ಕರ್ನಾಟಕ

karnataka

ETV Bharat / opinion

ಮುಂದುವರೆದ ಇಸ್ರೇಲ್​-ಹಮಾಸ್ ಭೀಕರ​ ಯುದ್ಧ: ಸೆರೆಯಲ್ಲಿದ್ದಾರೆ ಒತ್ತೆಯಾಳುಗಳು

ಇಸ್ರೇಲ್​ ಮತ್ತು ಹಮಾಸ್​ ಯುದ್ಧ ಆರಂಭವಾಗಿ ವರ್ಷ ಕಳೆದಿದೆ. ಈ ಕುರಿತು 'ಈಟಿವಿ ಭಾರತ್'​ ಸಂಪಾದಕರಾದ ಬಿಲಾಲ್​ ಭಟ್​ ಬರೆದಿರುವ ವಿಶೇಷ ಲೇಖನ ಇಲ್ಲಿದೆ.

By Bilal Bhat

Published : 4 hours ago

opinion-israel-hamas-war-devastation-continues-hostages-are-still-held-captive
ಯುದ್ಧದ ಚಿತ್ರ (AP)

ಯುದ್ದದಲ್ಲಿ ಮೊದಲು ಅಪಾಯಕ್ಕೆ ಒಳಗಾಗುವುದು ಸತ್ಯವಾದರೆ, ನಂತರದ ಅಪಾಯ ಮಹಿಳೆಯರು ಮತ್ತು ಮಕ್ಕಳಿಗೆ. ಇಸ್ರೇಲ್​ ಮತ್ತು ಹಮಾಸ್​ ನಡುವಿನ ಸಂಘರ್ಷವಿರಲಿ, ರಷ್ಯಾ ಮತ್ತು ಉಕ್ರೇನ್​ ಯುದ್ದದಂತಹ ಯಾವುದೇ ಸಂಘರ್ಷದಲ್ಲೂ ಇದು ನಿಜವೇ ಆಗಿದೆ. ವರ್ಷದ ಹಿಂದೆ ಹಮಾಸ್​​ ಸಂಘಟನೆ ಇಸ್ರೇಲ್​ ನೆಲದ ಮೇಲೆ ಶಸ್ತ್ರಸಜ್ಜಿತ ಸೇನೆಯ ಜೊತೆಗೆ ಪೂರ್ಣ ಪ್ರಮಾಣದ ಯುದ್ದ ಆರಂಭಿಸುವ ಮೂಲಕ ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸದ್​ ಅನ್ನು ಚಕಿತಗೊಳಿಸಿತ್ತು. ಅಕ್ಟೋಬರ್​ 7ರಂದು ಹಮಾಸ್​ 1,200 ಜನರ ಹತ್ಯೆ ಮತ್ತು 250 ಮಂದಿ ಇಸ್ರೇಲಿಗರ ಅಪಹರಣ ಮಾಡಿತ್ತು. 100ಕ್ಕೂ ಹೆಚ್ಚು ಮಂದಿಯನ್ನು ಗಾಜಾದಲ್ಲಿ ಒತ್ತೆಯಾಳಾಗಿರಿಸಿತು. ಇವರಲ್ಲಿ ಎಷ್ಟು ಮಂದಿ ಜೀವಂತವಾಗಿದ್ದಾರೆ ಎಂಬುದು ಇನ್ನೂ ಯಾರಿಗೂ ತಿಳಿದಿಲ್ಲ.

ಇದಕ್ಕೆ ಪ್ರತೀಕಾರವಾಗಿ ದಾಳಿ ಮಾಡಿದ ಇಸ್ರೇಲ್​ ಪಡೆಗಳು 41,000 ಪ್ಯಾಲೆಸ್ತೇನಿಯರ ಹತ್ಯೆ ಮಾಡಿವೆ. ಸಂಘರ್ಷ ಆರಂಭವಾದಗಿನಿಂದ 16,000 ಮಕ್ಕಳು ಸಾವನ್ನಪ್ಪಿದ್ದು, 19,000 ಮಂದಿ ಅನಾಥರಾಗಿದ್ದಾರೆ. 1000 ಮಕ್ಕಳು ಕೈ-ಕಾಲು ಕಳೆದುಕೊಂಡಿದ್ದಾರೆ. ಶೇ 91ರಷ್ಟು ಪ್ಯಾಲೆಸ್ತೇನಿಯನ್ನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ. ಬಹುತೇಕ ಮಂದಿ ಆಹಾರ ಅಭದ್ರತೆಯನ್ನು ಎದುರಿಸಿದ್ದಾರೆ. ಗಾಜಾದಲ್ಲಿ ಆಸ್ಪತ್ರೆ, ಶಾಲೆ ಸೇರಿದಂತೆ ಅನೇಕ ಕಟ್ಟಡಗಳು ನಾಮಾವಶೇಷಗೊಂಡಿವೆ.

