ಕರ್ನಾಟಕ

karnataka

ETV Bharat / state

ಮೇಕೆದಾಟು, ಮಹದಾಯಿ, ಭದ್ರಾ ಮೇಲ್ದಂಡೆ ಯೋಜನೆ ಒಪ್ಪಿಗೆಗಾಗಿ ಪಟ್ಟು: ಇಂದು ಕೇಂದ್ರ ಸಚಿವರ ಜೊತೆ ಡಿಸಿಎಂ ಚರ್ಚೆ - KARNATAKA RIVER PROJECTS

ಕೇಂದ್ರ ಜಲಶಕ್ತಿ ಸಚಿವರ ಜೊತೆ ಜಲಸಂಪನ್ಮೂಲ ಸಚಿವರಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಹತ್ವದ ಮಾತುಕತೆ ನಡೆಸಲಿದ್ದಾರೆ.

ಡಿಸಿಎಂ ಡಿಕೆಶಿವಕುಮಾರ್, DCM DK Shivakumar, Karnataka water projects
ಡಿಸಿಎಂ ಡಿಕೆಶಿವಕುಮಾರ್ (ETV Bharat)

By ETV Bharat Karnataka Team

Published : Feb 25, 2025, 10:07 AM IST

ಬೆಂಗಳೂರು: ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಅನುಷ್ಠಾನಕ್ಕೆ ತರಲಾಗದೇ ನೆನೆಗುದಿಗೆ ಬಿದ್ದಿರುವ ಮೇಕೆದಾಟು, ಮಹದಾಯಿ, ಭದ್ರಾ ಮೇಲ್ದಂಡೆ ಯೋಜನೆಗಳೂ ಸೇರಿದಂತೆ ಹಲವಾರು ನೀರಾವರಿ ಯೋಜನೆಗಳಿಗೆ ಕೇಂದ್ರ ಸರಕಾರದ ಒಪ್ಪಿಗೆ ಪಡೆಯುವ ಸಂಬಂಧ ಜಲಸಂಪನ್ಮೂಲ ಸಚಿವರಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಕೇಂದ್ರ ಜಲಶಕ್ತಿ ಸಚಿವರ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.

ದೆಹಲಿಯಲ್ಲಿ ಇಂದು ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡುವ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಬೆಳಗ್ಗೆ 11 ಗಂಟೆಗೆ ಸಮಯ ನಿಗದಿಯಾಗಿದೆ. ರಾಜ್ಯದ ಜಲ ಸಂಪನ್ಮೂಲ ಇಲಾಖೆ ಹಿರಿಯ ಅಧಿಕಾರಿಗಳು ನಿನ್ನೆಯೇ ದೆಹಲಿಗೆ ತೆರಳಿದ್ದು ಕೇಂದ್ರ ಜಲಶಕ್ತಿ ಸಚಿವರ ಭೇಟಿ ಸಂದರ್ಭದಲ್ಲಿ ನೀರಾವರಿ ಯೋಜನೆಗಳ ಬಗ್ಗೆ ಅಗತ್ಯ ಮಾಹಿತಿ ನೀಡುವ ಬಗ್ಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತ ನೀರಾವರಿ ಸಚಿವರ ಸಮ್ಮೇಳನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್. ಪಾಟೀಲ್ ಬಳಿ ರಾಜ್ಯದ ನೀರಾವರಿ ಸಮಸ್ಯೆಗಳನ್ನು ಪ್ರಸ್ತಾಪಿಸಿ ಈ ಬಗ್ಗೆ ಚರ್ಚೆಗೆ ಕಾಲಾವಕಾಶ ಕೋರಿದ್ದರು. ಅದರಂತೆ ಕೇಂದ್ರ ಸಚಿವರು ಫೆ.25 ರ ಬೆಳಗ್ಗೆ 11 ಗಂಟೆಗೆ ಭೇಟಿಗೆ ಸಮಯ ನೀಡಿದ್ದಾರೆ.

