ಬೆಂಗಳೂರು: "ಬಿಜೆಪಿಯವರು ನೀತಿ ಪಾಠ ಹೇಳುವುದು, ನರಿಗಳು ಪಾಠ ಮಾಡುವುದು ಒಂದೇ" ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, "ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ ಬಿಕ್ಕಟ್ಟಿನಲ್ಲಿದೆ. ಪಕ್ಷದಲ್ಲಿ ಒಳಜಗಳ, ನಾಯಕತ್ವ ಕೊರತೆ ಎದ್ದು ಕಾಣುತ್ತಿದೆ. ನಾವು ಕನ್ನಡಿಗರ ಪರವಾಗಿ ಕೆಲಸ ಮಾಡುತ್ತಿದ್ದೇವೆ. ಅದರಿಂದ ಮೋದಿ ಸರ್ಕಾರಕ್ಕೆ ಪದೇ ಪದೆ ಮುಜುಗರವಾಗುತ್ತಿದೆ. ಬಿಜೆಪಿಯವರು ನಮ್ಮ ನಾಯಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಬಿಜೆಪಿ ಒಂದು ಎಸ್ಒಪಿ ಮಾಡಿದೆ. ಮೊದಲು ಸಿಬಿಐ ಕಳಿಸುತ್ತಾರೆ. ಐಟಿ ಕಳಿಸುತ್ತಾರೆ. ಬಳಿಕ ಇ.ಡಿ ಕಳಿಸುತ್ತಾರೆ. ಇದಾದ ಬಳಿಕ ಆಗಿಲ್ಲ ಅಂದರೆ ರಾಜ್ಯಪಾಲರ ಕಚೇರಿ ಬಳಸುತ್ತಾರೆ. ಬಿಜೆಪಿಯವರ ವಿಧಾನ ಬ್ಲ್ಯಾಕ್ ಮೇಲ್. ಖಾಸಗಿ ಕಂಪನಿಗಳನ್ನು ಹಾಗೂ ವಿಪಕ್ಷಗಳನ್ನು ಬ್ಲ್ಯಾಕ್ ಮೇಲ್ ಮಾಡುತ್ತಾರೆ" ಎಂದು ದೂರಿದರು.
"ಚುನಾವಣಾ ಬಾಂಡ್ ಹೆಸರಲ್ಲಿ ಸುಲಿಗೆ ನಡೆದಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಚುನಾವಣಾ ಬಾಂಡ್ನ್ನು ಮನಿ ಬಿಲ್ ಎಂದು ಜಾರಿಗೆ ತರಲಾಗಿದೆ. ಇದಕ್ಕೆ ಕ್ಯಾಪ್ ಹಾಕಬೇಕು ಎಂದು ನಾವು ಆವಾಗಲೇ ಹೇಳಿದ್ದೇವೆ. ಎಸ್ಬಿಐ ಮೂಲಕ ಬಾಂಡ್ ವಹಿವಾಟು ನಡೆಯುತ್ತದೆ. ಎಸ್ಬಿಐ ಕೇಂದ್ರ ಹಣಕಾಸು ಸಚಿವಾಲಯದ ಕೆಳಗೆ ಬರುತ್ತದೆ. 12,000 ಕೋಟಿ ರೂ. ಚುನಾವಣಾ ಬಾಂಡ್ ರಾಜಕೀಯ ಪಕ್ಷಗಳಿಗೆ ಹೋಗಿದ್ದು, ಇದರಲ್ಲಿ ಬಹುಪಾಲು ಬಿಜೆಪಿಗೆ ಹೋಗಿದೆ. 2,500 ಕೋಟಿ ಬಾಂಡ್ಗಳು ಅವರು ನೀಡಿದ ಅಂಕಿಅಂಶದಲ್ಲಿ ನಾಪತ್ತೆಯಾಗಿವೆ. ಟಾಪ್ 30 ಡೋನರ್ಸ್ಗಳಲ್ಲಿ ಬಹುತೇಕರ ಮೇಲೆ ಐಟಿ, ಇ.ಡಿ. ದಾಳಿ ಆಗಿದೆ. ಸುಮಾರು 17 ಕಂಪನಿಗಳಿಂದ ಬಿಜೆಪಿಗೆ ಸುಮಾರು 4,000 ಕೋಟಿ ರೂ.ಗೂ ಅಧಿಕ ಬಾಂಡ್ ಬಂದಿದೆ. ರೇಡ್ ಮಾಡಿದ ತಕ್ಷಣ ಬಾಂಡ್ ಖರೀದಿ ಹೆಚ್ಚಾಗುತ್ತದೆ" ಎಂದು ಸಚಿವ ಖರ್ಗೆ ಆರೋಪಿಸಿದರು.
"ಈ ಬಾಂಡ್ ಅಕ್ರಮ ಸಂಬಂಧ ಎನ್ ಜಿಒ ಕೋರ್ಟ್ಗೆ ಹೋಗಿದೆ. ಈ ಸಂಬಂಧ ಜನಪ್ರತಿನಿಧಿ ಕೋರ್ಟ್ ಸೂಚನೆ ಮೇರೆಗೆ ಸಚಿವೆ ನಿರ್ಮಲಾ ಸೀತಾರಾಮನ್, ಜೆ.ಪಿ. ನಡ್ಡಾ, ಬಿ.ವೈ. ವಿಜಯೇಂದ್ರ, ಇ.ಡಿ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಾಗಿದೆ. ಸಿದ್ದರಾಮಯ್ಯರಿಗೆ ರಾಜೀನಾಮೆ ಕೊಡಲು ಹೇಳುತ್ತಿದ್ದಾರೆ. ಆದರೆ, ಈಗ ಬಿಜೆಪಿ ನಾಯಕರ ಮೇಲೆನೇ ಎಫ್ ಐಆರ್ ದಾಖಲಾಗಿದೆ. ನೀವು ಹಾಗಾದರೆ ಖಾಲಿ ಮಾಡಬೇಕಲ್ವಾ?. ಬಾಂಡ್ ಖರೀದಿ ಮಾಡಿದ 33 ಕಂಪನಿಗಳಿಗೆ ಯಾವುದೇ ಲಾಭ ಇಲ್ಲ. ಆದರೂ ಈ ಕಂಪನಿಗಳು 576 ಕೋಟಿ ಬಾಂಡ್ ಖರೀದಿ ಮಾಡಿವೆ. ಈ 33 ಕಂಪನಿಗಳ ಒಟ್ಟು ನಷ್ಟವೇ ಸುಮಾರು 1 ಲಕ್ಷ ಕೋಟಿ ರೂ. ಆಗಿದೆ" ಎಂದು ಹೇಳಿದರು.