ಇಸ್ರೇಲ್‌- ಹಮಾಸ್‌ ಸಂಘರ್ಷಕ್ಕೆ ಒಂದು ವರ್ಷದ ಹಿನ್ನೆಲೆಯಲ್ಲಿ ವೈಟ್​ ಹೌಸ್​ ಎದುರು ಪ್ಯಾಲೆಸ್ತೇನ್ ಪರ ಕಾರ್ಯಕರ್ತರ ಪ್ರತಿಭಟನೆ (AP)

ಸಂಘರ್ಷ ಆರಂಭವಾಗಿ ವರ್ಷಗಳ ಬಳಿಕ ಪ್ಯಾಲೆಸ್ತೇನಿಯರು ಸಂಘರ್ಷದಿಂದ ಸಂಪೂರ್ಣವಾಗಿ ಜರ್ಜರಿತರಾಗಿದ್ದಾರೆ. ಹಮಾಸ್​​ ಇನ್ನೂ ಬಂಧಿತರನ್ನು ಸೆರೆಯಲ್ಲಿರಿಸಿದೆ. ಆದಾಗ್ಯೂ, ಇಸ್ರೇಲ್​ನಲ್ಲಿ ಜನ ಜೀವನ ಸಾಮಾನ್ಯವಂತೆ ಕಂಡಿದೆ. ಗಾಜಾದಲ್ಲಿನ ಜನಜೀವನ ಸಂಘರ್ಷದ ಕೇಂದ್ರ ಬಿಂದುವಾಗಿ ರೂಪುಗೊಂಡಿದೆ. ವೈಮಾನಿಕ ಬಾಂಬ್​ ದಾಳಿಯಿಂದ ಮಹಿಳೆಯರು ಮತ್ತು ಮಕ್ಕಳು ಮತ್ತಷ್ಟು ದುರ್ಬಲರಾಗಿದ್ದು, ಸುರಕ್ಷಿತವಾದ ಆಶ್ರಯತಾಣವಿಲ್ಲ. ಗಾಜಾದಲ್ಲಿ ಆರೋಗ್ಯ ಮತ್ತು ನೈರ್ಮಲ್ಯ ಕುಸಿತದಿಂದ ಬದುಕುಳಿದರ ಜೀವನವೂ ಸವಾಲುದಾಯಕವಾಗಿದೆ. ಪ್ರಾಣ ರಕ್ಷಣೆಗಾಗಿ ಓಡಲು ಸಾಧ್ಯವಾಗದಂತಹ ಮಕ್ಕಳ ಮೇಲಿನ ಬಾಂಬ್​ ದಾಳಿಯಿಂದ ಹಮಾಸ್​ ಘನತೆ ಮರೆಯಾಗಿದೆ. ಅಂಬೆಗಾಲಿಡಲು ಸಾಧ್ಯವಾಗದಂತಹ ಮಕ್ಕಳ ಮೇಲಿನ ಯುದ್ದವೂ ಭೀಕರ ಹಾನಿ ಮಾಡಿದೆ. ಮಕ್ಕಳ ಹಕ್ಕುಗಳ ಕುರಿತು ಹಲವು ರಾಷ್ಟ್ರಗಳಲ್ಲಿ ಹೆಚ್ಚು ಚರ್ಚೆ ನಡೆಯುತ್ತಿರುವ ಸಮಯದಲ್ಲಿ ಈ ದಾಳಿಗಳು ನಡೆದಿದೆ. ಈ ಯುದ್ದಗಳ ದಾಳಿಗಳು ಇತರೆ ಪ್ರದೇಶಗಳ ಮಹಿಳೆ ಮತ್ತು ಮಕ್ಕಳನ್ನು ದುರ್ಬಲವಾಗಿಸಿದೆ.

