ಬೆಂಗಳೂರು : ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಅಂತಾರಾಷ್ಟ್ರೀಯ ವಾಣಿಜ್ಯ, ಸಾವಯವ ಮತ್ತು ಸಿರಿಧಾನ್ಯ ಮೇಳಕ್ಕೆ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಮೇಳವು ರೈತರು, ರೈತ ಗುಂಪುಗಳು, ದೇಶಿಯ ಮತ್ತು ಅಂತಾರಾಷ್ಟ್ರೀಯ ಕಂಪನಿಗಳು ಸಾವಯವ ಮತ್ತು ಸಿರಿಧಾನ್ಯ ವಲಯದ ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳನ್ನು ಒಗ್ಗೂಡಿಸುವುದರ ಜೊತೆಗೆ ಹೊಸ ಹೊಸ ಅವಕಾಶಗಳನ್ನು ಅನ್ವೇಷಿಸುವ ಮತ್ತು ಪರಿಣಾಮಕಾರಿಯಾಗಿ ಮಾರುಕಟ್ಟೆ ಸಂಪರ್ಕಗಳನ್ನು ಕಲ್ಪಿಸುವ ವೇದಿಕೆಯಾಗಿದೆ. ಸಾವಯವ ಮತ್ತು ಸಿರಿಧಾನ್ಯಗಳನ್ನು ಭವಿಷ್ಯದ ಪೀಳಿಗೆಯನ್ನು ಪೋಷಿಸುವ ಸಾಂಪ್ರದಾಯಿಕ ಪ್ರಜ್ಞಾವಂತ ಆಹಾರ ಎಂದು ಜನಪ್ರಿಯಗೊಳಿಸುವುದು ಮತ್ತು ಭವಿಷ್ಯಕ್ಕಾಗಿ ಪಾರಂಪರಿಕ ದೇಸಿ ತಳಿಗಳನ್ನು ಬೆಳೆಸಿ ಸಂರಕ್ಷಿಸುವುದು ಸರ್ಕಾರದ ಧ್ಯೇಯವಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.
ಆಕರ್ಷಣಿಯವಾದ ಮೇಳ : ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಜನರು ಸಿರಿಧಾನ್ಯಗಳ ಮಾಹಿತಿ ಪಡೆಯುವುದರ ಜೊತೆಗೆ ಪ್ರತಿ ಮಳಿಗೆ ಬಳಿ ನಿಂತು ಖಾದ್ಯಗಳ ರುಚಿ ಸವಿದರು. ಸಿರಿಧಾನ್ಯಗಳಾದ ನವಣೆ, ಸಜ್ಜೆ, ಆರ್ಕ, ಬರಗು, ರಾಗಿಯಿಂದ ತಯಾರಿಸಿದ ವೈವಿಧ್ಯಮಯ ತಿಂಡಿ ತಿನಿಸುಗಳು, ನವಣೆ ಮಸಾಲೆ ಬ್ರೆಡ್, ರಾಗಿ ಬ್ರೆಡ್, ವಿವಿಧ ರೀತಿಯ ಬಿಸ್ಕತ್ತು, ಚಕ್ಕುಲಿ, ಚಿಕ್ಕಿ ಅಲ್ಲದೇ ವಿಶೇಷವಾಗಿ ಯುವ ಪೀಳಿಗೆ ಇಷ್ಟ ಪಡುವ ಆಧುನಿಕ ಸಿರಿಧಾನ್ಯ ಬ್ರೌನಿ, ಬಫ್ತಿನ್ಸ್, ರಾಗಿ ಚಾಕೊಲೆಟ್, ಜಾಮೂನು ಗ್ರಾಹಕರನ್ನು ಆಕರ್ಷಿಸಿದವು. ಸ್ಥಳದಲ್ಲೇ ಗಾಣದಿಂದ ತೆಗೆದ ಅಡುಗೆ ಎಣ್ಣೆ ಮಾರಾಟವೂ ವಿಶೇಷವಾಗಿತ್ತು.
