ಕರ್ನಾಟಕ

karnataka

ಯಾಗಿ ಚಂಡಮಾರುತಕ್ಕೆ ನಲುಗಿದ ವಿಯೆಟ್ನಾಂ; 254 ಸಾವು, 82 ಜನ ನಾಪತ್ತೆ - Deadly Typhoon Yagi

By ETV Bharat Karnataka Team

Published : Sep 14, 2024, 10:59 AM IST

ಭೀಕರ ಚಂಡಮಾರುತಕ್ಕೆ ವಿಯೆಟ್ನಾಂ ನಲುಗಿದೆ. ಈವರೆಗೆ 254 ಮಂದಿ ಸಾವನ್ನಪ್ಪಿದ್ದು, 82 ಜನ ಕಣ್ಮರೆಯಾಗಿದ್ದಾರೆ. ಇಂದು ಕೂಡ 149 ಕಿಲೋ ಮೀಟರ್​ ವೇಗದಲ್ಲಿ ರಕ್ಕಸ ಚಂಡಮಾರುತ ಬೀಸಲಿದೆ ಎಂದು ಅಲ್ಲಿನ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ.

Vietnam-typhoon-death
ಭೀಕರ ಚಂಡಮಾರುತಕ್ಕೆ ನಲುಗಿದ ವಿಯೆಟ್ನಾಂ (AP)

ಹನೋಯಿ (ವಿಯೆಟ್ನಾಂ): ಯಾಗಿ ಚಂಡಮಾರುತದ ಸಂಭವಿಸಿದ ಪರಿಣಾಮ ಭೂಕುಸಿತ ಮತ್ತು ಪ್ರವಾಹದಿಂದಾಗಿ ವಿಯೆಟ್ನಾಂನ ಉತ್ತರ ಭಾಗದಲ್ಲಿ 254 ಮಂದಿ ಸಾವನ್ನಪ್ಪಿದ್ದಾರೆ ಮತ್ತು 82 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಲ್ಲಿನ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯ ತಿಳಿಸಿದೆ.

ಲಾವೊ ಕೈ, ಕಾವೊ ಬ್ಯಾಂಗ್ ಮತ್ತು ಯೆನ್ ಬಾಯಿ ಅತ್ಯಂತ ಹೆಚ್ಚು ಹಾನಿಗೊಳಗಾದ ಪ್ರಾಂತ್ಯಗಳಾಗಿವೆ. ಸಾವುಗಳು ಕ್ರಮವಾಗಿ 111, 43 ಮತ್ತು 49 ಕ್ಕೆ ಏರಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ಶುಕ್ರವಾರ ವರದಿ ಮಾಡಿದೆ.

ಮೃತದೇಹಗಳ ಪತ್ತೆ ಕಾರ್ಯದಲ್ಲಿ ತೊಡಗಿರುವ ವಿಪತ್ತು ನಿರ್ವಹಣಾ ಪಡೆ (AP)

ವಿಪತ್ತು ತಡೆಗಟ್ಟುವಿಕೆ, ನಿಯಂತ್ರಣ, ಹುಡುಕಾಟ ಮುಂದುವರೆದಿದೆ. ನಗರದ ಸ್ಟೀರಿಂಗ್ ಸಮಿತಿಯ ಪ್ರಕಾರ, ರಾಜಧಾನಿ ಹನೋಯಿಯಲ್ಲಿ ಕೆಂಪು ನದಿಯ ಪ್ರವಾಹವು ಎಚ್ಚರಿಕೆಯ ಮಟ್ಟಕ್ಕಿಂತ ಕಡಿಮೆಯಾಗಿದೆ.

ಸ್ಥಳಾಂತರಿಸಲ್ಪಟ್ಟ ಜನರು ತಮ್ಮ ಮನೆಗಳಿಗೆ ಮರಳಿದ್ದಾರೆ. ಆದರೆ ಪ್ರವಾಹ ಪ್ರದೇಶಗಳನ್ನು ಸ್ವಚ್ಛಗೊಳಿಸಲು ಅನೇಕ ಪಡೆಗಳನ್ನು ಸಜ್ಜುಗೊಳಿಸಲಾಗಿದೆ.

