ಮಂಗಳೂರು (ದಕ್ಷಿಣ ಕನ್ನಡ):ಹಿರಿಯ ರಂಗನಿರ್ದೇಶಕ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಸದಾನಂದ ಸುವರ್ಣ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ. ನಿರ್ದೇಶಕರಿಗೆ 93 ವರ್ಷ ವಯಸ್ಸಾಗಿತ್ತು. ಸದಾನಂದ ಸುವರ್ಣರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ನಾಳೆ ಮಧ್ಯಾಹ್ನ 1ರಿಂದ 3ರವರೆಗೆ ಪುರಭವನದಲ್ಲಿ ವ್ಯವಸ್ಥೆ ಮಾಡಲಾಗುವುದು. ಬಳಿಕ ಅವರ ಬಯಕೆಯಂತೆ ದೇಹದಾನ ಮಾಡಲಾಗುವುದು ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.
ಕನ್ನಡದಲ್ಲಿ ಅತ್ಯಂತ ಯಶಸ್ವಿ ರಂಗಭೂಮಿ ನಿರ್ದೇಶಕರಾಗಿ ನೂರಾರು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಕೋರ್ಟ್ಮಾರ್ಷಲ್, ಉರುಳು, ಮಳೆ ನಿಲ್ಲುವವರೆಗೆ, ಗುಡ್ಡದ ಭೂತ, ಸುಳಿ ಮುಂತಾದವು ಇವರ ಪ್ರಸಿದ್ಧ ಪ್ರಯೋಗಾತ್ಮಕ, ಸದಭಿರುಚಿಯ ನಾಟಕಗಳು. ಗಿರೀಶ್ ಕಾಸರವಳ್ಳಿ ಅವರ ಘಟಶ್ರಾದ್ಧ ಸಿನಿಮಾಗೆ ನಿರ್ಮಾಪಕರಾಗುವ ಮೂಲಕ ಸಿನಿರಂಗ ಪ್ರವೇಶಿಸಿದರು. ಈ ಸಿನಿಮಾಗೆ ಅತ್ಯುತ್ತಮ ಸಿನಿಮಾವೆಂದು ಸ್ವರ್ಣಕಮಲ ಪ್ರಶಸ್ತಿ ಲಭಿಸಿತ್ತು. ಬಳಿಕ ಕಾಸರವಳ್ಳಿಯವರ ತಬರನ ಕಥೆ, ಮನೆ ಮುಂತಾದ ಸಿನಿಮಾಗಳಿಗೆ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಕೆಲಸ ಮಾಡಿದ್ದರು.
ಬಳಿಕ ಕುಬಿ ಮತ್ತು ಇಯಾಲ ಎಂಬ ಸದಭಿರುಚಿಯ ಚಿತ್ರ ನಿರ್ದೇಶಿಸಿ ಉತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು. ಈ ಸಿನಿಮಾಕ್ಕೆ ನಾಲ್ಕು ಪ್ರಶಸ್ತಿ ಬಂದಿತ್ತು. ಬಳಿಕ ಇವರು ನಿರ್ದೇಶಿಸಿದ 'ಗುಡ್ಡೆದ ಭೂತ' ಜನಮನ್ನಣೆ ಗಳಿಸಿದ್ದು ಮಾತ್ರವಲ್ಲದೇ ಉತ್ತಮ ಧಾರಾವಾಹಿ ಪ್ರಶಸ್ತಿಯನ್ನೂ ಪಡೆದಿತ್ತು. ಹುಚ್ಚು ಮನಸ್ಸಿನ ಹತ್ತು ಮುಖಗಳು ಸಾಕ್ಷ್ಯಚಿತ್ರ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿತ್ತು.
ಇದನ್ನೂ ಓದಿ:ವಿಭಿನ್ನ ಪ್ರೇಮಕಥೆಯ 'ಕಡಲೂರ ಕಣ್ಮಣಿ' ಟ್ರೇಲರ್ ಅನಾವರಣ - Kadaloora Kanmani Trailer
ಮೂಲತಃ ದ.ಕ.ಜಿಲ್ಲೆಯ ಮುಲ್ಕಿಯವರಾದ ಸದಾನಂದ ಸುವರ್ಣ ಮುಂಬೈನಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದರು. ಅಲ್ಲಿ ರಾತ್ರಿ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ 5 ವರ್ಷ ಕೆಲಸ ಮಾಡಿದರು. ಬಳಿಕ ನಾಟಕ ರಚನೆ, ನಟನೆ, ನಿರ್ದೇಶನದಲ್ಲಿ 5 ದಶಕಗಳ ಕಾಲ ಶ್ರಮಿಸಿದ ಅವರು ಮುಂಬೈ ತೊರೆದು ಮಂಗಳೂರಿನಲ್ಲಿ ನೆಲೆಸಿದ್ದರು.
