ಮಂಗಳೂರು: ಕಡಲ ಗಸ್ತು, ಕಡಲಿನಲ್ಲಿ ಅನಾಹುತಗಳ ನಿರ್ವಹಣೆ, ನಾಗರಿಕರ ರಕ್ಷಣೆಯ ಜವಾಬ್ದಾರಿ ಹೊಂದಿರುವ ಕೋಸ್ಟ್ ಗಾರ್ಡ್ ಸಮುದ್ರದ ಮಧ್ಯೆ ತನ್ನ ಕಾರ್ಯಾಚರಣೆಯ ರೋಚಕ ಅಣಕು ಪ್ರದರ್ಶನ ನೀಡಿ ಇಲಾಖೆಯ ಕಾರ್ಯ ಕ್ಷಮತೆಯನ್ನು ಸಾಬೀತುಪಡಿಸಿತು.
ರಾಜ್ಯಪಾಲರಿಂದ ಅಣಕು ಪ್ರದರ್ಶನ ಕುರಿತು ಮೆಚ್ಚುಗೆ ; ಭಾರತೀಯ ಕೋಸ್ಟ್ಗಾರ್ಡ್ನ 49ನೇ ಸ್ಥಾಪನಾ ದಿನದ ಅಂಗವಾಗಿ ಭಾನುವಾರ ಎನ್ಎಂಪಿಎ ಬಂದರಿನಿಂದ 20 ನಾಟಿಕಲ್ ಮೈಲಿ ದೂರದಲ್ಲಿ ವಿವಿಧ ನೌಕೆಗಳು, ಹೆಲಿಕಾಪ್ಟರ್ಗಳನ್ನು ಬಳಸಿ ಕೋಸ್ಟ್ ಗಾರ್ಡ್ ಸಿಬ್ಬಂದಿ ಮೈನವಿರೇಳಿಸುವ ಕಸರತ್ತು ಪ್ರದರ್ಶಿಸಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೌಕೆಯಲ್ಲಿದ್ದುಕೊಂಡೇ ಕೋಸ್ಟ್ ಗಾರ್ಡ್ನ ಸುಮಾರು 400 ಸಿಬ್ಬಂದಿಯ ಈ ಅಣುಕು ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಡಲ ಗಸ್ತು ಹಡಗು 'ವರಾಹ', ಇನ್ನೊಂದು ಹಡಗು 'ಸಕ್ಷಮ್', ಮೂರು ಫಾಸ್ಟ್ ಪ್ಯಾಟ್ರೋಲ್ ವೆಸೆಲ್ಗಳಾದ ಅಮಾರ್ತ್ಯ, ರಾಜ್ದೂತ್ ಹಾಗೂ ಸಾವಿತ್ರಿಭಾಯಿ ಫುಲೆ, ಎರಡು ಇಂಟರ್ಸೆಪ್ಟರ್ ಬೋಟುಗಳು, 'ಚೇತಕ್' ಹೆಲಿಕಾಪ್ಟರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು. ಸಮುದ್ರ ಮಾರ್ಗದ ಮೂಲಕ ಅಕ್ರಮ ಪ್ರವೇಶಕ್ಕೆ ತಡೆ, ಕಡಲುಗಳ್ಳರ ಪತ್ತೆ, ಸಮುದ್ರದಲ್ಲಿ ನಡೆಯುವ ಅವಘಡಗಳು ಹಾಗೂ ನಾಗರಿಕರ ರಕ್ಷಣೆಯ ಕ್ಷಿಪ್ರ ಕಾರ್ಯಾಚರಣೆಗಳನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ಪ್ರದರ್ಶಿಸಿದರು.
ಅಕ್ರಮ ಪ್ರವೇಶ ತಡೆಯುವ ಕಾರ್ಯಾಚರಣೆ ; ಭಾರತದ ಸೀಮಾರೇಖೆಯೊಳಗೆ ಅಕ್ರಮವಾಗಿ ಹಡಗು ಪ್ರವೇಶ ಮಾಡಿದಾಗ ಅದನ್ನು ಸುತ್ತುವರಿದು ಎಚ್ಚರಿಕೆಯ ಗುಂಡುಗಳನ್ನು ಹಾರಿಸಿ ವಶಕ್ಕೆ ಪಡೆಯುವ ಕಾರ್ಯಾಚರಣೆ ಆರಂಭದಲ್ಲಿ ನಡೆಯಿತು. ಸಮುದ್ರ ನಡುವೆ ಬೋಟ್ಗಳು ತೊಂದರೆಗೆ ಸಿಲುಕಿದಾಗ ಕ್ಷಿಪ್ರಗತಿಯಲ್ಲಿ ಸಾಗಿ ರಕ್ಷಣೆ ಮಾಡುವುದು, ಗಸ್ತು ಹಡಗಿನಲ್ಲಿರುವ- ಸಿಬ್ಬಂದಿ ಸಹಿತ 'ಲೈಫ್ ರಾಫ್ಟ್'ಗಳನ್ನು ಸಮುದ್ರಕ್ಕಿಳಿಸಿ ಅವುಗಳ ಮೂಲಕ ರಕ್ಷಣಾ ಕಾರ್ಯಾಚರಣೆ, ಹೆಲಿಕಾಪ್ಟರ್ನ ಹಗ್ಗದ ಮೂಲಕ ಸಮುದ್ರಕ್ಕಿಳಿದು ರಕ್ಷಣೆ, ಇವೆಲ್ಲದರ ಜತೆಗೆ ನೌಕಾ ಫಿರಂಗಿಗಳಿಂದ ನಡೆದ ಫೈರಿಂಗ್ ದೃಶ್ಯ ರೋಚಕವಾಗಿತ್ತು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರೊಂದಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಆಗರ್ವಾಲ್, ಕೋಸ್ಟ್ ಗಾರ್ಡ್-3 ಡಿಐಜಿ ಪಿ.ಕೆ. ಮಿಶ್ರಾ ಇದ್ದರು. ವಿಧಾನಸಭಾ ಸ್ಪೀಕರ್ ಯು. ಟಿ. ಖಾದರ್ ಕೂಡ ಗಸ್ತು ಹಡಗು ‘ವರಾಹ’ಕ್ಕೆ ಬಂದು ರಾಜ್ಯಪಾಲರ ಜತೆ ಕೋಸ್ಟ್ಗಾರ್ಡ್ ಅಧಿಕಾರಿ, ಸಿಬ್ಬಂದಿಯಿಂದ ಗೌರವ ರಕ್ಷೆ ಸ್ವೀಕರಿಸಿದರು.
ಇದನ್ನೂ ಓದಿ: ಗಣರಾಜ್ಯೋತ್ಸವ 2025: ದೆಹಲಿಯ ಕರ್ತವ್ಯ ಪಥದಲ್ಲಿ ಮಿಲಿಟರಿ ಶಕ್ತಿ, ಸಾಂಸ್ಕೃತಿಕ ಶ್ರೀಮಂತಿಕೆ ಪ್ರದರ್ಶನ