2006ರಲ್ಲಿ "ಮುಖಾ ಮುಖಿ" ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ಶ್ವೇತಾ ಶ್ರೀವಾತ್ಸವ್, "ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ", "ಕಿರಗೂರಿನ ಗಯ್ಯಾಳಿಗಳು", "ರಾಘವೇಂದ್ರ ಸ್ಟೋರ್ಸ್", "ಹೋಪ್" ಮುಂತಾದ ಚಿತ್ರಗಳ ಮೂಲಕ ಕನ್ನಡಿಗರ ಮನ ಗೆದ್ದರು. ನಟಿಯಾಗಿ ಪರಿಚಿತರಾಗಿರುವ ಶ್ವೇತಾ ಶ್ರೀವಾತ್ಸವ್ ಈಗ ಲೇಖಕಿಯಾಗಿದ್ದಾರೆ.
ಎರಡು ದಶಕಗಳ ತಮ್ಮ ಸಿನಿಮಾ ಜರ್ನಿಯ ಅನುಭವಗಳನ್ನು ಪುಸ್ತಕ ರೂಪದಲ್ಲಿ ದಾಖಲಿಸಿದ್ದಾರೆ. ಈ ಪುಸ್ತಕಕ್ಕೆ "ರೆಕ್ಕೆ ಇದ್ದರೆ ಸಾಕೆ" ಎಂದು ಹೆಸರಿಟ್ಟಿದ್ದಾರೆ. ಇಂಗ್ಲಿಷ್ನಲ್ಲೂ ಈ ಪುಸ್ತಕ ಲಭ್ಯವಿದ್ದು, ಅದರ ಹೆಸರು against the grain. ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿರುವ ನಯನ ಸಭಾಂಗಣದಲ್ಲಿ ಶ್ವೇತಾ ಶ್ರೀವಾತ್ಸವ್ ಈ ಪುಸ್ತಕ ಅನಾವರಣಗೊಳಿಸಿ ಪುಸ್ತಕ ಬರೆಯಲು ಕಾರಣವನ್ನು ತೆರೆದಿಟ್ಟರು.
ಶ್ವೇತಾ ಶ್ರೀವಾತ್ಸವ್ ಅವರ ಪುಸ್ತಕ (ETV Bharat) ನಟಿ ಶ್ವೇತಾ ಶ್ರೀವಾತ್ಸವ್ ಮಾತನಾಡಿ, "ಮಹಿಳೆಯರು ಸಾಧಿಸಿದ ಪ್ರಗತಿಯ ಮಟ್ಟದಿಂದ ಸಮುದಾಯದ ಪ್ರಗತಿಯನ್ನು ಅಳೆಯಬೇಕು. ಇನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ ಮಾತು ಎಲ್ಲ ರಂಗಕ್ಕೂ ಅನ್ವಯಿಸುತ್ತದೆ. ಹೆಣ್ಣುಮಕ್ಕಳು ಮದುವೆ ಆದ ನಂತರ ಚಿತ್ರದಲ್ಲಿ ನಾಯಕಿಯಾಗಿ ನಟಿಸಬಾರದು ಎಂಬುದು ಎರಡು ದಶಕಗಳ ಹಿಂದೆ ನಾನು ನಟಿಸಲು ಆರಂಭಿಸಿದಾಗಲೂ ಇತ್ತು. ಈಗಲೂ ಇದೆ. ಅದಕ್ಕೆ ಕಾರಣ ಏನು? ಹೆಣ್ಣು ಸ್ವಾವಲಂಬಿ ಅಲ್ಲವೇ?" ಎಂದು ಕೇಳಿದರು.
