ಕರ್ನಾಟಕ

karnataka

ETV Bharat / state

ಇನ್ಸ್‌ಪೆಕ್ಟರ್ ಸೋಗಿನಲ್ಲಿ ವಂಚನೆ; ಬೆಸ್ಕಾಂ ಸಹಾಯಕ ಇಂಜಿನಿಯರ್ ಬಂಧನ - Engineer Arrested

ಇನ್ಸ್‌ಪೆಕ್ಟರ್ ಸೋಗಿನಲ್ಲಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದ ಬೆಸ್ಕಾಂ ಸಹಾಯಕ ಇಂಜಿನಿಯರ್​ನನ್ನು ಪೊಲೀಸರು ಬಂಧಿಸಿದ್ದಾರೆ.

By ETV Bharat Karnataka Team

Published : May 17, 2024, 9:19 PM IST

BESCOM Assistant Engineer Arrested
ಪೀಣ್ಯ ಪೊಲೀಸ್​ ಠಾಣೆ (ETV Bharat)

ಬೆಂಗಳೂರು : ಪೊಲೀಸ್ ಇನ್ಸ್‌ಪೆಕ್ಟರ್ ಎಂದು ನಂಬಿಸಿ ವಂಚನೆ ಮಾಡುತ್ತಿದ್ದ ಬೆಸ್ಕಾಂನ ಸಹಾಯಕ ಇಂಜಿನಿಯರ್ ಒಬ್ಬರನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ಮಲ್ಲೇಶ್ವರಂ ಬೆಸ್ಕಾಂ ಸಹಾಯಕ ಇಂಜಿನಿಯರ್ ಗಂಗಾಧರ್ ಬಂಧಿತ ಆರೋಪಿ.

ಕೆಐಎಡಿಬಿಯಿಂದ ರೈತರಿಗೆ ಹಣ ಕೊಡಿಸುವುದಾಗಿ ನಂಬಿಸಿದ್ದ ಆರೋಪಿ, ಇದಕ್ಕೆ ಪ್ರತಿಯಾಗಿ ಕಮಿಷನ್ ಎಂದು ಲಕ್ಷಾಂತರ ರೂಪಾಯಿ ಹಣ ಪಡೆಯುತ್ತಿದ್ದ. ಅದರ ಜೊತೆಗೆ ತನ್ನ ಕಾರಿಗೆ ಪೊಲೀಸ್ ಜಾಗೃತದಳದ ಸ್ಟಿಕರ್ ಅಂಟಿಸಿಕೊಂಡಿದ್ದ ಆರೋಪಿಯು, ಹೆದ್ದಾರಿಯಲ್ಲಿ ಟೋಲ್ ಫ್ರೀ ಹಾಗೂ ಪ್ರವಾಸಿ ಸ್ಥಳಗಳಲ್ಲಿ ವಿಐಪಿ ಆದ್ಯತೆ ಪಡೆದುಕೊಳ್ಳುತ್ತಿದ್ದ. ಬೆಸ್ಕಾಂ ಇಲಾಖೆ ನೀಡಿದ್ದ ವಾಕಿಟಾಕಿಯನ್ನ ಬಳಸಿಕೊಳ್ಳುತ್ತಿದ್ದ ಆರೋಪಿ ಗಂಗಾಧರ್, ತಾನು ಪೊಲೀಸ್ ಇನ್ಸ್‌ಪೆಕ್ಟ‌ರ್ ಎಂಬ ಐಡಿ ಕಾರ್ಡ್ ಸಹ ಇಟ್ಟುಕೊಂಡಿದ್ದನು. ವಂಚನೆಗೊಳಗಾದವರೊಬ್ಬರು ನೀಡಿದ್ದ ದೂರಿನ ಅನ್ವಯ ಆರೋಪಿಯ ವಿರುದ್ಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆತನನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ‌.

ಇದನ್ನೂ ಓದಿ:ಗೃಹ ಸಚಿವರ ಆಪ್ತನೆಂದು ನಂಬಿಸಿ ವಂಚಿಸುತ್ತಿದ್ದ ಆರೋಪಿಯ ಬಂಧನ - Fraud Case

ಮತ್ತೊಂದೆಡೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಆಪ್ತನೆಂದು ಹೇಳಿಕೊಂಡು ವಂಚಿಸುತ್ತಿದ್ದ ತುಮಕೂರು ಜಿಲ್ಲೆಯ ಕೊರಟಗೆರೆ ಮೂಲದ ಮೊಹಮ್ಮದ್‌ ಜುಬೇರ್‌ (30) ಎಂಬ ಆರೋಪಿಯನ್ನ ಕೆಂಗೇರಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನು ಬ್ಯಾಂಕ್‌ನಿಂದ ಸಾಲ, ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದನು.

ಕೊರಟಗೆರೆ ಬ್ಲಾಕ್ ಕಾಂಗ್ರೆಸ್‌ನ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷನಾಗಿದ್ದ ಮೊಹಮ್ಮದ್, ಗೃಹ ಸಚಿವರ ಆಪ್ತನೆಂದು ಹೇಳಿಕೊಂಡು, ಸಾರ್ವಜನಿಕರನ್ನ ನಂಬಿಸುತ್ತಿದ್ದ. ಬಳಿಕ ಅವರಿಗೆ ಬ್ಯಾಂಕ್‌ನಲ್ಲಿ ಸಾಲ, ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆಯುತ್ತಿದ್ದ. ಇದೇ ರೀತಿ ಕೆಂಗೇರಿಯ ಶಾಹಿದಾ ತಬಸ್ಸುಮ್‌ (55) ಎಂಬುವರಿಂದ 1.20 ಕೋಟಿ ರೂ ಹಣ ಹಾಗೂ 186 ಗ್ರಾಂ. ಚಿನ್ನ ಪಡೆದು ವಂಚಿಸಿದ್ದ‌. ಈ ಬಗ್ಗೆ ಶಾಹಿದಾ ನೀಡಿದ ದೂರಿನನ್ವಯ ಮಾರ್ಚ್ ತಿಂಗಳಿನಲ್ಲಿ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರನ್ವಯ ಆರೋಪಿಯನ್ನ ಬಂಧಿಸಲಾಗಿದೆ.

ಆರೋಪಿಯು ಕೆಂಗೇರಿ ಠಾಣೆ ಸೇರಿದಂತೆ ಬೆಂಗಳೂರು ಹಾಗೂ ತುಮಕೂರಿನ ವಿವಿಧೆಡೆ ಸಾಕಷ್ಟು ಜನರಿಗೆ ವಂಚಿಸಿದ್ದು, ಆತನ ವಿರುದ್ಧ ಸುಮಾರು 10ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿವೆ. ಅಲ್ಲದೇ, ಕೆಲವೆಡೆ ದಾಖಲೆಗಳಿಗೆ ರಾಜ್ಯಪಾಲರ ಸಹಿ, ವಿವಿಧ ಇಲಾಖೆ ಅಧಿಕಾರಿಗಳ ನಕಲಿ ಮೊಹರು ಬಳಸಿ ವಂಚಿಸಿರುವುದು, ಕೆಲ ಸರ್ಕಾರಿ ಅಧಿಕಾರಿಗಳಿಗೆ ವರ್ಗಾವಣೆ ಮಾಡಿಸಿಕೊಡುವುದಾಗಿ ನಂಬಿಸಿ ಲಕ್ಷಾಂತರ ರೂ. ಪಡೆದುಕೊಂಡಿದ್ದಾನೆ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details