ಕರ್ನಾಟಕ

karnataka

By ETV Bharat Karnataka Team

Published : Jan 26, 2024, 7:26 PM IST

ETV Bharat / entertainment

'ಬಿಗ್​​ ಬಾಸ್​ ಗೆಲ್ಲೋರು ಯಾರು'? ಎಲಿಮಿನೇಟ್ ಆದ ಸ್ಪರ್ಧಿಗಳು ಏನಂತಾರೆ!

ಕನ್ನಡ ಬಿಗ್​ ಬಾಸ್​ನ ಎಲಿಮಿನೇಟೆಡ್ ಸ್ಪರ್ಧಿಗಳು ಸಂದರ್ಶನದಲ್ಲಿ, ಯಾರು ಗೆಲ್ಲಬಹುದು? ಎಂಬ ಪ್ರಶ್ನೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಆ ಹೆಸರುಗಳು ಈ ಕೆಳಗಿವೆ.

Bigg Boss
ಕನ್ನಡ ಬಿಗ್​​ ಬಾಸ್​

ಬಹುನಿರೀಕ್ಷಿತ 'ಬಿಗ್‌ ಬಾಸ್‌ ಕನ್ನಡ ಸೀಸನ್‌ 10'ರ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಫೈನಲಿ, ಕಿಚ್ಚ ಸುದೀಪ್‌ ಅವರು ಒಬ್ಬ ಸ್ಪರ್ಧಿಯ ಕೈಯನ್ನು ಎತ್ತಿ ಹಿಡಿಯುವ ಸಂದರ್ಭ ಸಮೀಪಿಸಿದೆ. ಬಿಗ್‌ ಬಾಸ್ ಮನೆಯೊಳಗೆ ರಾರಾಜಿಸುತ್ತಿರುವ ಕಪ್ ಒಬ್ಬ ಸ್ಪರ್ಧಿಯ ಕೈ ಸೇರಲಿದೆ. ಈ ಫಿನಾಲೆ ವಾರದಲ್ಲಿ ಮನೆಯೊಳಗೆ ಸಂಗೀತಾ, ವಿನಯ್, ಕಾರ್ತಿಕ್, ಪ್ರತಾಪ್, ತುಕಾಲಿ ಸಂತೋಷ್, ವರ್ತೂರು ಸಂತೋಷ್ ಸೇರಿ ಒಟ್ಟು ಆರು ಸದಸ್ಯರು ಉಳಿದುಕೊಂಡಿದ್ದಾರೆ. ಅಷ್ಟೇ ಅಲ್ಲ, ಮಿಡ್‌ ವೀಕ್ ಎಲಿಮಿನೇಷನ್ ಇರುವುದಿಲ್ಲ ಎಂದು ಈಗಾಗಲೇ ಬಿಗ್‌ ಬಾಸ್ ಹೇಳಿದ್ದಾರೆ. ಹಾಗಾಗಿ ಕುತೂಹಲ ಇನ್ನಷ್ಟು ಗರಿಗೆದರಿದೆ.

'ಬಿಗ್‌ ಬಾಸ್‌ ಕನ್ನಡ ಸೀಸನ್‌ 10'ರಲ್ಲಿ ಯಾರು ಗೆಲ್ಲುತ್ತಾರೆ? ಎಂಬ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದೆ. ವಾಗ್ವಾದಗಳೂ ನಡೆಯುತ್ತಿವೆ. ಪ್ರತಿಯೊಬ್ಬ ಸದಸ್ಯರ ಅಭಿಮಾನಿಗಳೂ ತಮ್ಮ ಮೆಚ್ಚಿನ ಸ್ಪರ್ಧಿಯ ಪರವಾಗಿ ಜೋರಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದಾರೆ. ಪ್ರತೀ ವಾರ ಬಿಗ್‌ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಸ್ಪರ್ಧಿಗಳು ಹೊರಗೆ ಬರುತ್ತಿದ್ದ ಹಾಗೇ ಜಿಯೋ ಸಿನಿಮಾ ಅವರೊಂದಿಗೆ ಎಕ್ಸ್‌ಕ್ಲೂಸಿವ್ 'ಬಿಗ್‌ಬ್ಯಾಂಗ್‌' ಸಂದರ್ಶನ ನಡೆಸುತ್ತಿತ್ತು.

