ಬೆಳಗಾವಿ:ಸ್ಥಳೀಯ ಬಾಲಕರ ಬಾಲಮಂದಿರದ ಆಶ್ರಯದಲ್ಲಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ್ದಾರೆ. ಇವರಿಗೆ ತಂದೆ-ತಾಯಿ ಇಲ್ಲ. ಆರ್ಥಿಕ ಸಮಸ್ಯೆಯ ನಡುವೆಯೂ ಒಳ್ಳೆಯ ಫಲಿತಾಂಶ ಪಡೆದಿರುವ ವಿದ್ಯಾರ್ಥಿಗಳು ಐಪಿಎಸ್ ಆಗುವ ಗುರಿ ಇಟ್ಟುಕೊಂಡಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ನಿರ್ದೇಶನಾಲಯ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿ ಕಾರ್ಯನಿರ್ವಹಿಸುತ್ತಿರುವ ಬಾಲಕರ ಬಾಲಮಂದಿರ (ಹಿರಿಯ) ಮತ್ತು ಪುರುಷರ ಅನುಪಾಲನ ಗೃಹದ ಆಶ್ರಯದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಾದ ಪ್ರಕಾಶ ಲಗಮಣ್ಣ ಬೀರನೊಳಿ ಶೇ.88ರಷ್ಟು ಅಂಕ ಪಡೆದರೆ, ಶಂಕರ ಶೇ.86ರಷ್ಟು ಅಂಕ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಅಂಕ ಗಳಿಕೆ ವಿವರ:ಕೆಎಲ್ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರಕಾಶ, ಕನ್ನಡ-97, ಇಂಗ್ಲಿಷ್-62, ಇತಿಹಾಸ-93, ಅರ್ಥಶಾಸ್ತ್ರ-89, ಭೂಗೋಳಶಾಸ್ತ್ರ-93, ರಾಜ್ಯಶಾಸ್ತ್ರ-94 ಅಂಕ ಪಡೆದಿದ್ದಾರೆ.
ಸರ್ದಾರ್ಸ್ ಕಾಲೇಜಿನಲ್ಲಿ ಓದುತ್ತಿರುವ ಶಂಕರ, ಕನ್ನಡ-88, ಇಂಗ್ಲಿಷ್-61, ಇತಿಹಾಸ-95, ಅರ್ಥಶಾಸ್ತ್ರ-94, ಸಮಾಜಶಾಸ್ತ್ರ-89, ರಾಜ್ಯಶಾಸ್ತ್ರ-93 ಅಂಕ ಗಳಿಸಿದ್ದಾರೆ.
ಬಾಲಮಂದಿರದ ಸೇವೆಗೆ ಚಿರಋಣಿ:ಈಟಿವಿ ಭಾರತದೊಂದಿಗೆ ವಿದ್ಯಾರ್ಥಿ ಪ್ರಕಾಶ ಮಾತನಾಡಿ, ಮುಂದೆ ಬಿಎ ಪದವಿ ಓದಿ, ಸ್ಪರ್ಧಾತ್ಮಕ ಪರೀಕ್ಷೆ ಬರೆದು, ಪೊಲೀಸ್ ಅಧಿಕಾರಿಯಾಗುವ ಗುರಿ ಇಟ್ಟುಕೊಂಡಿದ್ದೇನೆ. ನನ್ನ ಪ್ರತಿಯೊಂದು ಖರ್ಚನ್ನುೂ ನೋಡಿಕೊಂಡಿರುವ ಈ ಬಾಲಮಂದಿರ ಸಂಸ್ಥೆ, ಲಿಂಗರಾಜ ಕಾಲೇಜು ಉಪನ್ಯಾಸಕರು ಈ ಸಾಧನೆಗೆ ಕಾರಣ. ಅವರಿಗೆಲ್ಲ ನಾನು ಸದಾಕಾಲ ಚಿರಋಣಿ ಎಂದರು.