ಇತ್ತೀಚೆಗೆ ಲೆಬನಾನ್​ ವಿರುದ್ಧ ಇಸ್ರೇಲ್​ ಯುದ್ದ ಆರಂಭಿಸಿದೆ. ಇದರಿಂದಾಗಿ ಲೆಬನಾನ್​ನ ಉಳಿಯುವಿಕೆ ಮತ್ತು ಅಭಿವೃದ್ಧಿ ಹೊಂದುವ ಗುರಿಗಳು ಕ್ಷಿಣಿಸಿದ್ದು, ದಕ್ಷಿಣ ಲೆಬನಾನ್​ ಅಸ್ತಿತ್ವವೇ ಕಷ್ಟಕರವಾಗಿದೆ. ಲೆಬನಾನ್​ ಮೇಲಿನ ಯುದ್ದ ಪಶ್ಚಿಮ ಏಷ್ಯನ್ನರನ್ನು ಆತಂಕಕ್ಕೆ ದೂಡಿದೆ. ಗಾಜಾದ ಭೀಕರತೆಯು ಇಲ್ಲಿಯೂ ಕೂಡ ಅಶಾಂತಿಯ ಭಾವನೆಯನ್ನು ಹೆಚ್ಚಿಸಲಿದೆ. ಪ್ಯಾಲೆಸ್ತೇನ್ ಮತ್ತು ಲೆಬನಾನ್​ ಭಾಗದಲ್ಲಿ ವೈಮಾನಿಕ ಬಾಂಬ್​​ ದಾಳಿಗಳು ಮತ್ತಷ್ಟು ಅನಿಶ್ಚಿತತೆಗೆ ಕಾರಣವಾಗಿದೆ.