ಪ್ರತಿಯೊಬ್ಬ ಸ್ಪರ್ಧಿಯ 'ಬಿಗ್‌ಬ್ಯಾಂಗ್ ಸಂದರ್ಶನ'ದಲ್ಲಿ ಕೇಳಲಾಗಿದ್ದ ಸಾಮಾನ್ಯ ಪ್ರಶ್ನೆಗಳು, ''ಅಂತಿಮ ಹಂತದಲ್ಲಿರುವ ಐವರು ಸ್ಪರ್ಧಿಗಳು ಯಾರು?'' ಮತ್ತು ''ಯಾರು ಗೆಲ್ಲಬಹುದು?'' ಎಂಬುದಾಗಿತ್ತು. ಎಲಿಮಿನೇಟ್​ ಆದ ಎಲ್ಲ ಸ್ಪರ್ಧಿಗಳ ಅಭಿಪ್ರಾಯ, ಊಹೆಯ ಪ್ರಕಾರ, ಈ ಬಾರಿಯ ಬಿಗ್‌ ಬಾಸ್‌ ಅನ್ನು ಯಾರು ಗೆಲ್ಲುತ್ತಾರೆ? ಕಪ್ ಯಾರ ಕೈ ಸೇರಲಿದೆ? ಎಂಬುದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ. ಇದು ಎಲಿಮಿನೇಟೆಡ್ ಸ್ಪರ್ಧಿಗಳ ಅಭಿಪ್ರಾಯ, ಊಹೆಯ ಆಧಾರದ ಮೇಲೆ ರೂಪಿಸಲಾದ ವರದಿ.

ಟಾಪ್‌ 5ನಲ್ಲಿ ಯಾರು ಇರುತ್ತಾರೆ? ಎಂದು ಕೇಳಲಾದ ಪ್ರಶ್ನೆಗೆ ಎಲಿಮಿನೇಟೆಡ್​​ ಸ್ಪರ್ಧಿಗಳು ನೀಡಿದ ಉತ್ತರದಲ್ಲಿ ಅತಿ ಹೆಚ್ಚು ಬಾರಿ ಉಲ್ಲೇಖಿತರಾದವರು ಸಂಗೀತಾ ಶೃಂಗೇರಿ. ಒಟ್ಟು ಒಂಬತ್ತು ಎಲಿಮಿನೇಟೆಡ್ ಸ್ಪರ್ಧಿಗಳು ಸಂದರ್ಶನದಲ್ಲಿ ಸಂಗೀತಾ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. ಕಾರ್ತಿಕ್ ಮಹೇಶ್ ಅವರು ಆರು ಬಾರಿ ಉಲ್ಲೇಖಿತರಾಗಿದ್ದಾರೆ. ತುಕಾಲಿ ಸಂತೋಷ್ ಕೂಡ ಆರು ಬಾರಿ ಕೇಳಿ ಬಂದಿದೆ. ವಿನಯ್ ಕೂಡ ಪದೇ ಪದೆ ಉಲ್ಲೇಖಿತಗೊಂಡಿರುವ ಸ್ಪರ್ಧಿಗಳಲ್ಲಿ ಒಬ್ಬರು.

ಸಂಗೀತಾ ಶೃಂಗೇರಿ

1.ಸಂಗೀತಾ ಶೃಂಗೇರಿ

ಕಾರ್ಯಕ್ರಮ ಆರಂಭವಾದ ಮೊದಲ ವಾರದಿಂದಲೇ ಮನೆಯ ಕೇಂದ್ರ ಬಿಂದುಗಳಲ್ಲಿ ಒಬ್ಬರಾಗಿದ್ದವರು ಸಂಗೀತಾ ಶೃಂಗೇರಿ. ನಂತರದ ದಿನಗಳಲ್ಲಿಯೂ ಟಾಸ್ಕ್‌ಗಳಲ್ಲಾಗಲಿ, ಮನೆಯ ಕೆಲಸಗಳಲ್ಲಾಗಲಿ, ಚಟುವಟಿಕೆಗಳಲ್ಲಾಗಲಿ, ನಾಮಿನೇಷನ್‌ ಪ್ರಕ್ರಿಯೆಯಲ್ಲಾಗಲಿ ಸಂಗೀತಾ ