ಬೆಂಗಳೂರು : ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿಯ ಕಿತ್ತೂರಿನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಸಿದ್ದ ಬಾಬಾಸಾಬ್ ಪಾಟೀಲ್ ಇಂದು ಅಧಿಕೃತವಾಗಿ ಕಾಂಗ್ರೆಸ್ಗೆ ಸೇರ್ಪಡೆಗೊಂಡರು.
ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಶಾಲು ಹೊದಿಸಿ, ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಸತೀಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಮತ್ತಿತರ ಮುಖಂಡರು ಕಾರ್ಯಕ್ರಮದಲ್ಲಿದ್ದರು.
ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಸೋಮಣ್ಣ ಬೇವಿನಮರದ ಅವರು ಎಲ್ಲಾ ನಾಯಕರನ್ನು ಭೇಟಿ ಮಾಡಿ, ಸ್ಥಳೀಯ ನಾಯಕರನ್ನು ಕೇಳಿಕೊಂಡಾಗ ಎಲ್ಲರೂ ಒಪ್ಪಿದ ನಂತರ ಅವರನ್ನು ಸೇರ್ಪಡೆಗೊಳಿಸಲಾಗಿದೆ. ಸೋಮಣ್ಣ ಬೇವಿನಮರದ ಶಾಸಕರಾಗಿದ್ರು. ಎಂಎಲ್ಸಿ ಹಾಗೂ ಬಿಜೆಪಿ ಪ್ರ.ಕಾರ್ಯದರ್ಶಿಯಾಗಿದ್ದರು. ಈಗ ಯಾವುದೇ ಷರತ್ತು ಇಲ್ಲದೇ ನಮ್ಮ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತೇನೆ ಎಂದು ಮಾತು ಕೊಟ್ಟಿದ್ದು, ಪಕ್ಷವೂ ಇದಕ್ಕೆ ಒಪ್ಪಿಗೆ ಸೂಚಿಸಿ ಸೇರ್ಪಡೆಗೊಳಿಸಲಾಗಿದೆ ಎಂದರು.
ಓದಿ: ಸೋಮಣ್ಣ ಬೇವಿನಮರದ ಇಂದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ
ಟಿಕೆಟ್ ಕೊಡುವ ಹಕ್ಕು ನಮಗ್ಯಾರಿಗೂ ಇಲ್ಲ. ಸೋನಿಯಾ ಗಾಂಧಿಯವರಿಗೆ ಮಾತ್ರ ಇದೆ. ಹಾಗಾಗಿ ಯಾವುದೇ ಷರತ್ತಿಲ್ಲದೆ ಸೇರ್ಪಡೆಗೊಳಿಸಲಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಎಷ್ಟು ಶ್ರಮದಿಂದ ಕೆಲಸ ಮಾಡುತ್ತೀರಿ ಎನ್ನುವುದು ಮುಖ್ಯ. ಸೋಮಣ್ಣರ ಜೊತೆಗೂ ಇನ್ನೂರಕ್ಕೂ ಹೆಚ್ಚು ಮುಖಂಡರು ಪಕ್ಷ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು.
ಬಾಬಾಸಾಬ್ ಪಾಟೀಲ್ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು, ರೆಬೆಲ್ ಆಗಿ ವಿಧಾನಸಭಾ ಚುನಾವಣೆಗೆ ಕಿತ್ತೂರು ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸಿದ್ದರು. ಈಗ ಬಾಬಾಸಾಬ್ ಪಾಟೀಲರ ಜೊತೆ 13ಕ್ಕೂ ಹೆಚ್ಚು ಮಂದಿ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯರು ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದಾರೆ ಎಂದರು. ಜನತಾದಳದ ಮಾಜಿ ಜನರಲ್ ಸೆಕ್ರೆಟರಿ ಸಂಜಯ್ ಅವರನ್ನೂ ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು.