ನವದೆಹಲಿ: ಸೋಮವಾರ ಬಿಹಾರದ ಬಾಗಲ್ಪುರದಲ್ಲಿ ನಡೆಯಲಿರುವ ರೈತ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 19ನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ. ಒಟ್ಟು 22,000 ಕೋಟಿ ರೂ ಹಣವನ್ನು ವರ್ಗಾವಣೆ ಮಾಡಲಾಗುತ್ತಿದ್ದು, 9.8 ಕೋಟಿ ರೈತರು ನೇರ ಲಾಭ ಪಡೆಯಲಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಪಿಎಂ ಕಿಸಾನ್ ಯೋಜನೆಯಡಿ ರೈತರು ವಾರ್ಷಿಕ 6 ಸಾವಿರ ರೂ ಪಡೆಯುತ್ತಿದ್ದು, ಮೂರು ಕಂತಿನ ಮೂಲಕ ಪ್ರತೀ ನಾಲ್ಕು ತಿಂಗಳಿಗೊಮ್ಮೆ 2,000 ರೂ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತದೆ.
ಈ ಹಣ ಬಿಡುಗಡೆ ಕುರಿತು ಇಂದು ಘೋಷಣೆ ಮಾಡಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, "ಪ್ರಧಾನಮಂತ್ರಿಗಳು ಸೋಮವಾರ (ಫೆ.24ರಂದು) ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣವನ್ನು ಬಿಹಾರದ ಬಾಗಲ್ಪುರದಲ್ಲಿ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಿದ್ದಾರೆ. ಈ ಹಣ ನೇರವಾಗಿ ಅರ್ಹ ರೈತರ ಖಾತೆಗೆ ಜಮೆಯಾಗಲಿದೆ. ಒಟ್ಟು 22,000 ಕೋಟಿ ಹಣ 9.8 ಕೋಟಿ ರೈತರ ಪ್ರಯೋಜನಕ್ಕೆ ಸಿಗಲಿದೆ. 18ನೇ ಕಂತಿನ ಬಿಡುಗಡೆಯಲ್ಲಿ 9.6 ಕೋಟಿ ರೈತರು ಯೋಜನೆಯ ಲಾಭ ಪಡೆದಿದ್ದರು. ಇದೀಗ ಈ ಸಂಖ್ಯೆಯಲ್ಲಿ ಏರಿಕೆಯಾಗಿದೆ" ಎಂದು ಹೇಳಿದರು.
"2019ರ ಫೆಬ್ರವರಿಯಲ್ಲಿ ಪಿಎಂ ಕಿಸಾನ್ ಯೋಜನೆಗೆ ಚಾಲನೆ ನೀಡಲಾಗಿತ್ತು. ವಿಶ್ವದ ಅತಿ ದೊಡ್ಡ ನೇರ ಪ್ರಯೋಜನ ವರ್ಗಾವಣೆ ಯೋಜನೆ ಇದಾಗಿದೆ. ರೈತರ ಕೃಷಿ ಚಟುವಟಿಕೆಗಳಾದ ಬೀಜ ಖರೀದಿ ಮತ್ತು ರಸಗೊಬ್ಬರದ ಖರ್ಚಿಗೆ ಹಣ ನೆರವಾಗಲಿದೆ" ಎಂದು ಸಚಿವರು ತಿಳಿಸಿದರು.
ರೈತರ ಪ್ರತಿಭಟನೆ ವಿಚಾರ: ಪಂಜಾಬ್ ರೈತರ ಪ್ರತಿಭಟನೆ ಕುರಿತು ಮಾತನಾಡಿದ ಸಚಿವರು, "ಸರ್ಕಾರ ಕೃಷಿ ಸಮುದಾಯದ ಜೊತೆಗೆ ಸಭೆ ನಡೆಸುತ್ತಿದ್ದು, ಇದು ಮುಂದುವರೆಯಲಿದೆ. ಉತ್ಪಾದನೆ ಹೆಚ್ಚಳ, ವೆಚ್ಚ ಕಡಿತ, ರೈತರ ಆದಾಯ ಹೆಚ್ಚಳ ಹಾಗೂ ನೈಸರ್ಗಿಕ ಕೃಷಿಗೆ ಉತ್ತೇಜಿಸುವ ಕಾರ್ಯಕ್ಕೆ ಸರ್ಕಾರ ಬದ್ಧ" ಎಂದರು.
ಬಾಗಲ್ಪುರದ ಕಾರ್ಯಕ್ರಮದ ಕುರಿತು ಮಾತನಾಡುತ್ತಾ, "ಈ ಕಾರ್ಯಕ್ರಮದಲ್ಲಿ 2.5 ಕೋಟಿ ಕೃಷಿಕರು ನೇರ ಮತ್ತು ವರ್ಚುಯಲ್ ಆಗಿ ಭಾಗಿಯಾಗಲಿದ್ದಾರೆ. ಬಿಹಾರ ರಾಜ್ಯಪಾಲರು, ಸಿಎಂ ಮತ್ತು ರಾಜ್ಯಕ್ಕೆ ಸಂಬಂಧಿಸಿದ ಕೇಂದ್ರ ಸಚಿವರುಗಳೂ ಭಾಗಿಯಾಗಲಿದ್ದಾರೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ರೈತರ ಪ್ರತಿಭಟನೆಗೆ NRI ಜೋಡಿಯ ಬೆಂಬಲ: ಭತ್ತದ ಗದ್ದೆಯಲ್ಲೇ ಟೆಂಟ್ ಹಾಕಿ ಮದುವೆ