ಪ್ರತಿ ಮಳಿಗೆಯಲ್ಲಿ ಸಾವಯವ ಕೃಷಿಯಲ್ಲಿ ಬೆಳೆದ ವಿವಿಧ ಉತ್ಪನ್ನಗಳ ಬಗ್ಗೆ ಪ್ರತಿನಿಧಿಗಳಿಂದ ಜನರು ಮಾಹಿತಿ ಪಡೆದು, ಖರೀದಿಸಿದರು. ಸಾವಯವ ಪದ್ಧತಿಯಲ್ಲಿ ಬೆಳೆದ ದ್ರಾಕ್ಷಿ, ಗೋಡಂಬಿ, ಜೇನುತುಪ್ಪ ಪ್ರದರ್ಶನಕ್ಕೆ ಇಡಲಾಗಿತ್ತು.
ಮಣ್ಣಿನ ಲೋಕ : ಸಸ್ಯಗಳ ಬೆಳವಣಿಗೆಗೆ ಮಣ್ಣು ಪ್ರಮುಖ ಆಧಾರವಾಗಿರುವುದರಿಂದ ರೈತರು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಲ್ಲಿ ಮಣ್ಣಿನ ಮಹತ್ವ, ಗುಣಲಕ್ಷಣಗಳು, ವರ್ಗೀಕರಣ ಮತ್ತು ರಚನೆಯ ಕುರಿತು ಅರಿವು ಮೂಡಿಸುವುದು ಅತ್ಯಾವಶ್ಯಕವಾಗಿದೆ. ಈ ಉದ್ದೇಶದಿಂದ ಮಣ್ಣಿನ ಪೆಡಾನ್ ಪೆವಿಲಿಯನ್ ಅನ್ನು ಈ ಬಾರಿಯ ಮೇಳದಲ್ಲಿ ಪರಿಚಯಿಸಲಾಗಿದೆ. ಕರ್ನಾಟಕ ರಾಜ್ಯದ ವಿವಿಧ ಬಗೆಯ ಮಣ್ಣಿನ monolith ಗಳನ್ನು ಪ್ರದರ್ಶಿಸಲಾಗಿದೆ. ಈ ಮೇಳದಲ್ಲಿ 300 ಮಳಿಗೆಗಳನ್ನು ಸ್ಥಾಪಿಸಲಾಗಿದೆ.
ಉತ್ತರ ಪ್ರದೇಶ, ಪಂಜಾಬ್, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು ಮತ್ತು ಮೇಘಾಲಯ, ಜಾರ್ಖಂಡ್, ಸಿಕ್ಕಿಂ ಸೇರಿದಂತೆ ಇನ್ನಿತರ ರಾಜ್ಯಗಳು ಸಹ ಭಾಗವಹಿಸಿರುವುದು ವಿಶೇಷ.
ವಸ್ತುಪ್ರದರ್ಶನ: ಸಾವಯವ ಮತ್ತು ಸಿರಿಧಾನ್ಯಗಳ ಸಂಸ್ಥೆಗಳು, ಮಾರುಕಟ್ಟೆದಾರರು, ರಫ್ತುದಾರರು, ಚಿಲ್ಲರೆ ಮಾರಾಟಗಾರರು, ರೈತ ಗುಂಪುಗಳು, ಪ್ರಾಂತೀಯ ಒಕ್ಕೂಟಗಳು, ಸಾವಯವ ಪರಿಕರಗಳ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳು ವಸ್ತು ಪ್ರದರ್ಶನದಲ್ಲಿ ಭಾಗವಹಿಸುತ್ತಿವೆ.
ರೈತರ ಕಾರ್ಯಾಗಾರ : ರಾಜ್ಯದ ರೈತರಿಗೆ ಕನ್ನಡ ಭಾಷೆಯಲ್ಲಿ ಮೂರು ದಿನಗಳ ಕಾರ್ಯಗಾರವನ್ನು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಇವರ ಸಹಯೋಗದೊಂದಿಗೆ ಆಯೋಜಿಸಲಾಗುತ್ತದೆ. ಈ ಕಾರ್ಯಾಗಾರದಲ್ಲಿ ಸಾವಯವ, ನೈಸರ್ಗಿಕ, ದೇಸಿ ತಳಿಗಳು, ಸಿರಿಧಾನ್ಯಗಳ ಕುರಿತು ವಿಷಯ ತಜ್ಞರು ಉಪನ್ಯಾಸ ನೀಡಿದರು.
