ಬೆಂಗಳೂರು: ಖಾಸಗಿ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ (ಕ್ಯಾಮ್ಸ್ ) ಶಶಿಕುಮಾರ್ ಮೇಲೆ ನಡೆದಿದ್ದ ಕೊಲೆ ಯತ್ನ ಪ್ರಕರಣ ಸಂಬಂಧ ಕೆಲ ದಿನಗಳ ಹಿಂದಷ್ಟೇ ಐವರು ಆರೋಪಿಗಳನ್ನು ಬಂಧಿಸಿದ್ದ ಜಾಲಹಳ್ಳಿ ಪೊಲೀಸರು ಇದೀಗ ಪ್ರಕರಣ ಕಿಂಗ್ಪಿನ್ ಸೇರಿದಂತೆ ಮತ್ತೆ ಏಳು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಶಿಕುಮಾರ್ ಕೊಲೆಗೆ ಸುಫಾರಿ ನೀಡಿದ್ದ ರವಿ ಅಲಿಯಾಸ್ ಆರ್ ಟಿಐ ರವಿ, ಸಹಚರರಾದ ಗಣೇಶ ಮನೋಹರ್, ಸುರೇಶ್, ಹಾಗೂ ಶ್ರೀನಿವಾಸನ್ ಹಾಗೂ ಸತ್ಯಮಂಗಲ ಅರಣ್ಯದಲ್ಲಿ ಆಶ್ರಯ ನೀಡಿದ್ದ ಚಿನ್ನರಸು ಎಂಬಾತನ್ನು ಬಂಧಿಸುವ ಮೂಲಕ ಪ್ರಕರಣದಲ್ಲಿ ಒಟ್ಟು 12 ಮಂದಿ ಆರೋಪಿಗಳನ್ನು ಬಂಧಿಸಿದಂತಾಗಿದೆ.
ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಕಳೆದ ತಿಂಗಳು 29ರ ರಾತ್ರಿ 9 ಗಂಟೆ ಸುಮಾರಿಗೆ ಜಾಲಹಳ್ಳಿ ನಿವಾಸದ ಬಳಿ ಕಾರಿನಿಂದ ಇಳಿಯುತ್ತಿದ್ದಾಗ ದುಷ್ಕರ್ಮಿಗಳು ಏಕಾಏಕಿ ಶಶಿಕುಮಾರ್ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಕೂಡಲೇ ಕಾರಿನಲ್ಲಿ ಕುಳಿತುಕೊಂಡ ಶಶಿಕುಮಾರ್ಗೆ ಸಣ್ಣಪುಟ್ಟ ಗಾಯವಾಗಿತ್ತು.
ಹೀಗಿತ್ತು ಬಂಧನ ಕಾರ್ಯಾಚರಣೆ: ಜೀವ ರಕ್ಷಣೆಗಾಗಿ ತಮ್ಮ ಬಳಿಯಿದ್ದ ಪಿಸ್ತೂಲ್ ತೆಗೆಯುತ್ತಿದ್ದಂತೆ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದರು. ಮಾಹಿತಿ ಆಧರಿಸಿ ಸ್ಥಳಕ್ಕೆ ಪೊಲೀಸರು ಬಂದು ಮಾಹಿತಿ ಕಲೆ ಹಾಕಿ ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಗಳ ಪತ್ತೆಗಾಗಿ ಎಸಿಪಿ ಅರುಣ್ ನಾಗೇಗೌಡ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಗುರುಪ್ರಸಾದ್ ಸಾರಥ್ಯದಲ್ಲಿ ನಾಲ್ಕು ವಿಶೇಷ ತಂಡ ರಚಿಸಿ ಚುರುಕಿನಿಂದ ತನಿಖೆ ನಡೆಸಿ ಐದು ಮಂದಿ ಆರೋಪಿಗಳಾದ ದೀಲಿಪ್, ಅಭಿಷೇಕ್, ಕಾರ್ತಿಕ್, ಭರತ್ ಹಾಗೂ ಪವನ್ ಬಂಧಿಸಲಾಗಿತ್ತು.