ಈಶಾನ್ಯ ಪ್ರಾಂತ್ಯದ ಕ್ವಾಂಗ್ ನಿನ್ಹ್ ಚಂಡಮಾರುತದಿಂದ ಹಾನಿಗೊಳಗಾದ UNESCO ವಿಶ್ವ ಪರಂಪರೆಯ ಹಾ ಲಾಂಗ್ ಬೇಗಾಗಿ ಮೂರು ದಿನಗಳ ಸ್ವಚ್ಛತಾ ಅಭಿಯಾನವನ್ನು ಪ್ರಾರಂಭಿಸಿದೆ.

ಯಾಗಿ ಚಂಡಮಾರುತಕ್ಕೆ ನಲುಗಿದ ವಿಯೆಟ್ನಾಂ (AP)

ಚಂಡಮಾರುತದಿಂದ ಧ್ವಂಸಗೊಂಡ ಸುಮಾರು ಒಂದು ವಾರದ ನಂತರ ಶುಕ್ರವಾರ ಪ್ರವಾಸಿ ದೋಣಿಗಳ ಸಾಮಾನ್ಯ ಕಾರ್ಯಾಚರಣೆಯನ್ನು ಅಧಿಕೃತವಾಗಿ ಪುನರಾರಂಭಿಸಲಾಗಿದೆ ಎಂದು ವಿಯೆಟ್ನಾಂ ಸುದ್ದಿ ಸಂಸ್ಥೆ ವರದಿ ಮಾಡಿದೆ.

ವಿಯೆಟ್ನಾಂ ಫಾದರ್‌ಲ್ಯಾಂಡ್ ಫ್ರಂಟ್ ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ, ಯಾಗಿ ಚಂಡಮಾರುತ ಪೀಡಿತರಿಗೆ ಬೆಂಬಲವಾಗಿ ನಿಂತಿದ್ದು, ದೇಶಾದ್ಯಂತ ಜನರಿಂದ 775.5 ಬಿಲಿಯನ್ ದೇಣಿಗೆಯನ್ನು ಸ್ವೀಕರಿಸಿದೆ ಎಂದು ಘೋಷಿಸಿದೆ.

ಲಕ್ಷಾಂತರ ಮಕ್ಕಳು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ ಮತ್ತು ಶುದ್ಧ ನೀರು, ನೈರ್ಮಲ್ಯ ಮತ್ತು ಆರೋಗ್ಯದ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದು ಯುಎನ್ ಮಕ್ಕಳ ಸಂಸ್ಥೆ (ಯುನಿಸೆಫ್) ಹೇಳಿಕೆಯಲ್ಲಿ ತಿಳಿಸಿದೆ.

ಶಾಲೆಗಳು ಹಾನಿಗೊಳಗಾಗಿರುವುದರಿಂದ ಮತ್ತು ವಿದ್ಯುತ್ ಮತ್ತು ನೀರಿನ ಕೊರತೆಯಿಂದಾಗಿ ಸುಮಾರು ಎರಡು ಮಿಲಿಯನ್ ಮಕ್ಕಳು ಶಿಕ್ಷಣ, ಮಾನಸಿಕ ಸಾಮಾಜಿಕ ಬೆಂಬಲ ಮತ್ತು ಶಾಲಾ ಪೋಷಣೆ ಕಾರ್ಯಕ್ರಮಗಳಿಗೆ ಪ್ರವೇಶವಿಲ್ಲದೆ ಉಳಿದಿದ್ದಾರೆ ಎಂದು ಅದು ಸೇರಿಸಿದೆ.

ಇಂದು ಸಹ ಚಂಡಮಾರುತದ ಅಬ್ಬರ ಹೆಚ್ಚಲಿದ್ದು, ಗಂಟೆಗೆ 149 ಕಿ. ಮೀ. ವೇಗದಲ್ಲಿ ಬೀಸಲಿದೆ. ನಾಳೆ (ಭಾನುವಾರ) ಅದರ ವೇಗ ಕಡಿಮೆಯಾಗಲಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 8 ದಿನಗಳ ಪಯಣ 8 ತಿಂಗಳವರೆಗೆ ವೃದ್ಧಿ; ಬಾಹ್ಯಾಕಾಶದಿಂದಲೇ ಸುನೀತಾ ವಿಲಿಯಮ್ಸ್​ ಮೊದಲ ಮಾಧ್ಯಮಗೋಷ್ಟಿ - Sunita Williams Statement

ABOUT THE AUTHOR

...view details