ಕರ್ನಾಟಕ

karnataka

ಬೆಂಗಳೂರಿನ ಕೋರ್ಟ್​ಗೆ ಪ್ರಜ್ವಲ್ ರೇವಣ್ಣ ಹಾಜರು: ವಕೀಲರ ವಾದ - ಪ್ರತಿವಾದ ಹೇಗಿತ್ತು? - Prajwal Revanna produced in court

By ETV Bharat Karnataka Team

Published : May 31, 2024, 4:28 PM IST

Updated : May 31, 2024, 5:22 PM IST

ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡದ ಅಧಿಕಾರಿಗಳು ಹಾಜರು ಪಡಿಸಿದ್ದರು. ಈ ವೇಳೆ, ಎಸ್​ಐಟಿ ವಕೀಲರು ಮತ್ತು ಪ್ರಜ್ವಲ್ ಪರ ವಕೀಲರು ತಮ್ಮ ವಾದ, ಪ್ರತಿವಾದ ಮಂಡಿಸಿದರು.

Hassan MP Prajwal Revanna produced in Bengaluru court.
ಬೆಂಗಳೂರಿನ ಕೋರ್ಟ್​ಗೆ ಪ್ರಜ್ವಲ್ ರೇವಣ್ಣ ಹಾಜರು. (ETV Bharat)

ಬೆಂಗಳೂರು:ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಆರೋಪ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯದ ಮುಂದೆ ವಿಶೇಷ ತನಿಖಾ ತಂಡದ (ಎಸ್​ಐಟಿ) ಅಧಿಕಾರಿಗಳು ಹಾಜರು ಪಡಿಸಿದ್ದಾರೆ. ಆರೋಪಿಯನ್ನು ಎಸ್ಐಟಿ ವಶಕ್ಕೆ ನೀಡಬೇಕು ಎಂದು ಎಸ್ಐಟಿ ಪರ ವಕೀಲರು ಕೋರಿದ್ದರು. ಅಂತೆಯೇ, ಆರು ದಿನಗಳ ಕಾಲ ಎಸ್​ಐಟಿ ವಶಕ್ಕೆ ಕೋರ್ಟ್​ ನೀಡಿದೆ.

ಗುರುವಾರ-ಶುಕ್ರವಾರದ ಮಧ್ಯರಾತ್ರಿ ವಿದೇಶದಿಂದ ಪ್ರಜ್ವಲ್ ರೇವಣ್ಣ ಆಗಮಿಸುತ್ತಿದ್ದಂತೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಎಸ್​ಐಟಿ ಅಧಿಕಾರಿಗಳು ಅವರನ್ನು ಬಂಧಿಸಿದ್ದರು. ಇಂದು ನ್ಯಾಯಾಲಯಕ್ಕೆ ಆರೋಪಿಯನ್ನು ಅಧಿಕಾರಿಗಳು ಹಾಜರು ಪಡಿಸಿದರು. ಈ ವೇಳೆ ನ್ಯಾಯಾಧೀಶರು, ''ನಿಮ್ಮ ಹೆಸರೇನು, ಎಲ್ಲಿ ಬಂಧಿಸಿದರು'' ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ''ನನ್ನ ಹೆಸರು ಪ್ರಜ್ವಲ್, ರಾತ್ರಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದರು'' ಎಂದು ಹೇಳಿದರು.

ಈ ವೇಳೆ ಎಸ್ಐಟಿ ಪರ ವಕೀಲ ಅಶೋಕ್ ನಾಯಕ್, ''ಆರೋಪಿಯ ಮೊಬೈಲ್ ಮಾತ್ರ ಸಿಕ್ಕಿದೆ. ಅದರಲ್ಲಿ ಫೇಸ್ ಲಾಕ್ ಅಳವಡಿಸಲಾಗಿದೆ. ಅದನ್ನು ಪರಿಶೀಲನೆ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಎಸ್ಐಟಿ ವಶಕ್ಕೆ ನೀಡಬೇಕು'' ಎಂದು ಕೋರಿದರು. ಮುಂದುವರೆದು, ''ಇವರೊಬ್ಬ ವಿಕೃತಕಾಮಿಯಾಗಿದ್ದು, ಪ್ರಕರಣ ಬೆಳಕಿಗೆ ಬಂದ ತಕ್ಷಣ ತನಿಖೆಯಿಂದ ತಪ್ಪಿಸಿಕೊಳ್ಳಲು ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದರು'' ಎಂದೂ ವಕೀಲರು ನ್ಯಾಯಾಲಯದ ಗಮನ ಸೆಳೆದರು.

ಇಷ್ಟೇ ಅಲ್ಲ, ''ಈ ಆರೋಪಿ ವಿದೇಶಕ್ಕೆ ಪ್ರವಾಸಕ್ಕೆ ಹೋಗಿರುವುದಾಗಿ ಹೇಳಿದ್ದರು. ಈ ಹಿಂದೆ ಭಾರತಕ್ಕೆ ಬರಲು ಟಿಕೆಟ್ ಬುಕ್ ಮಾಡಿ ಬಳಿಕ ರದ್ದು ಮಾಡಿದ್ದಾರೆ. ಇನ್ನೇನು ವಿದೇಶದಲ್ಲಿ ಬಂಧಿಸುತ್ತಾರೆ ಎಂಬ ಅಂಶ ಗೊತ್ತಾದ ಹಿನ್ನೆಲೆಯಲ್ಲಿ ದೇಶಕ್ಕೆ ವಾಪಸ್ ಆಗಿದ್ದಾರೆ. ಪ್ರಕರಣದ ಸಮಂಜಸವಾದ ತನಿಖೆ ನಡೆಸಬೇಕಾಗುತ್ತದೆ. ಆದ್ದರಿಂದ ಎಸ್ಐಟಿ ವಶಕ್ಕೆ ನೀಡಬೇಕು . ಈ ಆರೋಪ ಜೀವಾವಧಿ ಶಿಕ್ಷೆ ನೀಡುವಂತಾಗಿದೆ'' ಎಂದು ಎಸ್​ಪಿಪಿ ಅಶೋಕ್ ನಾಯಕ್ ವಾದ ಮಂಡಿಸಿದರು.