ಈ ದಾಳಿಯ ಬೆನ್ನಲ್ಲೇ ಯೆಮನ್​ ಹೌತಿಗಳು ಕೆಲಕಾಲ ಮೌನವಾಗಿದ್ದು, ಹಿಜ್ಬುಲ್ಲಾ ಬಳಿಕ ನಮಗೆ ಅಸ್ತಿತ್ವ ಇರಬಹುದಾ ಎಂಬ ಆತಂಕ ಅವರಲ್ಲಿದೆ. ಹೌತಿ ಮತ್ತು ಹಿಜ್ಬುಲ್ಲಾ ಎರಡರ ಬೆನ್ನ ಹಿಂದೆ ಇರಾನ್​ ಇದೆ. ಹಿಜ್ಬುಲ್ಲಾ ನಾಯಕ ಹಸನ್​ ನುಸ್ರುಲ್ಲಾ ಹತ್ಯೆಯ ಬಳಿಕ ಇರಾನ್​ ದೇಶ ಇಸ್ರೇಲ್​ ಮೇಲೆ ದಾಳಿ ನಡೆಸಿದೆ. ಹಿಜ್ಬುಲ್ಲಾ ಮತ್ತು ಹಮಾಸ್​ ಮೇಲೆ ಇಸ್ರೇಲ್‌ನ​ ಪ್ರತಿಕ್ರಿಯೆ ಕಠೋರ ಮತ್ತು ಭಯಾನಕವಾಗಿದೆ. ಸದ್ಯ ಇಸ್ರೇಲ್​ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುತ್ತಿರುವ ದೇಶಗಳೆಂದರೆ ಯೆಮೆನ್​, ಲೆಬನಾನ್​ ಮತ್ತು ಇರಾನ್​. ಸೌದಿ ಅರೇಬಿಯಾ ಮತ್ತು ಇತರೆ ಸುನ್ನಿ ದೇಶಗಳು ಮೃದು ರಾಜತಾಂತ್ರಿಕತೆಯನ್ನು ಆಯ್ಕೆ ಮಾಡಿದ್ದು, ಖಂಡನೆಗಳ ಮೂಲಕ ತಮ್ಮನ್ನು ನಿರ್ಬಂಧಿಸಿಕೊಂಡಿವೆ. ಈ ನಡುವೆ ಮಧ್ಯಸ್ಥಿಕೆ ಮತ್ತು ಮಾತುಕತೆಗೆ ಕರೆ ನೀಡಿವೆ. ಇಸ್ರೇಲ್​ ಮತ್ತು ಹಮಾಸ್​ ನಡುವಿನ ಮಧ್ಯಸ್ಥಿಕೆವಹಿಸುವ ಮೂಲಕ ಮುಸ್ಲಿಂ ದೇಶಗಳು ಜಾಗರೂಕತೆಯಿಂದ ಆತಂಕವನ್ನು ಕಡಿಮೆ ಮಾಡಿ, ಉದ್ವಿಗ್ನತೆ ತಪ್ಪಿಸಲು ಪ್ರಯತ್ನ ಮಾಡುತ್ತಿವೆ. ಇಸ್ರೇಲ್​ಗೆ ಯುಎಸ್​ ಬೆಂಬಲ ಮತ್ತು ಯುದ್ಧ ಸಾಮಗ್ರಿ ಸಹಾಯದ ಜೊತೆಗೆ ಈಜಿಪ್ಟ್​ ಮತ್ತು ಕತಾರ್​ ಕದನ ವಿರಾಮಕ್ಕೆ ಕರೆ ನೀಡಿವೆ. ಆದರೆ, ಈ ಕದನ ವಿರಾಮ ತರುವಲ್ಲಿ ಅಮೆರಿಕ ಯತ್ನವೂ ವಿಫಲಗೊಂಡಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆ, ಇಸ್ರೇಲ್​ ಮತ್ತು ಪ್ಯಾಲೇಸ್ತೇನಿಯರ ನಡುವೆ ಉತ್ತಮ ಸಂಬಂಧ ಹೊಂದಿರುವ ಭಾರತ ಮಹತ್ವದ ಸ್ಥಾನದಲ್ಲಿದೆ. ಪಶ್ಚಿಮ ಏಷ್ಯಾದ ಹಿತಾಸಕ್ತಿಯಿಂದ ಭಾರತ ಪ್ರಮುಖ ಹೆಜ್ಜೆ ಇಡಲಿದೆ. ಕಾರ್ಯ ಇನ್ನೂ ಆರಂಭವಾಗದಿದ್ದರೂ ಮಹಾತ್ವಕಾಂಕ್ಷೆಯ ಐಎಂಇಇಸಿ (ಭಾರತ ಮಧ್ಯ ಪೂರ್ವ ಆರ್ಥಿಕ ಕಾರಿಡಾರ್​​) ಯೋಜನೆ ಸೌದಿ ಅರೇಬಿಯಾದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇದು ಕೇವಲ ಸೌದಿ ಅರೇಬಿಯಾಗೆ ಮಾತ್ರವಲ್ಲ, ಇರಾನ್​, ಭಾರತಕ್ಕೂ ಪ್ರಮುಖವಾಗಿದೆ. ಇರಾನ್​ನ ಚಾಬಹಾರ್​ ಬಂದರು ಆರ್ಥಿಕವಾಗಿ ಮತ್ತು ಕಾರ್ಯತಂತ್ರವಾಗಿ ಪ್ರಮುಖವಾಗಿದೆ. ಇರಾನ್​ ಮತ್ತು ಸೌದಿ ಎರಡು ಭಾರತದ ಬೆಳವಣಿಗೆ ಕಥೆಯಲ್ಲಿ ನಿರ್ಣಾಯಕವಾಗಿದೆ.

ಲೆಬನಾನ್​ನ ಬೈರೂತ್​ ಮೇಲೆ ಇಸ್ರೇಲ್​ ದಾಳಿ (ಅಕ್ಟೋಬರ್​ 6, 2024) (AP)