ಐಪಿಎಸ್ ಆಗುವ ಆಸೆ:ವಿದ್ಯಾರ್ಥಿ ಶಂಕರ ಮಾತನಾಡಿ, ನನಗೆ ಪ್ರೋತ್ಸಾಹ ನೀಡಿದ ಕಾಲೇಜು ಉಪನ್ಯಾಸಕರು ಹಾಗೂ ಬಾಲಮಂದಿರದ ಸಿಬ್ಬಂದಿಗೆ ಧನ್ಯವಾದ ಸಲ್ಲಿಸುತ್ತೇನೆ. ನನಗೆ ತಂದೆ ತಾಯಿ ಇಲ್ಲ ಎಂಬ ಕೊರಗು ಬಾರದಂತೆ ಇಲ್ಲಿನ ಸಿಬ್ಬಂದಿ ನೋಡಿಕೊಂಡಿದ್ದಾರೆ. ಪ್ರತಿನಿತ್ಯ 6 ಗಂಟೆ ಅಭ್ಯಾಸ ಮಾಡುತ್ತಿದ್ದೆ. ಮುಂದೆ ಐಪಿಎಸ್ ಆಗುವ ಮಹದಾಸೆ ಹೊಂದಿದ್ದೇನೆ. ಅದಕ್ಕೆ ಈಗಿನಿಂದಲೇ ತಯಾರಿ ಮಾಡುತ್ತೇನೆ ಎಂದು ತಿಳಿಸಿದರು.
ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಮಹಾಂತೇಶ ಭಜಂತ್ರಿ ಮಾತನಾಡಿ, ತಂದೆ-ತಾಯಿ ಇಲ್ಲದೇ ಬಾಲಮಂದಿರದಲ್ಲಿ ವಾಸವಿರುವ ಬಳ್ಳಾರಿ ಮೂಲದ ಶಂಕರ ಸೇರಿ ಈ ಇಬ್ಬರು ಮಕ್ಕಳು ಒಳ್ಳೆಯ ಫಲಿತಾಂಶ ದಾಖಲಿಸಿರುವುದು ಬಹಳ ಖುಷಿ ತಂದಿದೆ. ಇಲ್ಲಿ ಅವರಿಗೆ ಪೂರಕ ವಾತಾವರಣವಿತ್ತು. ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳುತ್ತಿದ್ದೆವು. ಕಾಲೇಜಿನಿಂದ ಬಂದ ಬಳಿಕ ವಿಶೇಷ ಕ್ಲಾಸ್ ವ್ಯವಸ್ಥೆ ಮಾಡಿದ್ದೆವು ಎಂದರು.
ಮಕ್ಕಳ ಸಾಧನೆ ಖುಷಿ ತಂದಿದೆ:ಬಾಲಮಂದಿರದ ಅಧೀಕ್ಷಕ ಶಶಿಕಾಂತ ಜನವಾಡೆ ಮಾತನಾಡಿ, ಬಾಲ ಮಂದಿರದಲ್ಲಿನ ನಮ್ಮ ಹುಡುಗರು ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆಗೈದಿರುವುದು ಹರ್ಷ ಉಂಟು ಮಾಡಿದೆ. ನಮ್ಮ ಮಕ್ಕಳು ಒಳ್ಳೆಯ ಸಾಧನೆ ಮಾಡಬೇಕು ಎಂದು ಕನಸು ಕಾಣುತ್ತಿದ್ದೆವು. ಈಗ ಅದು ನೆರವೇರಿದೆ. ಈ ಇಬ್ಬರು ಬಾಲಕರು ಸದಾಕಾಲ ಲವಲವಿಕೆಯಿಂದ ಇರುತ್ತಿದ್ದರು. ಆಟದ ಜತೆಗೆ ಓದುವುದರ ಕಡೆ ಹೆಚ್ಚಿನ ಗಮನ ಹರಿಸುತ್ತಿದ್ದರು ಎಂದು ನೆನಪಿಸಿಕೊಂಡರು.
ಬೆಳಗಾವಿ ನಗರದ ಬಾಲಮಂದಿರದಲ್ಲಿ 26 ಮಕ್ಕಳಿದ್ದಾರೆ. ಇಲ್ಲಿ ಆಶ್ರಯ ಪಡೆದು ಹೋಗಿರುವ ಅನೇಕರು ಎಂಜಿನಿಯರ್, ವಕೀಲ, ಉಪನ್ಯಾಸಕ ವೃತ್ತಿ ಸೇರಿದಂತೆ ವಿವಿಧ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡು, ಒಳ್ಳೆಯ ಬದುಕು ಕಟ್ಟಿಕೊಂಡಿರುವುದು ವಿಶೇಷ.
ಇದನ್ನೂಓದಿ:ಪಿಯು ಫಲಿತಾಂಶ: ಬಡತನದಲ್ಲಿ ಅರಳಿದ ಪ್ರತಿಭೆ ಸವದತ್ತಿಯ ವಿಜಯಲಕ್ಷ್ಮಿಗೆ 5ನೇ ರ್ಯಾಂಕ್ - PU Topper