ಸಿರಿಧಾನ್ಯ ಮೇಳದಲ್ಲಿ ಹೊಸ ಆಕರ್ಷಣೆ : ಹಲವು ವೈವಿದ್ಯತೆಗಳಿಂದ ಭಾರಿ ಜನಾಕರ್ಷಣೆ ಪಡೆದಿರುವ ಅಂತಾರಾಷ್ಟ್ರೀಯ ಸಾವಯವ ಸಿರಿಧಾನ್ಯ ವಾಣಿಜ್ಯ ಮೇಳದಲ್ಲಿ ಈ ಬಾರಿ ಕೃತಕ ಬುದ್ಧಿಮತ್ತೆಯ (AI) ಮಿಲಿ ಮತ್ತೊಂದು ಆಕರ್ಷಣೆಯಾಗಿದೆ.
ಕೃಷಿ ಇಲಾಖೆಯು, ಈ ಅಂತಾರಾಷ್ಟ್ರೀಯ ಮೇಳಕ್ಕಾಗಿಯೇ ಈ ವಿಶೇಷ ತಂತ್ರಜ್ಞಾನ ರೂಪಿಸಿ ಬಿಡುಗಡೆ ಮಾಡಿದೆ. ಮುಂಭಾಗದಲ್ಲಿ QR ಕೋಡ್ ಸ್ಕ್ಯಾನ್ ಮಾಡಿದರೆ ಮಿಲಿ ಸುತ್ತಾಡಿದಲೆಲ್ಲಾ ವಿವರಣೆ ನೀಡುತ್ತಾ ಪರಿಚಯ ಮಾಡಿಕೊಡುತ್ತದೆ. ಮಿಲಿ ಐಟಿಎಫ್ನಲ್ಲಿನ ಚಟುವಟಿಕೆಗಳ ಬಗ್ಗೆ ಮಾಹಿತಿ ಹಾಗೂ ವಿವರ ನೀಡುತ್ತದೆ. ಅಂತಾರಾಷ್ಟ್ರೀಯ ಕಾರ್ಯಾಗಾರಗಳು, ಚಟುವಟಿಕೆಗಳು, ವೇಳಾಪಟ್ಟಿ, ಸಂಪನ್ಮೂಲ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುತ್ತಿದೆ. ಅಲ್ಲದೇ ಸ್ಟಾಲ್ಗಳು ಆಹಾರ ಮಳಿಗೆಗಳ ಬಗ್ಗೆಯೂ ಮಿಲಿ ಮಾರ್ಗದರ್ಶನ ಸಹಕಾರಿಯಾಗಿದೆ.
'ಆರೋಗ್ಯಕ್ಕೆ ಉತ್ತಮವಾಗಿದೆ ಸಿರಿಧಾನ್ಯ. ಮೊದಲಿನಿಂದಲೂ ಸಿರಿಧಾನ್ಯ ಬಳಸುತ್ತಿದ್ದೇನೆ. ಹಾಗಾಗಿ, ಮೇಳದಲ್ಲಿ ಖರೀದಿ ಮಾಡಲು ಬಂದಿದ್ದೇನೆ ' ಎಂದು ರಾಜಾಜಿನಗರದ ಗ್ರಾಹಕ ಮಧುಸೂದನ್ ಹೇಳಿದರು.
ಇದನ್ನೂ ಓದಿ : ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಿರಿಧಾನ್ಯ ಹೆಚ್ಚೆಚ್ಚು ಬಳಸಿ: ಸಿಎಂ ಸಿದ್ದರಾಮಯ್ಯ - ORGANIC AND MILLET FAIR