ಮೇಕೆದಾಟು ಯೋಜನೆ: ಕೇಂದ್ರ ಜಲಶಕ್ತಿ ಸಚಿವರ ಭೇಟಿ ಸಂದರ್ಭದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಸಮತೋಲನ ಜಲಾಶಯ ನಿರ್ಮಿಸುವ ಮೇಕೆದಾಟು ಯೋಜನೆಗೆ ಕೇಂದ್ರ ಸರಕಾರದ ಅನುಮೋದನೆ ಪಡೆಯುವ ಬಗ್ಗೆ ಪ್ರಮುಖವಾಗಿ ಪ್ರಸ್ಥಾಪಿಸಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಮೇಕೆದಾಟು ಯೋಜನೆಯು ರಾಮನಗರ ಜಿಲ್ಲೆಯ ಕನಕಪುರ ಬಳಿ ಕಾವೇರಿ ನದಿಗೆ ಸಮತೋಲನ ಜಲಾಶಯ ನಿರ್ಮಿಸುವುದಾಗಿದೆ. ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದಿಸುವ ಉದ್ದೇಶ ಹೊಂದಲಾಗಿದೆ. ಮೇಕೆದಾಟು ಜಲಾಶಯದಲ್ಲಿ ಸುಮಾರು 67 ಟಿಎಂಸಿ ನೀರು ಸಂಗ್ರಹಿಸಿ ಬೆಂಗಳೂರು ನಗರಕ್ಕೆ 4.75 ಟಿಎಂಸಿ ಯಷ್ಟು ಕುಡಿಯುವ ನೀರು ಸರಬರಾಜು ಮಾಡುವ ಯೋಚನೆ ಇದೆ. ಹಾಗೆಯೇ ಮಳೆಗಾಲದಲ್ಲಿ ಕಾವೇರಿ ಜಲಾಶಯ ತುಂಬಿ ಸಮುದ್ರಕ್ಕೆ ವ್ಯರ್ಥವಾಗಿ ಹರಿಯುವ ನೀರನ್ನು ಮೇಕೆದಾಟು ಜಲಾಶಯದಲ್ಲಿ ಸಂಗ್ರಹಿಸಿ ಸಂಕಷ್ಟಕಾಲದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಬಿಡಲೂ ಈ ಯೋಜನೆ ಸಹಾಯಕವಾಗಲಿದೆ.

ಸುಮಾರು 12 ಸಾವಿರ ಎಕರೆ ಭೂಮಿ ಮೇಕೆದಾಟು ಯೋಜನೆಗೆ ಅಗತ್ಯವಾಗಿದ್ದು 9 ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದೆ. ಮೇಕೆದಾಟು ಯೋಜನೆ ಬಗ್ಗೆ ರಾಜ್ಯ ಸರಕಾರವು ಈಗಾಗಲೇ ವಿವರವಾದ ಯೋಜನಾ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದು ಅನುಮತಿಗಾಗಿ ಕಾಯುತ್ತಿದೆ. ಕೇಂದ್ರ ಸರಕಾರವು ಯೋಜನೆಯ ಕಡತವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಕೇಂದ್ರ ಜಲ ಆಯೋಗದ ಚರ್ಚೆಗಾಗಿ ಕಳಿಸಿದೆ.

ಮೇಕೆದಾಟು ಯೋಜನೆಗೆ ಹೆಚ್ಚಿನ ಅರಣ್ಯ ಪ್ರದೇಶ ಅಗತ್ಯವಿರುವುದರಿಂದ ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ಪಡೆಯಬೇಕಾಗಿದೆ. ಕೇಂದ್ರ ಜಲಶಕ್ತಿ ಇಲಾಖೆ ಮತ್ತು ಅರಣ್ಯ ಮತ್ತು ಪರಿಸರ ಇಲಾಖೆ ಮೇಕೆದಾಟು ಯೋಜನೆಗೆ ಗ್ರೀನ್ ಸಿಗ್ನಲ್ ತೋರಿದ ನಂತರ ಯೋಜನೆ ವೇಗ ಪಡೆಯಲಿದೆ.

ತಮಿಳುನಾಡು ಅಪಸ್ವರ :ಮೇಕೆದಾಟು ಯೋಜನೆಗೆ ನೆರೆ ರಾಜ್ಯ ತಮಿಳುನಾಡಿನ ವಿರೋಧ ಪ್ರಮುಖ ಅಡ್ಡಗಾಲಾಗಿದೆ. ತಮಿಳುನಾಡಿನಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ದೋಸ್ತಿ ಪಕ್ಷ ಪಾಲುದಾರ ಡಿಎಂಕೆ ಈ ಯೋಜನೆಗೆ ತನ್ನ ಪ್ರಬಲ ವಿರೋಧ ವ್ಯಕ್ತಪಡಿಸಿದೆ. ತಮಿಳುನಾಡು ಸರಕಾರವು ಮೇಕೆದಾಟು ಬಗ್ಗೆ ಸುಪ್ರೀಂ ಕೋರ್ಟ್‌ ನೀಡುವ ತೀರ್ಪನ್ನು ಎದುರು ನೋಡುತ್ತಿದೆ.