ಸಿಎಂ ಸಿದ್ದರಾಮಯ್ಯ ಟ್ವೀಟ್: ''ಹಿರಿಯ ರಂಗಕರ್ಮಿ, ಚಲನಚಿತ್ರ ನಿರ್ದೇಶಕ - ನಿರ್ಮಾಪಕ ಸದಾನಂದ ಸುವರ್ಣರ ನಿಧನದ ಸುದ್ದಿ ಕೇಳಿ ದು:ಖವಾಯಿತು. ಸದಾನಂದ ಸುವರ್ಣರು ನಿರ್ಮಿಸಿದ್ದ 'ಘಟಶ್ರಾದ್ಧ' ಚಿತ್ರ ಮತ್ತು ನಿರ್ದೇಶಿಸಿದ್ದ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ 'ಕುಬಿ ಮತ್ತು ಇಯಾಲ' ಕಥೆಯನ್ನಾಧರಿಸಿದ ಚಿತ್ರಗಳೆರಡೂ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳಿಗೆ ಭಾಜನವಾಗಿವೆ. ನೂರಾರು ಕನ್ನಡ ಮತ್ತು ತುಳು ನಾಟಕಗಳನ್ನು ನಿರ್ದೇಶಿಸಿದ್ದ ಸುವರ್ಣರ ರಂಗಗರಡಿಯಿಂದ ಬಂದಿರುವ ಹಲವಾರು ಪ್ರತಿಭಾವಂತ ನಟ - ನಟಿಯರು ಕಲಾಜಗತ್ತಿನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಸದಾನಂದ ಸುವರ್ಣರನ್ನು ಕಳೆದುಕೊಂಡಿರುವ ಅವರ ಶಿಷ್ಯವರ್ಗ ಮತ್ತು ಅಭಿಮಾನಿ ಬಳಗದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.
ಪ್ರಶಸ್ತಿಗಳು:
- ಇತ್ತೀಚೆಗೆ ಕರ್ನಾಟಕ ಸರ್ಕಾರ ಸದಾನಂದ ಸುವರ್ಣ ಅವರಿಗೆ ಪ್ರತಿಷ್ಠಿತ ಬಿ.ವಿ ಕಾರಂತ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
- ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಪ್ರಕಾಶನ ಮತ್ತು 'ಆತ್ಮಶಕ್ತಿ'ಯ ಚಾರಿಟೆಬಲ್ ಟ್ರಸ್ಟ್ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.
- 'ಘಟಶ್ರಾದ್ಧ' ಸಿನಿಮಾಗೆ ಸ್ವರ್ಣಕಮಲ ಪ್ರಶಸ್ತಿ ಲಭಿಸಿದೆ.
- ಕುಬಿ ಮತ್ತು ಇಯಾಲ ಚಿತ್ರಕ್ಕೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಸಿಕ್ಕಿದೆ.
- 'ಗುಡ್ಡದ ಭೂತ' ಧಾರಾವಾಹಿ ಆರ್ಯಭಟ ಪ್ರಶಸ್ತಿಯನ್ನು ಗೆದ್ದಿದೆ.
- ನಿರ್ದೇಶಕರಿಗೆ ಕರಾವಳಿ ಗೌರವ ಪ್ರಶಸ್ತಿಯನ್ನೂ ನೀಡಲಾಗಿದೆ.
ಇದನ್ನೂ ಓದಿ:'ಮ್ಯಾಕ್ಸ್' ಆಟ ಶುರು: ಆ್ಯಕ್ಷನ್ ಅವತಾರದಲ್ಲಿ ಅಬ್ಬರಿಸಿದ ಅಭಿನಯ ಚಕ್ರವರ್ತಿ - Sudeep Max Teaser