ನೆಲಮಂಗಲ:ಮಗುವಿಗೆ ತುರ್ತು ಚಿಕಿತ್ಸೆ ಕೊಡಿಸುವ ಕಾರಣಕ್ಕೆ ಆಂಬ್ಯುಲೆನ್ಸ್ ಚಾಲಕ ಕಾರನ್ನು ಓವರ್ ಟೇಕ್ ಮಾಡಿದ್ದಾರೆ. ನಮ್ಮನ್ನೇ ಓವರ್ ಟೇಕ್ ಮಾಡ್ತಿಯಾ ಎಂದು ಕಾರಿನಲ್ಲಿದ್ದವರು ಆಂಬ್ಯುಲೆನ್ಸ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಂಬ್ಯುಲೆನ್ಸ್ ಚಾಲಕರ ಸಂಘದ ಎಲ್ಲ ಸದಸ್ಯರು ಒತ್ತಾಯಿಸಿದ್ದಾರೆ.
ನೆಲಮಂಗಲ ಬಳಿಯ ಟೋಲ್ ಬಳಿ ನಿನ್ನೆ ಸಂಜೆ ವೇಳೆ ಘಟನೆ ನಡೆದಿದ್ದು, ತುರ್ತು ಚಿಕಿತ್ಸೆಯ ಕಾರಣಕ್ಕಾಗಿ ಕಾರನ್ನು ಓವರ್ ಟೇಕ್ ಮಾಡಿರುವ ಆಂಬ್ಯುಲೆನ್ಸ್ ಚಾಲಕ ಜಾನ್ ಎಂಬಾತನ ಮೇಲೆ ಕಾರಿನಲ್ಲಿದ್ದ ನಾಲ್ವರು ಹಲ್ಲೆ ನಡೆಸಿದ್ದಾರೆ. ಕಾರಿನಲ್ಲಿದ್ದ ಪ್ರಯಾಣಿಕರು ಕುಡಿದ ನಶೆಯಲ್ಲಿದ್ದು, ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ಆಂಬ್ಯುಲೆನ್ಸ್ ಚಾಲಕ ಆರೋಪ ಮಾಡಿದ್ದಾರೆ.
ಐದು ತಿಂಗಳ ಮಗುವಿನ ತುರ್ತು ಚಿಕಿತ್ಸೆಗಾಗಿ ತುಮಕೂರಿನ ಖಾಸಗಿ ಆಸ್ಪತ್ರೆಯಿಂದ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ಆಂಬ್ಯುಲೆನ್ಸ್ ತೆರಳುತ್ತಿತ್ತು. ಈ ವೇಳೆ ಕಾರೊಂದನ್ನು ಆಂಬ್ಯುಲೆನ್ಸ್ ಚಾಲಕ ಓವರ್ ಟೇಕ್ ಮಾಡಿದ್ದಾರೆ. ನಮ್ಮನ್ನೇ ಓವರ್ ಟೇಕ್ ಮಾಡ್ತಿಯಾ ಎಂದು ಕೆರಳಿದ ಕಾರಿನಲ್ಲಿದ್ದವರು, ಆಂಬ್ಯುಲೆನ್ಸ್ ಅನ್ನು ಐದಾರು ಕಿಲೋ ಮೀಟರ್ ಚೇಸ್ ಮಾಡಿಕೊಂಡು ಬಂದಿದ್ದಾರೆ. ಟೋಲ್ ಬಳಿ ಆಂಬ್ಯುಲೆನ್ಸ್ ನಿಂತಾಗ ವೇಗವಾಗಿ ಚಾಲನೆ ಮಾಡ್ತಿಯಾ ಎಂದು ಗಲಾಟೆ ಮಾಡಿ ಚಾಲಕನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.
ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ:ನೆಲಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗಲಾಟೆಯನ್ನು ತಡೆದ ಪೊಲೀಸರು ಆಂಬ್ಯುಲೆನ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆಂಬ್ಯುಲೆನ್ಸ್ ಚಾಲಕನ ಮೇಲಿನ ಹಲ್ಲೆಯನ್ನ ಖಂಡಿಸಿದ ಆಂಬ್ಯುಲೆನ್ಸ್ ಚಾಲಕರ ಸಂಘದ ಸದಸ್ಯರು, ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಸುವ ತೀರ್ಮಾನವನ್ನು ವರಿಷ್ಠರು ಮಾಡುತ್ತಾರೆ: ಸಚಿವ ಜಿ.ಪರಮೇಶ್ವರ್ - G PARAMESHWAR REACTION ON DCM POST