ಮೇಕೆದಾಟು ಯೋಜನೆಗೆ ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರೂ ಪಕ್ಷಗಳ ಸಹಮತವಿದೆ. ಕಾಂಗ್ರೆಸ್ ಪಕ್ಷ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ‌ ನಡೆಸಿ ಗಮನ ಸೆಳೆದರೆ ಬಿಜೆಪಿ ಸರಕಾರದ ಆಡಳಿತ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಬಜೆಟ್​​ನಲ್ಲಿ ಮೇಕೆದಾಟು ಯೋಜನೆಗಾಗಿ 1000 ಸಾವಿರ ಕೋಟಿ ರೂಪಾಯಿ ಹಣ ಮೀಸಲಿಟ್ಟಿದ್ದರು.

ಮಹದಾಯಿ ಯೋಜನೆ: ಹುಬ್ಬಳ್ಳಿ- ಧಾರವಾಡ ಅವಳಿನಗರ ಸೇರಿದಂತೆ ಉತ್ತರ ಕರ್ನಾಟಕದ ಹಲವು ನಗರ ಮತ್ತು ಪಟ್ಟಣ ಪ್ರದೇಶಗಳ ಜನರಿಗೆ ಕುಡಿಯುವ ಸರಬರಾಜು ಮಾಡುವ ಉದ್ದೇಶದ ಯೋಜನೆ ಮಹದಾಯಿ ಯೋಜನೆಯಾಗಿದೆ. ಈ ಯೋಜನೆಗಗೆ ಕೇಂದ್ರ ಸರಕಾರ ಅಧೀನದ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಅನುಮೋದನೆ ನೀಡಲು ನಿರಾಕರಿಸಿದೆ. ಗೋವಾ ರಾಜ್ಯ ಸಹ ಮಹದಾಯಿಗೆ ತನ್ನ ವಿರೋಧ ವ್ಯಕ್ತಪಡಿಸಿರುವುದು ಯೋಜನೆಯನ್ನ ಕಗ್ಗಂಟಾಗಿಸಿದೆ.

ಕೇಂದ್ರ ಜಲಶಕ್ತಿ ಸಚಿವರ ಭೇಟಿ ವೇಳೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಹದಾಯಿ ಯೋಜನೆಯನ್ನ ಪ್ರಮುಖವಾಗಿ ಚರ್ಚಿಸಿ ಅನುಮತಿಗೆ ಒತ್ತಡ ಹೇರಲಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆ : ಕೇಂದ್ರ ಸರಕಾರವೇ ಬಜೆಟ್​​ನಲ್ಲಿ ಘೋಷಣೆ ಮಾಡಿರುವ ಭದ್ರಾ ಮೇಲ್ದಂಡೆ ಯೋಜನೆಯ 5300 ಕೋಟಿರೂಗಳ ಅನುದಾನ ಬಿಡುಗಡೆ ಬಗ್ಗೆ ಕೇಂದ್ರ ಜಲಶಕ್ತಿ ಸಚಿವರ ಗಮನ ಸೆಳೆಯಲಿದ್ದಾರೆ. ಮಧ್ಯ ಕರ್ನಾಟಕದ ಬರಪೀಡಿತ ಪ್ರದೇಶಗಳಾದ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿನ 2,25,515 ಹೆಕ್ಟೇರ್ ಭೂ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಪದ್ಧತಿಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು ಹಾಗೂ 367 ಕೆರೆಗಳಿಗೆ ಶೇ. 50ರಷ್ಟು ನೀರನ್ನು ತುಂಬಿಸುವ ಉದ್ದೇಶದ ಯೋಜನೆ ಇದಾಗಿದೆ.

ಇದನ್ನೂ ಓದಿ: ಫೆ.25ರಂದು ಕೇಂದ್ರ ಸಚಿವರ ಭೇಟಿ: ಮೇಕೆದಾಟು, ಮಹದಾಯಿ ಸೇರಿ ನೀರಾವರಿ ಯೋಜನೆಗಳ ಒಪ್ಪಿಗೆಗೆ ಪ್ರಸ್ತಾವನೆ - ಡಿಸಿಎಂ ಡಿಕೆಶಿ

ಇದನ್ನೂ ಓದಿ: ಮೂರು ದಶಕ ಕಳೆದರೂ ಕೈಗೂಡದ ನೀರಾವರಿ ಕನಸು: ಸಿಂಗಟಾಲೂರು ಏತ ನೀರಾವರಿ ನಂಬಿದ್ದ ರೈತರಿಗೆ ನಿರಾಸೆ

ABOUT THE AUTHOR

...view details