ಸಂಪೂರ್ಣ ಪಶ್ಚಿಮ ಏಷ್ಯಾ ಕಾರ್ಯತಂತ್ರದಲ್ಲಿ ಭಾರತಕ್ಕೆ ಪ್ರಮುಖವಾಗಿರುವಂತೆ, ಇಸ್ರೇಲ್​ನ ರಕ್ಷಣಾ ಪೂರೈಕೆ ಕೂಡ ನಿರ್ಣಾಯಕ. ಇರಾನ್​ ಕೂಡ ಭಾರತಕ್ಕೆ ಕಚ್ಛಾ ತೈಲವನ್ನು ಒದಗಿಸುತ್ತಿದೆ. ಪಶ್ಚಿಮ ಏಷ್ಯಾದಿಂದ ಶೇ 8ರಷ್ಟು ಇಂಧನ ಸಂಪನ್ಮೂಲ ಬರುತ್ತಿದೆ. ಇದಕ್ಕೆ ಅಡ್ಡಿಯಾದಲ್ಲಿ ಇದು ಭಾರತದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಇರಾನ್​ ಮತ್ತು ಇಸ್ರೇಲ್​ ನಡುವಿನ ಪೂರ್ಣ ಪ್ರಮಾಣದ ಯುದ್ದವೂ ಭಾರತದ ಹಿತಾಸಕ್ತಿ ವಿರುದ್ಧವಾಗಿದೆ. ಭಾರತ ಮಾತುಕತೆಗೆ ಮನವಿ ಮಾಡುವ ಮೂಲಕ ಯುದ್ದವನ್ನು ಕೊನೆಗೊಳಿಸುವಂತೆ ಸಲಹೆ ನೀಡಿದೆ. ಪಶ್ಚಿಮ ಏಷ್ಯಾದಿಂದ ಸಂಪನ್ಮೂಲ ಮತ್ತು ಅವಕಾಶದಲ್ಲಿ ಭಾರತ ಮತ್ತು ಚೀನಾ ಇದ್ದೂ ಭಾರತದ ಕೈ ಹೆಚ್ಚಿನದಾಗಿದೆ.

ಅಕ್ಟೋಬರ್​ 7, 2023ರಲ್ಲಿ ಒಂದು ವೇಳೆ ಹಮಾಸ್​ ಯುದ್ದವನ್ನು ಆರಂಭಿಸದಿದ್ದಲ್ಲಿ ಚೀನಾ ಕೊಡುಗೆ ವಿಭಿನ್ನವಾಗಿರುತ್ತಿತ್ತು. ಹಮಾಸ್​ ಮತ್ತು ಅಲ್​ ಫತಾಹ್​ ಜೊತೆಗೆ ಸೌದಿ ಅರೇಬಿಯಾ ಮತ್ತು ಇರಾನ್​ ನಡುವೆ ಮಾತುಕತೆಗೆ ಚೀನಾ ಮಧ್ಯಸ್ಥಿಕೆಗೆ ಪ್ರಯತ್ನ ನಡೆಸಿತ್ತು. ಸುನ್ನಿ ಮತ್ತು ಶಿಯಾ ನಡುವಿನ ಒಪ್ಪಂದಕ್ಕೆ ಮುನ್ನ ಪೂರ್ಣ ಪ್ರಮಾಣದ ಯುದ್ದ ಆರಂಭವಾಯಿತು. ಸೌದಿ ಮತ್ತು ಇರಾನಿನ ಕಠಿಣ ಭಾವನೆ ಪರಿಹಾರ ಕಾಣವು ಮೊದಲೇ ಇಸ್ರೇಲ್​ ಮೇಲುಗೈ ಸಾಧಿಸಿತು. ಇಸ್ರೇಲ್​ ಹಮಾಸ್​ ಮತ್ತು ಅದರ ಸಹಚರ ವಿರುದ್ಧ ಹೋರಾಟ ನಿರಂತರವಾಗಿ ಮುಂದುವರೆಸಿದೆ. ಈ ನಡುವೆ ಇರಾನ್​ನ ಭೀಕರ ಕ್ಷಿಪಣಿ ದಾಳಿಗೆ ಇಸ್ರೇಲ್​ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಿದೆ.

ಇದನ್ನೂ ಓದಿ: ಪಶ್ಚಿಮ ಏಷ್ಯಾ ತಲ್ಲಣ: ಹಮಾಸ್​, ಹಿಜ್ಬುಲ್ಲಾ, ಹೌತಿಗಳ ವಿರುದ್ಧ ಇಸ್ರೇಲ್ ಫೈಟ್

ABOUT THE AUTHOR

...view details