ಕರ್ನಾಟಕ

karnataka

ETV Bharat / entertainment

'ಕಸ್ಟಡಿ' ಸಿನಿಮಾದಲ್ಲಿ ಮತ್ತೆ ಖಡಕ್ ಪೊಲೀಸ್ ಅಧಿಕಾರಿಯಾದ 'ಭೀಮ' ಗಿರಿಜಾ

'ಕಸ್ಟಡಿ' ಸಿನಿಮಾದಲ್ಲಿ 'ಭೀಮ' ಸಿನಿಮಾ ನಟಿ ಪ್ರಿಯಾ ನಟಿಸುತ್ತಿದ್ದಾರೆ. ಚಿತ್ರತಂಡವು ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದೆ.

custody movie
ಕಸ್ಟಡಿ ಸಿನಿಮಾದಲ್ಲಿ ನಟಿ ಪ್ರಿಯಾ (Cinema Team)

By ETV Bharat Karnataka Team

Published : 5 hours ago

'ಭೀಮ' ಚಿತ್ರದಲ್ಲಿ ಗಿರಿಜಾ ಎಂಬ ಖಡಕ್ ಲೇಡಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಗಮನ ಸೆಳೆದ‌ ಪ್ರಿಯಾ ಇದೀಗ 'ಕಸ್ಟಡಿ' ಎಂಬ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ. ಜೆ.ಜೆ. ಶ್ರೀನಿವಾಸ್ ನಿರ್ದೇಶನದ ಈ ಚಿತ್ರದ ಶೂಟಿಂಗ್​ ಬೆಂಗಳೂರಿನ ಟೊರಿನೊ ಫ್ಯಾಕ್ಟರಿ ಆವರಣದಲ್ಲಿ ನಡೆಯುತ್ತಿದೆ. ಸಿನಿಮಾ ಬಗ್ಗೆ ಚಿತ್ರತಂಡ ಕೆಲ ಮಾಹಿತಿ ಹಂಚಿಕೊಂಡಿದೆ.

ನಿರ್ದೇಶಕ ಜೆ.ಜೆ. ಶ್ರೀನಿವಾಸ್ ಮಾತನಾಡಿ, 'ಕಸ್ಟಡಿಯು ಸೈಬರ್ ಕ್ರೈಂ ಕುರಿತಾದ ಕಥಾಹಂದರ ಹೊಂದಿರುವ ಚಿತ್ರ. ಮಕ್ಕಳಿಂದ ವೃದ್ಧರವರೆಗೂ ಎಲ್ಲರೂ ಬಳಸುವ ಮೊಬೈಲ್ ಸುತ್ತ ಈ ಚಿತ್ರದ ಕಥೆ ನಡೆಯುತ್ತದೆ‌. ಸೈಬರ್ ಕ್ರೈಂ ಕುರಿತಾದ ಕಥೆಗಳು ಸಾಕಷ್ಟು ಬಂದಿವೆಯಾದರೂ ಈ ಕಥೆ ಸ್ವಲ್ಪ ವಿಭಿನ್ನವಾಗಿದೆ. ಒಂದು ವರ್ಷದ ಹಿಂದೆ ಚಿತ್ರದ ಕಥೆ ಸಿದ್ಧವಾಗಿತ್ತು. ಖಡಕ್ ಪೊಲೀಸ್ ಅಧಿಕಾರಿ ಪಾತ್ರದ ಅನ್ವೇಷಣೆಯಲ್ಲಿದ್ದಾಗ 'ಭೀಮ' ಖ್ಯಾತಿಯ ಪ್ರಿಯಾ ಅವರು ಈ ಪಾತ್ರ ಮಾಡಬಹುದು ಅನಿಸಿತು‌. ಪ್ರಿಯಾ ಅವರು ಕಥೆ ಕೇಳಿ ಒಪ್ಪಿಕೊಂಡರು. ಕೆಲವೇ ದಿನಗಳಲ್ಲಿ ಚಿತ್ರೀಕರಣ ಆರಂಭಿಸಲಾಯಿತು. ಈಗ ಚಿತ್ರೀಕರಣ ಮುಕ್ತಾಯದ ಹಂತ ತಲುಪಿದೆ‌. ಕಾಕ್ರೋಜ್ ಸುಧೀ ಸಹ ಈ ಚಿತ್ರದ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ‌. ನಾನು ಸಹ ನಿರ್ದೇಶನದ ಜೊತೆಗೆ ಅಭಿನಯಿಸುತ್ತಿದ್ದೇನೆ'' ಎಂದು ತಿಳಿಸಿದರು.

