ಕರ್ನಾಟಕ

karnataka

ಪ್ರಧಾನಿ ಮೋದಿ, ಅಧ್ಯಕ್ಷ ಜೆಲೆನ್ ಸ್ಕಿ ಮಾತುಕತೆ: 4 ದ್ವಿಪಕ್ಷೀಯ ಒಪ್ಪಂದಗಳಿಗೆ ಉಕ್ರೇನ್, ಭಾರತ ಸಹಿ - Ukraine India Bilateral Agreements

By ETV Bharat Karnataka Team

Published : Aug 23, 2024, 6:32 PM IST

ಭಾರತ ಮತ್ತು ಉಕ್ರೇನ್ ಶುಕ್ರವಾರ 4 ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿವೆ.

ಪ್ರಧಾನಿ ಮೋದಿ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ ಸ್ಕಿ ಭೇಟಿ
ಪ್ರಧಾನಿ ಮೋದಿ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ ಸ್ಕಿ ಭೇಟಿ (IANS)

ಕೀವ್ (ಉಕ್ರೇನ್): ಪ್ರಧಾನಿ ನರೇಂದ್ರ ಮೋದಿ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ ಸ್ಕಿ ನಡುವಿನ ಮಾತುಕತೆಯ ನಂತರ ಭಾರತ ಮತ್ತು ಉಕ್ರೇನ್ ಶುಕ್ರವಾರ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿವೆ. ಕೃಷಿ, ಆಹಾರ ಉದ್ಯಮ, ಔಷಧ, ಸಂಸ್ಕೃತಿ ಮತ್ತು ಮಾನವೀಯ ನೆರವು ಕ್ಷೇತ್ರಗಳಲ್ಲಿನ ಸಹಕಾರದ ವಿಷಯಗಳಲ್ಲಿ ಈ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ ಸ್ಕಿ ಅವರು ಕೀವ್​ನ ಮರಿನ್ ಸ್ಕಿ ಅರಮನೆಯಲ್ಲಿ ನಿಯೋಗ ಮಟ್ಟದ ಸಭೆ ನಡೆಸಿದರು ಮತ್ತು ಉಭಯ ದೇಶಗಳ ನಡುವಿನ ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಿದರು.

ಅರಮನೆಗೆ ಆಗಮಿಸಿದ ಪ್ರಧಾನಿ ಮೋದಿ ಜೆಲೆನ್ ಸ್ಕಿ ಅವರನ್ನು ಆತ್ಮೀಯವಾಗಿ ತಬ್ಬಿಕೊಂಡು ಕುಶಲೋಪರಿ ವಿಚಾರಿಸಿದ್ದು ವಿಶೇಷವಾಗಿತ್ತು. ಅರಮನೆಯಲ್ಲಿ ಹಾಜರಿದ್ದ ಉಕ್ರೇನ್ ಸರ್ಕಾರದ ವಿವಿಧ ಪ್ರತಿನಿಧಿಗಳೊಂದಿಗೆ ಪ್ರಧಾನಿ ಕೈಕುಲುಕಿದರು. ಪ್ರಧಾನಿ ಅವರೊಂದಿಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್, ಎನ್ಎಸ್ ಅಜಿತ್ ದೋವಲ್ ಮತ್ತು ಇತರರು ಇದ್ದರು.

ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಉಭಯ ನಾಯಕರು ಗುಪ್ತ ಸಭೆ ನಡೆಸಿದರು. ಇದೇ ಸಂದರ್ಭದಲ್ಲಿ ಉನ್ನತ ಮಟ್ಟದ ನಿಯೋಗ ಸಭೆಗಳು ನಡೆದವು. ಎರಡೂ ರಾಷ್ಟ್ರಗಳ ನಡುವೆ ಒಪ್ಪಂದಗಳು ಮತ್ತು ಸಹಯೋಗಗಳನ್ನು ಔಪಚಾರಿಕಗೊಳಿಸಲು ದಾಖಲೆ ವಿನಿಮಯ ನಡೆಯಿತು.

ರಷ್ಯಾದ ಆಕ್ರಮಣದಿಂದ ಮೃತಪಟ್ಟ ಮಕ್ಕಳಿಗೆ ನಾನು ಮತ್ತು ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದ್ದೇವೆ ಎಂದು ಅಧ್ಯಕ್ಷ ಜೆಲೆನ್ ಸ್ಕಿ ಶುಕ್ರವಾರ ಹೇಳಿದ್ದಾರೆ. "ಇಂದು ಕೀವ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ನಾನು ರಷ್ಯಾದ ಆಕ್ರಮಣದಿಂದ ಪ್ರಾಣ ಕಳೆದುಕೊಂಡ ಮಕ್ಕಳ ನೆನಪಿನಲ್ಲಿ ಗೌರವ ಸಲ್ಲಿಸಿದ್ದೇವೆ. ಪ್ರತಿಯೊಂದು ದೇಶದ ಮಕ್ಕಳು ಸುರಕ್ಷಿತವಾಗಿ ಬದುಕಲು ಅರ್ಹರು. ನಾವು ಇದನ್ನು ಸಾಧ್ಯವಾಗಿಸಬೇಕು" ಎಂದು ಜೆಲೆನ್ ಸ್ಕಿ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಪ್ರಧಾನಿ ಮೋದಿ ಉಕ್ರೇನ್​ಗೆ ಆಗಮಿಸಿರುವ ಸಂದರ್ಭದಲ್ಲಿ ಉಕ್ರೇನ್​ನಲ್ಲಿ ವಾಸಿಸುತ್ತಿರುವ ಭಾರತೀಯರು ಈ ಭೇಟಿಯ ಬಗ್ಗೆ ಸಾಕಷ್ಟು ನಿರೀಕ್ಷೆ ಹಾಗೂ ಭರವಸೆಗಳನ್ನು ಇಟ್ಟುಕೊಂಡಿದ್ದಾರೆ. ಸಂಭಾವ್ಯ ಕದನ ವಿರಾಮ ಅಥವಾ ಶಾಂತಿ ಸೂತ್ರ ಜಾರಿಯಾಗುವ ಬಗ್ಗೆ ಭಾರತೀಯರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ರಷ್ಯಾ ಮತ್ತು ಉಕ್ರೇನ್ ಮಧ್ಯದ ಸಂಘರ್ಷವನ್ನು ಕೊನೆಗಾಣಿಸಲಿ ಎಂದು ಅವರು ಹಾರೈಸಿದರು.

ಇದನ್ನೂ ಓದಿ : ನೇಪಾಳದಲ್ಲಿ ನದಿಗೆ ಬಿದ್ದ ಬಸ್: 14 ಭಾರತೀಯರ ಸಾವು ಶಂಕೆ - Nepal Bus Accident

ABOUT THE AUTHOR

...view details