ಬೆಂಗಳೂರು: ಚುನಾವಣಾ ಸಂದರ್ಭದಲ್ಲಿ ಮಾಧ್ಯಮಗಳ ಪಾತ್ರವು ಪ್ರಮುಖವಾಗಿದೆ. ಮತದಾನ ಪ್ರಾರಂಭವಾಗುವ 48 ಗಂಟೆಗೂ ಮುನ್ನ ಸಮೀಕ್ಷೆ ಮಾಡುವಂತಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಹೇಳಿದ್ದಾರೆ.
ಲೋಕಸಭಾ ಚುನಾವಣೆ - 2024ರ ಅಂಗವಾಗಿ ಇಂದು ವಾರ್ತಾ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ "ಚುನಾವಣಾ ಸಮಯದಲ್ಲಿ ಮಾಧ್ಯಮ" ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ಮುದ್ರಣ ಮಾಧ್ಯಮಗಳು ಆ ಸಂದರ್ಭದಲ್ಲಿ ಪ್ರಕಟಿಸುವ ಜಾಹೀರಾತುಗಳಿಗೆ ಆಯೋಗದ ಪೂರ್ವಾನುಮತಿ ಪಡೆಯಬೇಕು. ದೃಶ್ಯ ಮಾಧ್ಯಮಗಳು ಕೂಡ ಪ್ರಕಟಿಸುವ ಜಾಹೀರಾತಿಗೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.
ಎಂಸಿಎಂಸಿ ಸಮಿತಿಯ ಅನುಮತಿ ಪಡೆಯಬೇಕು. ಗುರುತಿಸಲ್ಪಟ್ಟ ಅಗತ್ಯ ಸೇವೆಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಅಂಚೆ ಮತದಾನದ ವ್ಯವಸ್ಥೆ ಮಾಡಲಾಗಿದ್ದು, ನೋಡೆಲ್ ಅಕಾರಿಗಳನ್ನು ಅದಕ್ಕಾಗಿ ನೇಮಿಸಲಾಗಿದೆ. ಲೋಕಸಭೆ ಚುನಾವಣೆ ನೀತಿ ಸಂಹಿತೆ ಮಾರ್ಚ್ 16 ರಿಂದಲೇ ದೇಶಾದ್ಯಂತ ಜಾರಿಗೆ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ರಾಜಕೀಯ ಜಾಹೀರಾತುಗಳಿಗೆ ಚುನಾವಣಾ ಆಯೋಗದ ಪೂರ್ವಾನುಮತಿ ಅಗತ್ಯ ಎಂದರು.
ರಾಜ್ಯ ಅಪರ ಮುಖ್ಯ ಚುನಾವಣಾಧಿಕಾರಿ ವೆಂಕಟೇಶ್ ಕುಮಾರ್ ಮಾತನಾಡಿ, ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನದಿಂದ ಕೊನೆಯ ಹಂತದ ಮತದಾನ ಮುಗಿಯುವವರೆಗೂ ಮತದಾರರ ವೈಯಕ್ತಿಕ ಮಾಹಿತಿ, ಮತಗಟ್ಟೆ ಅಭಿಪ್ರಾಯ ಸಂಗ್ರಹ ಅಥವಾ ಸಮೀಕ್ಷೆಯ ಮಾಹಿತಿ ಪ್ರಕಟಿಸುವಂತಿಲ್ಲ. ಹಾಗೊಂದು ವೇಳೆ ಮಾಡಿದರೆ ಅಪರಾಧವಾಗಲಿದೆ. ಒಬ್ಬರೇ ಅಭ್ಯರ್ಥಿ ಪರವಾಗಿ ಸುದ್ದಿ ಪ್ರಕಟಿಸಿದರೆ ಅದು ಪಾವತಿ ಸುದ್ದಿಯಾಗುತ್ತದೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಎರಡೂವರೆ ಸಾವಿರ ಪ್ರಕರಣಗಳು ದಾಖಲಾಗಿದ್ದವು ಎಂದು ಹೇಳಿದರು.
ಬರ ಪರಿಹಾರ ಕಾರ್ಯಗಳಿಗೆ ತೊಂದರೆ ಇಲ್ಲ: ಈಗಾಗಲೇ ರಾಜ್ಯದಲ್ಲಿ ಘೋಷಣೆ ಆಗಿರುವ ಬರಪೀಡಿತ ತಾಲೂಕುಗಳಲ್ಲಿ ಬೋರ್ವೆಲ್ ಕೊರೆಸುವುದು, ನೀರು ಪೂರೈಕೆಯಂತಹ ತುರ್ತು ಕಾರ್ಯಗಳಿಗೆ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ನೈಸರ್ಗಿಕ ವಿಕೋಪಕ್ಕೆ ಸಂಬಂಧಿಸಿದ ಸಭೆಯ ಹೊರತು ಬೇರೆ ರೀತಿಯ ಸಭೆಗಳನ್ನು ಮುಖ್ಯಮಂತ್ರಿಗಳು, ಸಚಿವರು ಮಾಡುವಂತಿಲ್ಲ. ಒಂದು ವೇಳೆ, ಅಗತ್ಯಬಿದ್ದರೆ ಮುಖ್ಯ ಚುನಾವಣಾಧಿಕಾರಿಗಳ ಅನುಮತಿ ಪಡೆಯಬೇಕು. ಸಾರ್ವಜನಿಕ ಜಾಥಾಗಳಲ್ಲಿ ವಾಹನಗಳ ಮಿತಿಯನ್ನು 10ಕ್ಕೆ ನಿಗದಿಗೊಳಿಸಲಾಗಿದೆ. ಜಾಹೀರಾತು ಪ್ರಕಟಣೆಗೆ ಆಯೋಗದ ಪೂರ್ವ ಪ್ರಮಾಣಿಕರಣವಾಗಬೇಕು. ಈಗಾಗಲೇ ರಾಜಕೀಯ ಪಕ್ಷಗಳಿಗೂ ನೀತಿ ಸಂಹಿತೆ ಪಾಲನೆ ಮಾಡಲು ಸೂಚನೆ ನೀಡಲಾಗಿದೆ ಎಂದರು.