ಭೋಪಾಲ್: ರಾಜ್ಯದ ಆರ್ಥಿಕ ಸ್ಥಿತಿ ಸುಧಾರಿಸಲು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕಾರ್ಮಿಕ ನೀತಿಗಳಲ್ಲಿ ವ್ಯಾಪಕ ಬದಲಾವಣೆಗಳನ್ನು ಪ್ರಕಟಿಸಿದ್ದಾರೆ.
ಕಾರ್ಮಿಕ ಕಾನೂನುಗಳಲ್ಲಿನ ಬದಲಾವಣೆಗಳನ್ನು ಫೇಸ್ಬುಕ್ನಲ್ಲಿ ಘೋಷಿಸಿರುವ ಚೌಹಾಣ್, ಕೈಗಾರಿಕೆಗಳಿಗೆ ಕೆಲವು ಪ್ರಮುಖ ರಿಯಾಯಿತಿಗಳನ್ನು ನೀಡಲು ಹಾಗೂ ಕಾರ್ಖಾನೆ ಮಾಲೀಕರು ಮತ್ತು ಕಾರ್ಮಿಕರ ನಡುವಿನ ಸಹಕಾರ ಮತ್ತು ಸಂಬಂಧವನ್ನು ಉತ್ತೇಜಿಸಲು ಈ ನವೀನ ಕ್ರಮವನ್ನು ಪರಿಚಯಿಸಿದ ದೇಶದ ಮೊದಲ ರಾಜ್ಯ ನಮ್ಮದು ಎಂದು ಹೇಳಿದ್ದಾರೆ.
ಕೊರೊನಾ ವೈರಸ್ನಿಂದ ಸೃಷ್ಟಿಯಾಗಿರುವ ಸನ್ನಿವೇಶವು ಸಾಮಾಜಿಕ ಅಂತರದ ಮಹತ್ವವನ್ನು ಒತ್ತಿಹೇಳಿದೆ. ಹೀಗಾಗಿ ಮಾರುಕಟ್ಟೆಗಳಲ್ಲಿ ಜನಸಂದಣಿಯನ್ನು ಕಡಿಮೆ ಮಾಡಲು, ಅಂಗಡಿಗಳ ವ್ಯವಹಾರದ ಸಮಯವನ್ನು ಬೆಳಗ್ಗೆ 6 ರಿಂದ ರಾತ್ರಿ 12 ರವರೆಗೆ ಪರಿಷ್ಕರಿಸಲಾಗುತ್ತದೆ. ಈ ಹಿಂದೆ ಬೆಳಗ್ಗೆ 8 ರಿಂದ ರಾತ್ರಿ 10ರವರೆಗೆ ಅವಕಾಶ ನೀಡಲಾಗಿತ್ತು. ಪರಿಷ್ಕ್ರತ ಸಮಯ ಪಾಲಿಸಲು ಅಧಿಸೂಚನೆ ಹೊರಡಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ಕಾರ್ಖಾನೆಗಳಲ್ಲಿನ ಕೆಲಸದ ಅವಧಿಯನ್ನು 8 ಗಂಟೆಯಿಂದ 12 ಗಂಟೆಗಳವರೆಗೆ ವಿಸ್ತರಿಸಲಾಗಿದೆ. ಕಾರ್ಖಾನೆ ಮಾಲೀಕರು ಈ ಶಿಫ್ಟ್ಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. 8 ಗಂಟೆಗಳ ನಂತರ ಕಾರ್ಮಿಕರು ಕೆಲಸ ಮುಂದುವರಿಸುವುದು ಅಥವಾ ಬಿಡುವುದು ಅವರ ವೈಯಕ್ತಿಕ ನಿರ್ಧಾರಕ್ಕೆ ಬಿಟ್ಟದ್ದು. ಒಬ್ಬ ಕಾರ್ಮಿಕನಿಗೆ ವಾರದಲ್ಲಿ 72 ಗಂಟೆಗಳ ಕಾಲ ಅಧಿಕ ಅವಧಿ ಕೆಲಸ ಮಾಡಲು ಸಾಧ್ಯ. ಆದ್ರೆ ಕಾರ್ಮಿಕರಿಗೆ ಅದರಂತೆ ವೇತನ ನೀಡಬೇಕಾಗುತ್ತದೆ. ಇದಕ್ಕಾಗಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.