ಕರ್ನಾಟಕ

karnataka

'ಒಂದು ರೂಪಾಯಿ ಮುಟ್ಟಿಲ್ಲ, ಭ್ರಷ್ಟಾಚಾರ ಮಾಡಿಲ್ಲ': ಮಾರಿಗುಡಿಯಲ್ಲಿ ಶಾಸಕ ಹರೀಶ್ ಪೂಂಜಾ ಪ್ರಮಾಣ - Harish Poonja

By ETV Bharat Karnataka Team

Published : Aug 14, 2024, 7:53 PM IST

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಸಂತೆಕಟ್ಟೆಯಲ್ಲಿರುವ ಮಾರಿಗುಡಿ ಸನ್ನಿಧಾನದಲ್ಲಿ, ತಾನು ಭ್ರಷ್ಟಾಚಾರ ಎಸಗಿಲ್ಲ ಎಂದು ಇಂದು ಪ್ರಮಾಣ ಮಾಡಿ ತೆಂಗಿನಕಾಯಿ ಒಡೆದರು.

MLA Harish Poonja
ಬಿಜೆಪಿ ಶಾಸಕ ಹರೀಶ್ ಪೂಂಜಾ (ETV Bharat)

ಮಾರಿಗುಡಿಯಲ್ಲಿ ಶಾಸಕ ಹರೀಶ್ ಪೂಂಜಾ ಪ್ರಮಾಣ (ETV Bharat)

ಬೆಳ್ತಂಗಡಿ(ದಕ್ಷಿಣ ಕನ್ನಡ):ತಮ್ಮ ಮೇಲಿನ ಭ್ರಷ್ಟಾಚಾರ ಆರೋಪವನ್ನು ಅಲ್ಲಗಳೆದಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಇಲ್ಲಿನ ಸಂತೆಕಟ್ಟೆಯಲ್ಲಿರುವ ಮಾರಿಗುಡಿ ಸನ್ನಿಧಾನದಲ್ಲಿ ತಾನು 'ಒಂದು ರೂಪಾಯಿ ಮುಟ್ಟಿಲ್ಲ, ಭ್ರಷ್ಟಾಚಾರ ಮಾಡಿಲ್ಲ. ಒಂದು ವೇಳೆ ಭ್ರಷ್ಟಾಚಾರ ಮಾಡಿದ್ದು ಹೌದೇ ಆದಲ್ಲಿ ಮಾರಿಗುಡಿಯ ಮಹಾದೇವಿ ತಕ್ಕ ಶಿಕ್ಷೆ ನೀಡಲಿ' ಎಂದು ಪ್ರಮಾಣ ಮಾಡಿದ್ದಾರೆ.

ಬೆಳ್ತಂಗಡಿ ಪ್ರವಾಸಿ ಬಂಗಲೆ ನಿರ್ಮಾಣ ಹಾಗೂ ಹೆದ್ದಾರಿ ಕಾಮಗಾರಿಯಲ್ಲಿ ಶಾಸಕ ಹರೀಶ್ ಪೂಂಜಾ ಭ್ರಷ್ಟಾಚಾರ ಎಸಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಶಾಸಕರಿಗೆ 3 ಕೋಟಿ ಕಿಕ್ ಬ್ಯಾಕ್ ತಲುಪಿದೆ. 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ಬೆಳ್ತಂಗಡಿ ಪ್ರವಾಸಿ ಮಂದಿರದ ಕಾಮಗಾರಿ ಮುಗಿದ ಬಳಿಕ ವರ್ಕ್ ಆರ್ಡರ್ ಆಗಿದೆ. ಅಲ್ಲದೇ ಪ್ರವಾಸಿ ಮಂದಿರದ ಅನುದಾನವನ್ನು ಚುನಾವಣೆ ಪ್ರಚಾರಕ್ಕೆ ಬಳಸಲಾಗಿದೆ.

ಕಾಮಗಾರಿ ಪೂರ್ಣಗೊಂಡರೂ 2 ಕೋಟಿ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಇಡಲಾಗಿದೆ. ಈ ಮೂಲಕ ಶಾಸಕ ಹರೀಶ್ ಪೂಂಜಾ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಆರೋಪಿಸಿದ್ದರು. ಅಲ್ಲದೆ ಈ ಹಗರಣಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಎಸ್ಐಟಿ ತನಿಖೆಗೂ ಆಗ್ರಹಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಹರೀಶ್ ಪೂಂಜಾ ಬುಧವಾರ ಬೆಳಗ್ಗೆ ಮಾರಿಗುಡಿಗೆ ಬಂದು ತಾನು ಭ್ರಷ್ಟಾಚಾರ ಎಸಗಿಲ್ಲ ಎಂದು ಪ್ರಮಾಣ ಮಾಡಿ ತೆಂಗಿನಕಾಯಿ ಒಡೆದರು‌‌. ಅಲ್ಲದೇ ತಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ರಕ್ಷಿತ್ ಶಿವರಾಂ ಸೇರಿದಂತೆ ಎಲ್ಲರಿಗೂ ತಕ್ಕ ಶಿಕ್ಷೆ ನೀಡಲು ಪ್ರಾರ್ಥಿಸಿದರು.

ಈ ವೇಳೆ ಅವರೊಂದಿಗೆ ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್ ಧರ್ಮಸ್ಥಳ ಸೇರಿದಂತೆ ಉಳಿದ ನಾಯಕರು ಉಪಸ್ಥಿತರಿದ್ದರು.

ಇದನ್ನೂ ಓದಿ:ಬೆಳ್ತಂಗಡಿ ಠಾಣೆಗೆ ವಿಚಾರಣೆಗೆ ಹಾಜರಾದ ಬಿಜೆಪಿ ಶಾಸಕ ಹರೀಶ್ ಪೂಂಜ; ಸ್ಟೇಷನ್ ಜಾಮೀನಿನಲ್ಲಿ ಬಿಡುಗಡೆ - Harish Poonja Case

ABOUT THE AUTHOR

...view details