ಪರಾರಿಯಾಗಿದ್ದವರು ಕೊನೆಗೂ ಸಿಕ್ಕಿ ಬಿದ್ದರು: ಬಂಧಿತರಿಂದ ಪಿಸ್ತೂಲ್, ಮೂರು ಜೀವಂತ ಗುಂಡುಗಳು, ಮಾರಕಾಸ್ತ್ರಗಳು, ಡ್ರ್ಯಾಗರ್, ಪೆಪ್ಪರ್ ಸ್ಪ್ರೆ ಬಾಟೆಲ್ ಹಾಗೂ ಎರಡು ದ್ವಿಚಕ್ರ ವಾಹನ ಜಪ್ತಿ ಮಾಡಿಕೊಂಡಿದ್ದರು. ಕೃತ್ಯದಲ್ಲಿ ಪ್ರಮುಖ ಆರೋಪಿ ಲಗ್ಗೆರೆ ರವಿ ಸೇರಿದಂತೆ ಏಳು ಮಂದಿ ಆರೋಪಿಗಳು ಪರಾರಿಯಾಗಿದ್ದರು. ಈ ಸಂಬಂಧ ತನಿಖೆ ಮುಂದುವರೆಸಿದ ಪೊಲೀಸರು 40 ದಿನಗಳ ನಿರಂತರ ಕಾರ್ಯಾಚರಣೆ ಫಲವಾಗಿ ಚಾಮರಾಜನಗರದ ಸತ್ಯಮಂಗಲ ಫಾರೆಸ್ಟ್ ನಲ್ಲಿ ಅಡಗಿಕೊಂಡಿದ್ದ ಏಳು ಮಂದಿಗಳನ್ನು ಬಂಧಿಸಲಾಗಿದೆ. ಅಷ್ಟೇ ಅಲ್ಲ ಅವರಿಂದ ಕೃತ್ಯಕ್ಕೆ ಬಳಸಿದ್ದ ಎರಡು ಕಂಟ್ರಿಮೇಡ್ ಪಿಸ್ತೂಲ್, ಮೂರು ಖಾಲಿ ಮ್ಯಾಗಜೀನ್ ಗಳು, ಒಂದು ಕಾರು, ಎರಡು ದ್ವಿಚಕ್ರ ವಾಹನ ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ನಗರ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಬಂಧನ ಕಾರ್ಯಾಚರಣೆ ಮಾಹಿತಿ ನೀಡಿದ್ದಾರೆ.
ಕೊಲೆ ಯತ್ನಕ್ಕೆ ಕಾರಣವೇನು?: 2014 ರಿಂದ ಕರ್ನಾಟಕ ವಿದ್ಯಾರ್ಥಿ ಪೋಷಕರ ಜಾಗೃತಿ ವೇದಿಕೆ ಅಧ್ಯಕ್ಷನಾಗಿ ಗುರುತಿಸಿಕೊಂಡಿದ್ದ ಲಗ್ಗೆರೆ ರವಿ ರಾಜಗೋಪಾಲನಗರ ಠಾಣೆಯ ರೌಡಿಶೀಟರ್ ಆಗಿ ಕುಖ್ಯಾತಿ ಪಡೆದುಕೊಂಡಿದ್ದ. 2019 ರಲ್ಲಿ ವಿಜಯನಗರ ಠಾಣಾ ವ್ಯಾಪ್ತಿಯ ಶಾಲೆಯೊಂದರ ಪ್ರಿನ್ಸಿಪಾಲ್ ಆಗಿದ್ದ ವೀರಭದ್ರಯ್ಯ ಎಂಬುವರ ಅಪಹರಣ ಸೇರಿದಂತೆ ಮಾಗಡಿ ರೋಡ್, ವಿಜಯನಗರ ಹಾಗೂ ಕಾಮಾಕ್ಷಿಪಾಳ್ಯ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಏಳಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿವೆ. ರವಿ ವಿರುದ್ಧ ಪ್ರಕರಣವೊಂದರಲ್ಲಿ ಕೋಕಾ ಕಾಯ್ದೆಯಡಿ ಬಂಧಿಸಿ ರವಿ ಜೈಲು ಸೇರಿದ್ದ.
ಇನ್ನೊಂದಡೆ ಖಾಸಗಿ ಶಾಲೆಗಳ ಮಾಲೀಕರಿಂದ ಹಫ್ತಾ ವಸೂಲಿ ನಿಂತಿದ್ದರಿಂದ ಹಾಗೂ ಮರಳಿ ಹಣ ಪಡೆಯಲು ಯೋಜನೆ ರೂಪಿಸಿದ್ದ. ಅಲ್ಲದೇ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮುಗಿಸಿದರೆ ಇತರ ಖಾಸಗಿ ಶಾಲೆಗಳ ಮಾಲೀಕರು ಹಫ್ತಾ ನೀಡುತ್ತಾರೆ ಎಂದು ಭಾವಿಸಿದ್ದ. ಇದೇ ದುರುದ್ದೇಶದಿಂದ ಜೈಲಿನಲ್ಲಿದ್ದ ಎರಡನೇ ಆರೋಪಿ ದಿಲೀಪ್ನ ಪರಿಚಯಿಸಿಕೊಂಡು ಸಂಚು ರೂಪಿಸಿದ್ದ.. ರವಿ ಅಣತಿಯಂತೆ ದೀಲಿಪ್ ಸಹಚರರಿಗೆ ವಿಷಯ ತಿಳಿಸಿದ್ದಾನೆ. ಜಾಮೀನು ಪಡೆದು ಹೊರ ಬಂದಿದ್ದ ಆರೋಪಿಗಳು ಶಶಿಕುಮಾರ್ ಕೊಲೆ ಸಂಚು ರೂಪಿಸಿದ್ದರು.
