ಮಳೆಗೆ ಕೊಚ್ಚಿ ಹೋದ 20 ಕ್ವಿಂಟಾಲ್ ಫಿಶ್: ರಾಷ್ಟ್ರೀಯ ಹೆದ್ದಾರಿಯಲ್ಲಿ ಮೀನು ಹಿಡಿಯುತ್ತಿರುವ ಸ್ಥಳೀಯರು
ಒಡಿಶಾ : ಭಾರಿ ಮತ್ತು ನಿರಂತರ ಮಳೆಯಿಂದಾಗಿ ಮೀನುಗಾರಿಕೆ ಇಲಾಖೆಯ ಕೊಳಗಳು ಜಲಾವೃತಗೊಂಡಿದ್ದು ಸುಮಾರು 20 ಕ್ವಿಂಟಾಲ್ ಮೀನು ಕೊಚ್ಚಿ ಹೋಗಿದೆ. ಪರಿಣಾಮ ಬೌಧ್ ಪ್ರದೇಶದಲ್ಲಿ ಜಲಾವೃತಗೊಂಡ ರಾಷ್ಟ್ರೀಯ ಹೆದ್ದಾರಿ 57 ರಲ್ಲಿ ಸ್ಥಳೀಯರು ಮೀನು ಹಿಡಿಯುತ್ತಿದ್ದ ದೃಶ್ಯ ಕಂಡು ಬಂದಿತು. ಇದರಿಂದ ಕೆಲ ಕಾಲ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದ್ದು, ವಾಹನ ಸವಾರರು ಪರದಾಡಿದರು.
ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಮೀನುಗಾರಿಕಾ ಅಧಿಕಾರಿ ಲಿಪ್ಸಾ ಪಟ್ನಾಯಕ್, "ಭಾರಿ ಮಳೆಯಿಂದಾಗಿ ಸುಮಾರು ಎರಡು ಟನ್ ಮೀನುಗಳು ಕೊಚ್ಚಿಹೋಗಿವೆ. ಸುಮಾರು 9 ಲಕ್ಷ ರೂಪಾಯಿ ನಷ್ಟವಾಗಿದೆ" ಎಂದು ತಿಳಿಸಿದ್ದಾರೆ.
ಬೌಧ್ ಜಿಲ್ಲೆಯ ವಿವಿಧೆಡೆ ಕಳೆದ 24 ಗಂಟೆಗಳಲ್ಲಿ 390 ಮಿ.ಮೀ.ಗೂ ಹೆಚ್ಚು ಮಳೆಯಾಗಿದೆ. ಮಹಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹಲವೆಡೆ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಜಿಲ್ಲೆಯ ವಿವಿಧೆಡೆ ಭಾರಿ ಮಳೆಯಿಂದಾಗಿ ರಸ್ತೆ ಸಂಪರ್ಕ ಅಸ್ತವ್ಯಸ್ತಗೊಂಡಿದೆ. ಬ್ಲಾಕ್ ಕಚೇರಿ ಮುಂಭಾಗದ ಗಿರಿಜನ ಬಡಾವಣೆಯಲ್ಲಿ ಮಣ್ಣಿನ ಮನೆ ಕುಸಿದು 4 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಇದನ್ನೂ ಓದಿ : ದಡದಲ್ಲಿ ಸತ್ತು ಬಿದ್ದ ಬೃಹತ್ 24 ಅಡಿ ಉದ್ದದ ನೀಲಿ ತಿಮಿಂಗಿಲ.. ಪ್ರವಾಹಕ್ಕೆ ಕೊಚ್ಚಿ ಹೋದ ಕುರಿಗಳು!