ಬೆಂಗಳೂರು: ಮಹಾಕುಂಭಮೇಳಕ್ಕೆ ತೆರಳಲು ಟಿಕೆಟ್ ಬುಕ್ ಮಾಡುವುದಾಗಿ ಅರ್ಚಕರೊಬ್ಬರಿಗೆ ವಂಚಿಸಿರುವ ಪ್ರಕರಣ ಬೆಂಗಳೂರಿನಲ್ಲಿ ವರದಿಯಾಗಿದೆ. ಫೇಸ್ಬುಕ್ ಆ್ಯಡ್ ನಂಬಿ 1.60 ಲಕ್ಷ ರೂ. ಕಳೆದುಕೊಂಡ 42 ವರ್ಷದ ಅರ್ಚಕರೊಬ್ಬರು ನೀಡಿರುವ ದೂರಿನ ಅನ್ವಯ ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ದೂರುದಾರ ಅರ್ಚಕರು ವೈಯಾಲಿಕಾವಲ್ನ ನಿವಾಸಿಯಾಗಿದ್ದು, ಮಹಾಕುಂಭಮೇಳದಲ್ಲಿ ಭಾಗಿಯಾಗುವ ಸಲುವಾಗಿ ಪ್ರಯಾಗ್ರಾಜ್ಗೆ ಪ್ರಯಾಣಿಸಲು ಇರುವ ಆಯ್ಕೆಗಳ ಕುರಿತು ಹುಡುಕಾಡುತ್ತಿದ್ದರು. ಫೇಸ್ಬುಕ್ನಲ್ಲಿ ಕಾರ್ತಿಕೇಯನ್ ಟೂರ್ಸ್ ಅಂಡ್ ಟ್ರಾವೆಲ್ಸ್ ಹೆಸರಿನಲ್ಲಿದ್ದ ಆ್ಯಡ್ ಗಮನಿಸಿದ್ದ ದೂರುದಾರರು ಸಂಪರ್ಕಿಸಿದ್ದರು.
ಫೋನ್ ಕರೆಯಲ್ಲಿ ಮಾತನಾಡಿದ್ದ ಅಪರಿಚಿತ ವ್ಯಕ್ತಿ, ಮಹಾಕುಂಭಮೇಳಕ್ಕೆ ತೆರಳಲು ಟಿಕೆಟ್ ಬುಕ್ ಮಾಡಿಕೊಡುವುದಾಗಿ ನಂಬಿಸಿ ಹಂತಹಂತವಾಗಿ 1.60 ಲಕ್ಷ ರೂ. ಹಣವನ್ನು ಆನ್ಲೈನ್ ಮೂಲಕ ಪಡೆದುಕೊಂಡಿದ್ದ. ಆದರೆ, ಹಣ ಕೈ ಸೇರಿದ ಬಳಿಕ ಟಿಕೆಟ್ ಬುಕ್ ಮಾಡಿಕೊಡದೇ ವಂಚಿಸಲಾಗಿದೆ ಎಂದು ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಸಿಇಎನ್ ಠಾಣೆ ಪೊಲೀಸರು ತನಿಖೆ ಕೈಗೊಂಡಿರುವುದಾಗಿ ತಿಳಿಸಿದರು.
ಈ ಹಿಂದೆ ಕುಂಭಮೇಳಕ್ಕೆ ಪ್ರವಾಸದ ಪ್ಯಾಕೇಜ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ವಂಚಿಸಿರುವ ಪ್ರಕರಣ ಜ್ಞಾನಭಾರತಿ ಠಾಣೆಯಲ್ಲಿ ವರದಿಯಾಗಿತ್ತು. ಬಿಡಿಎ ಲೇಔಟ್ನ ನಿವಾಸಿ ಪ್ರದೀಪ್ ಎಂಬುವವರಿಗೆ ಟೂರ್ಸ್ ಅಂಡ್ ಟ್ರಾವೆಲ್ಸ್ ಕಂಪನಿಯ ಪ್ರತಿನಿಧಿಗಳ ಹೆಸರಿನಲ್ಲಿ 64 ಸಾವಿರ ರೂ. ಪಡೆದು ವಂಚಿಸಲಾಗಿತ್ತು.
ಇದನ್ನೂ ಓದಿ: ವಿದೇಶದಲ್ಲಿ ಹಾರ್ಸ್ ಜಾಕಿ ಕೆಲಸಕ್ಕೆ ವೀಸಾ ಮಾಡಿಸಿಕೊಡುವುದಾಗಿ ವಂಚನೆ ಆರೋಪ: ದಂಪತಿ ಬಂಧನ