ಮತ್ತೊಂದೆಡೆ, ಪ್ರಜ್ವಲ್ ಪರ ವಕೀಲ ಜಿ.ಅರುಣ್ ವಾದ ಮಂಡಿಸಿ, ಆರೋಪಿ ವಿರುದ್ಧ ದಾಖಲಾಗಿರುವ ಪ್ರಕರಣ ನಾಲ್ಕು ವರ್ಷದ ಹಿಂದಿನದ್ದಾಗಿದೆ. ಇದು ಜಾಮೀನು ಸಹಿತ ಆರೋಪ ಆಗಿದೆ. ವಿನಾಕಾರಣ ನಮ್ಮ ಕಕ್ಷಿದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದೂರನ್ನು ಸಿದ್ಧಪಡಿಸಿ ದಾಖಲಿಸಲಾಗಿದೆ. ಮಹಿಳಾ ಅಧಿಕಾರಿ ದೂರು ದಾಖಲಿಸಿಕೊಳ್ಳಬೇಕಾಗಿತ್ತು. ಎಲ್ಲ ಪ್ರಕ್ರಿಯೆ ವಿಡಿಯೋ ರೆಕಾರ್ಡ್ ಮಾಡಬೇಕಾಗಿತ್ತು. ವಿಚಾರಣೆ ವೇಳೆ ವಿಶೇಷ ಅಭಿಯೋಜಕರು ಅನಗತ್ಯ ಪದಗಳ ಬಳಕೆ ಮಾಡಿ ವಾದ ಮಂಡಿಸಿದ್ದಾರೆ'' ಎಂದು ಆಕ್ಷೇಪ ವ್ಯಕ್ತಪಡಿಸಿದರು.

''ಇಡೀ ಪ್ರಕರಣ ಜಾಮೀನು ನೀಡಬಹುದು. ಜೊತೆಗೆ, ವಿಡಿಯೋದಲ್ಲಿ ಇರುವ ಮಹಿಳೆಯರನ್ನು ವಿಚಾರಣೆಗೆ ಒಳಪಡಿಸಬೇಕು. ಆದ್ದರಿಂದ 15 ದಿನ ಎಸ್ಐಟಿ ವಶಕ್ಕೆ ಬೇಡ. ತನಿಖೆಗೆ ಸಹಕಾರ ನೀಡಲಿದ್ದಾರೆ. ಕೇವಲ ಒಂದು ದಿನ ಎಸ್ಐಟಿ ವಶಕ್ಕೆ ನೀಡಿದರೆ, ಸಾಕು'' ಎಂದು ಪೀಠಕ್ಕೆ ಪ್ರಜ್ವಲ್ ಪರ ವಕೀಲರು ಮನವಿ ಮಾಡಿದರು.

ಮತ್ತೊಂದೆಡೆ, ಎಸ್​ಪಿಪಿ ತಮ್ಮ ವಾದ ಮುದುವರೆಸಿ, ''ಆರೋಪಿ ಸಾಮಾನ್ಯ ವ್ಯಕ್ತಿಯಲ್ಲ. ಕಾನೂನು ಮಾಡುವ ಜನ ಪ್ರತಿನಿಧಿಯಾಗಿದ್ದಾರೆ. ವಿಚಾರಣೆ ಒಳಪಡಿಸಬೇಕು. ಈ ಮೊದಲು ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಅತ್ಯಾಚಾರ ಸೆಕ್ಷನ್ ಸೇರಿಸಲಾಗಿದೆ. ಹೀಗಾಗಿ ಅತ್ಯಾಚಾರ ಆರೋಪದಲ್ಲಿ ನೋಟಿಸ್ ಜಾರಿ ಮಾಡಲಾಗಿತ್ತು'' ಎಂದು ವಿವರಿಸಿದರು. ಎರಡೂ ಕಡೆಗಳ ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶರು ತಮ್ಮ ತೀರ್ಪನ್ನು ಸಂಜೆ 4:15ಕ್ಕೆ ಕಾಯ್ದಿಸಿದ್ದರು. ಬಳಿಕ ಬಂದು ಎಸ್​ಐಟಿ ವಶಕ್ಕೆ ಒಪ್ಪಿಸಿ ತಮ್ಮ ತೀರ್ಪು ಪ್ರಕಟಿಸಿದರು.

ಇದನ್ನೂ ಓದಿ:ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಹಿಳಾ ಪೊಲೀಸರಿಂದಲೇ ಪ್ರಜ್ವಲ್ ರೇವಣ್ಣ ಅರೆಸ್ಟ್​!

Last Updated : May 31, 2024, 5:22 PM IST

ABOUT THE AUTHOR

...view details