ತಲೆಮರೆಸಿಕೊಂಡಿರುವಾಗಲೇ ಶಾಲಾ ಮುಖ್ಯಸ್ಥನ ಕೊಲೆಗೆ ಪ್ಲಾನ್: ಆರ್ ಟಿಐ ಮೂಲಕ ಖಾಸಗಿ ಶಾಲೆಗಳ ಮುಖ್ಯಸ್ಥರ ಹೆದರಿಸಿ ಹಣ ವಸೂಲಿ ಮಾಡ್ತಿದ್ದ ರವಿ, ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ನನ್ನು ಕೊಲೆ ಮಾಡಿದರೆ ಬೇರೆ ಶಾಲೆಯವರು ಹೆದರಿ ಹಣ ಕೊಡುತ್ತಾರೆ ಎಂಬ ದುರಾಸೆಯಿಂದ ಶಶಿಕುಮಾರ್ ಹತ್ಯೆಗೆ ಏಳು ತಿಂಗಳ ಹಿಂದೆಯೇ ಪ್ಲಾನ್ ಮಾಡಿದ್ದ. ಶಶಿಕುಮಾರ್ ಹತ್ಯೆಗಾಗಿಯೇ ಮೂರು ತಂಡ ಮಾಡಿಕೊಂಡಿದ್ದ. ಹಲ್ಲೆಯಿಂದ ತಪ್ಪಿಸಿಕೊಂಡು ಓಡಿ ಹೋದರೆ ಮತ್ತೆ ಅಟ್ಯಾಕ್ ಮಾಡಲು ರಸ್ತೆಯ ಎರಡೂ ಕಡೆ ಮತ್ತೆರಡು ತಂಡಗಳು ರೆಡಿ ಇತ್ತು ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ.
ಮತ್ತೊಬ್ಬನ ಕೊಲೆಗೆ ನಡೆದಿತ್ತು ಸ್ಕೆಚ್ : ಹತ್ಯೆ ಯತ್ನ ಮಾಡಿ ತಲೆಮರೆಸಿಕೊಂಡಿದ್ದ ಸಮಯದಲ್ಲೂ ಮತ್ತೊಬ್ಬ ಶಾಲೆ ಮುಖ್ಯಸ್ಥನ ಹತ್ಯೆಗೆ ಸ್ಕೆಚ್ ಹಾಕಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಶಶಿಕುಮಾರ್ ನೊಂದಿಗೆ ಗುರುತಿಸಿಕೊಂಡಿದ್ದ ಕಾಮಾಕ್ಷಿಪಾಳ್ಯದಲ್ಲಿರುವ ವಿದ್ಯಾನಿಕೇತನ ಶಾಲೆ ಮುಖ್ಯಸ್ಥ ಧನಂಜಯ್ ಕೊಲೆಗೆ ಸತ್ಯಮಂಗಲ ಫಾರೆಸ್ಟ್ ನಲ್ಲಿ ಇದ್ದುಕೊಂಡೇ ಹತ್ಯೆಗೆ ಸಂಚು ರೂಪಿಸಿಕೊಂಡಿದ್ದ. ಹಲವು ಬಾರಿ ಧನಂಜಯನನ್ನು ರವಿ ಸಹಚರರು ಹಿಂಬಾಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯಲ್ಲಿ ಪಿಸ್ತೂಲ್ ಇದ್ದರೂ ಬಳಸಲಿಲ್ಲ... : ಶಶಿಕುಮಾರ್ನನ್ನು ಮುಗಿಸಲೇಬೇಕೆಂದು ತೀರ್ಮಾನಿಸಿದ್ದ ರವಿ ಅಂಡ್ ಗ್ಯಾಂಗ್ 29 ರಂದು ರಾತ್ರಿ ಕೊಲೆ ಮಾಡಲು ನಿರ್ಧರಿಸಿದ್ದರು.. ಪ್ರತಿದಿನ ಸಾಕುನಾಯಿ ವಾಕ್ ಮಾಡಲು ಕರೆದುಕೊಂಡು ಬರುವಾಗ ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು. ಆದರೆ, ಆ ದಿನ ರಾತ್ರಿ ಬೇಗನೇ ಜಾಲಹಳ್ಳಿಯಿಂದ ಗಾಂಧಿನಗರ ನಿವಾಸಕ್ಕೆ ಹೋಗಲು ಕಾರು ಹತ್ತಿದ್ದ ಶಶಿಕುಮಾರ್ ನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು.. ಅಲ್ಲದೇ ಇದೇ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ದಿಲೀಪ್ ಉಳಿದುಕೊಂಡಿದ್ದ ಮನೆಯಲ್ಲಿ ಕಂಟ್ರಿಮೇಡ್ ಪಿಸ್ತೂಲ್ನಲ್ಲಿ ಮೂರು ಸಜೀವ ಗುಂಡುಗಳಿದ್ದರೂ ಇದನ್ನು ಬಳಸಲು ಬಾರದ ಕಾರಣ ಮಾರಕಾಸ್ತ್ರಗಳ ಮೊರೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.