"ಆಕೆ ಯಾವುದೇ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂದರೂ, ಗಂಡ ಅಥವಾ ತಂದೆಯ ಹೆಸರಿನ ಜೊತೆಗೆ ಗುರುತಿಸಿಕೊಳ್ಳುತ್ತಾಳೆ. ಈ ಪರಿಸ್ಥಿತಿ ಎಲ್ಲ ಕಾಲದಲ್ಲೂ ಪ್ರಸ್ತುತ. ಹಾಗಂತ ನಮ್ಮ ಸಾಧನೆಗೆ ಮನೆಯವರ ಸಹಕಾರ ಬೇಡ ಅಂತ ನಾನು ಹೇಳುತ್ತಿಲ್ಲ. ವಾಸ್ತವದ ಬಗ್ಗೆ ಮಾತನಾಡುತ್ತೇನೆ ಅಷ್ಟೇ. ಸರಿಸುಮಾರು ಇಪ್ಪತ್ತು ವರ್ಷಗಳ ನನ್ನ ಸಿನಿ ಬದುಕನ್ನು ಸಾಧನೆ ಅಂತ ನಾನು ಕರೆದುಕೊಳ್ಳುತ್ತೇನೆ. ಈ ಸಮಯದಲ್ಲಿ ನಾನು ಎದರಿಸಿದ ಸವಾಲುಗಳು, ಸನ್ನಿವೇಶಗಳು ಹಾಗೂ ಸಂತೋಷದ ವಿಚಾರಗಳು ಎಲ್ಲವನ್ನು ಈ ಪುಸ್ತಕದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ. ಇದನ್ನು ಬಯೋಪಿಕ್ ಅಂತಲೂ ಕರೆಯಬಹುದು" ಎಂದರು.
ನಟಿ ಶ್ವೇತಾ ಶ್ರೀವಾತ್ಸವ್ (ETV Bharat) "ನಾನು ಈ ಪುಸ್ತಕವನ್ನು ಮೊದಲು ಇಂಗ್ಲಿಷ್ನಲ್ಲಿ ಬರೆದಿದ್ದೆ. ತಾಯಿ ಭಾಷೆಯ ಬಗ್ಗೆ ನನಗೆ ಅಪಾರ ಪ್ರೀತಿ ಹಾಗೂ ಸೆಂಟಿಮೆಂಟ್. ಹೀಗಾಗಿ ಆನಂತರ ಕನ್ನಡದಲ್ಲೂ ಬರೆಯೋಣ ಅನಿಸಿತು. ಪ್ರಕಾಶಕರ ಬಳಿ ಹೇಳಿದೆ ಅವರು ಒಪ್ಪಿಕೊಂಡರು. ಲೇಖಕಿಯಾಗಿ ಇದು ಮೊದಲ ಹೆಜ್ಜೆ. ನನ್ನ ಮನೆಯವರು, ಸ್ನೇಹಿತರು, ನಿನ್ನ ಪುಸ್ತಕ ನೀನೆ ಬಿಡುಗಡೆ ಮಾಡುತ್ತೀಯಾ? ಅತಿಥಿಗಳನ್ನು ಕರೆಯುವುದಿಲ್ವಾ ಎಂದರು. ಇಲ್ಲ, ಎಲ್ಲರೂ ಮಾಡುವ ರೀತಿ ಮಾಡುವುದು ಬೇಡ ಎಂಬುದು ನನ್ನ ಉದ್ದೇಶವಾಗಿತ್ತು. ಆದರೆ ಮುಂದೊಂದು ದಿನ ಅದ್ಧೂರಿ ಸಮಾರಂಭವನ್ನು ಆಯೋಜಿಸುತ್ತೇನೆ. ಇಂದು ಭಾರತ ಸೇರಿದಂತೆ ಹದಿನೈದು ದೇಶಗಳಲ್ಲಿ ನನ್ನ ಪುಸ್ತಕ(ಆನ್ಲೈನ್) ಬಿಡುಗಡೆಯಾಗಿದೆ. ಅಷ್ಟೂ ದೇಶಗಳಲ್ಲಿ ಪುಸ್ತಕ ದೊರೆಯಲಿದೆ. ಸಹಕಾರ ನೀಡಿದ ಪ್ರತಿಯೊಬ್ಬರಿಗೂ, ವಿಶೇಷವಾಗಿ ನನ್ನ ಪತಿ ಅಮಿತ್ ಅವರಿಗೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ" ಎಂದರು.
ಇದನ್ನೂ ಓದಿ:ಯುವ ಪ್ರತಿಭೆಗಳ ಜೊತೆ ಸಿಂಪಲ್ ಸುನಿ ಹೊಸ ಪಯಣ: ಚಿತ್ರದ ಟೈಟಲ್ 'ದೇವರು ರುಜು ಮಾಡಿದನು'