಯೆ ನೆರವೇರಿತು.

ಇದನ್ನೂ ಓದಿ: ಅಂಧತ್ವ ಮೆಟ್ಟಿ ನಿಂತ ಬೆಳಗಾವಿ ಯುವಕ: ಸರಾಗವಾಗಿ ಕಂಪ್ಯೂಟರ್​ನಲ್ಲೇ ಕೆಲಸ ಮಾಡುವ ವಿಶೇಷ ಚೇತನ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.