ಬೆಂಗಳೂರು : ಹತ್ತಾರು ಜನರಿಂದ ಚೀಟಿ ಹಣ ಕಟ್ಟಿಸಿಕೊಂಡು ಕೋಟ್ಯಂತರ ರೂಪಾಯಿ ಹಣ ವಂಚಿಸಿದ್ದ ದಂಪತಿ ಸೇರಿ ಮೂವರನ್ನ ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಾಡುಗೋಡಿಯ ಬೆಳತೂರಿನಲ್ಲಿ ವಾಸವಾಗಿದ್ದ ಮಹದೇವಮ್ಮ, ಪತಿ ಚಂದ್ರಶೇಖರ್ ಹಾಗೂ ಪುತ್ರ ಸಾಗರ್ ಎಂಬುವರನ್ನ ಬಂಧಿಸಿ, ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.
ಹಣ ತೆಗೆದುಕೊಂಡು ರಾತ್ರೋರಾತ್ರಿ ಪರಾರಿ : ತಲಕಾಡು ಮೂಲದ ಮಹದೇವಮ್ಮ ಕುಟುಂಬ 10 ವರ್ಷಗಳಿಂದ ಬೆಳತೂರಿನ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಚಂದ್ರಶೇಖರ್ ಟಿವಿ ರಿಪೇರಿ ಕೆಲಸ ಮಾಡುತ್ತಿದ್ದರೆ, ಪತ್ನಿ ಗೃಹಿಣಿಯಾಗಿ ಚೀಟಿ ವ್ಯವಹಾರ ನಡೆಸುತ್ತಿದ್ದರು. 1 ರಿಂದ 10 ಲಕ್ಷ ರೂಪಾಯಿವರೆಗೆ ಚೀಟಿ ನಡೆಸುತ್ತಿದ್ದ ಮಹದೇವಮ್ಮ ಚೀಟಿ ಹಣ ತೆಗೆದುಕೊಂಡು ರಾತ್ರೋರಾತ್ರಿ ಪರಾರಿಯಾಗಿದ್ದರು. ಹಣ ಕಳೆದುಕೊಂಡವರು ನೀಡಿದ ದೂರಿನ ಮೇರೆಗೆ ಆರೋಪಿತರನ್ನ ಮೈಸೂರಿನಲ್ಲಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಹಲವು ವರ್ಷಗಳಿಂದ ಚೀಟಿ ವ್ಯವಹಾರ ನಡೆಸುತ್ತಿದ್ದ ಮಹದೇವಮ್ಮ ಕಳೆದ ಫೆಬ್ರವರಿಯಿಂದಲೂ ವಿವಿಧ ಕಾರಣಗಳನ್ನ ನೀಡಿ ಚೀಟಿ ಎತ್ತಲು ಅನುವು ಮಾಡಿಕೊಟ್ಟಿರಲಿಲ್ಲ. ಕಳೆದ ಎರಡು ತಿಂಗಳ ಹಿಂದೆ ರಾತ್ರೋರಾತ್ರಿ ಮನೆ ಖಾಲಿ ಮಾಡಿಕೊಂಡಿದ್ದ ಮಹದೇವಮ್ಮ ಚೀಟಿದಾರರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.
ಸುಮಾರು ಒಂದೂವರೆ ಕೋಟಿವರೆಗೂ ವಂಚನೆ : ಆತಂಕಗೊಂಡ ಚೀಟಿದಾರರು ದೂರು ನೀಡಿದ ಮೇರೆಗೆ ಆರೋಪಿತರನ್ನ ಬಂಧಿಸಲಾಗಿದೆ. ಸುಮಾರು ಒಂದೂವರೆ ಕೋಟಿವರೆಗೂ ವಂಚಿಸಿರುವ ಬಗ್ಗೆ ಮಾಹಿತಿಯಿದ್ದು, ಈ ಸಂಬಂಧ ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು: ಚೀಟಿ ಹೆಸರಿನಲ್ಲಿ ಚೀಟಿಂಗ್ ಆರೋಪ, ದಂಪತಿ ಬಂಧನ - Fraud Case