ನಟಿ ಪ್ರಿಯಾ ಹಾಗೂ ಚಿತ್ರತಂಡ (Cinema Team)

ಶೂಟಿಂಗ್ ಚೆನ್ನಾಗಿ ನಡೆಯುತ್ತಿದೆ:ನಿರ್ಮಾಪಕ ನಾಗೇಶ್ ಕುಮಾರ್ ಯು.ಎಸ್ ಮಾತನಾಡಿ, ''ನಮ್ಮ ಸಂಸ್ಥೆಯ ಮೂಲಕ "ಗಜಾನನ ಗ್ಯಾಂಗ್" ಸೇರಿದಂತೆ ನಾಲ್ಕು ಚಿತ್ರಗಳನ್ನು ನಿರ್ಮಿಸಿದ್ದೇನೆ. "ಕಸ್ಟಡಿ" ಐದನೇ ಚಿತ್ರ. ಸ್ನೇಹಿತ ಜೆ.ಜೆ. ಶ್ರೀನಿವಾಸ್, ಈ ಚಿತ್ರದ ಕಥೆ ಹೇಳಿದರು. ಕಥೆ ಇಷ್ಟವಾಯಿತು. ಈ ಚಿತ್ರದ ಪ್ರಮುಖಪಾತ್ರವನ್ನು ಭೀಮ ಖ್ಯಾತಿಯ ಪ್ರಿಯಾ ಅವರು ಮಾಡಿದರೆ ಚೆನ್ನಾಗಿರುತ್ತದೆ ಎಂದರು. ಪ್ರಿಯಾ ಅವರ ಪತಿ ಅವಿನಾಶ್ ನನ್ನ ಮಿತ್ರ. ಅವರ ಮೂಲಕ ಪ್ರಿಯಾ ಅವರನ್ನು ಸಂಪರ್ಕ ಮಾಡಿ, ಈ ಚಿತ್ರದ ಕಥೆ ಹೇಳಲಾಯಿತು. ಅವರು ಒಪ್ಪಿಕೊಂಡು, ಸಿನಿಮಾ ಮಾಡುತ್ತಿದ್ದಾರೆ. ಶೂಟಿಂಗ್ ಚೆನ್ನಾಗಿ ನಡೆಯುತ್ತಿದೆ'' ಎಂದರು.

ಕಸ್ಟಡಿ ಚಿತ್ರತಂಡ (Cinema Team)

ಅನ್ನದ ಋಣ ನನ್ನ ಮೇಲಿದೆ: ''ಭೀಮ ಚಿತ್ರದಲ್ಲಿ ನನ್ನ ಗಿರಿಜಾ ಪಾತ್ರಕ್ಕೆ ತಾವು ತೋರಿದ ಪ್ರೀತಿಗೆ ಧನ್ಯವಾದ. ಈ ಚಿತ್ರದಲ್ಲೂ ನಾನು ಖಡಕ್ ಪೊಲೀಸ್ ಅಧಿಕಾರಿ. ದುರ್ಗಾ ಪರಮೇಶ್ವರಿ ನನ್ನ ಪಾತ್ರದ ಹೆಸರು. ನಿರ್ದೇಶಕರು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಒಂದೊಳ್ಳೆ ಕಥೆ ಮಾಡಿಕೊಂಡಿದ್ದಾರೆ. ನಾನು ಈ ಚಿತ್ರ ಒಪ್ಪಿಕೊಳ್ಳಲು ಪ್ರಮುಖ ಕಾರಣ ಕಥೆ ಹಾಗೂ ನಿರ್ಮಾಪಕ ನಾಗೇಶ್ ಕುಮಾರ್ ಅವರು ನನ್ನ ರಂಗಭೂಮಿ ದಿನಗಳಲ್ಲಿ ರಂಗ ಕಲಾವಿದರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಅವರ ಅನ್ನದ ಋಣ ನನ್ನ ಮೇಲಿದೆ. ಭೀಮ ನಂತರ ನಾನು ಅಭಿನಯಿಸುತ್ತಿರುವ ಚಿತ್ರವಿದು'' ಎಂದು ಪ್ರಿಯಾ ಹೇಳಿದರು.

ನಟಿ ಪ್ರಿಯಾ ಮಾತನಾಡುತ್ತಿರುವುದು (Cinema Team)

ಚಿತ್ರದಲ್ಲಿ ಪ್ರಿಯಾ ಜೊತೆಗೆ, ನಾಗೇಂದ್ರ ಅರಸ್, ಚಿಂಗಾರಿ ಮಹಾದೇವ್, ಮ್ಯಾಜಿಕ್ ರಮೇಶ್, ಮಧು ಕೆ.ಆರ್ ಪೇಟೆ, ಪವನ್ ಕುಮಾರ್, ಆರಾಧ್ಯ, ಕುಮಾರ್ ಶ್ರೀನಿವಾಸಮೂರ್ತಿ, ವಿನ್ಯಾ, ಅಶ್ವಿತಾ, ಆರಾಧ್ಯ, ತೇಜಸ್ವಿನಿ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ. ಸಿನಿಮಾಕ್ಕೆ ಶಂಕರ್ ಕ್ಯಾಮರಾ ವರ್ಕ್ ಇದ್ದು, ಸ್ಟಂಟ್ ಮಾಸ್ಟರ್ ನರಸಿಂಹ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ‌ಬೃಂದಾವನ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಬ್ಯಾನರ್​​ನಲ್ಲಿ ತಯಾರಾಗುತ್ತಿರುವ ಕಸ್ಟಡಿ ಚಿತ್ರ, ಆದಷ್ಟು ಬೇಗ ಶೂಟಿಂಗ್ ಮುಗಿಸಿ, ಹೊಸ ವರ್ಷಕ್ಕೆ ಬಿಡುಗಡೆ ಆಗಲಿದೆ.

'ಕಸ್ಟಡಿ' ಸಿನಿಮಾ ತಂಡ (Cinema Team)

ಇದನ್ನೂ ಓದಿ:ಅಭಿನಯದ ಜೊತೆ ಲೇಖಕಿಯಾದ 'ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ' ನಟಿ

ABOUT THE AUTHOR

...view details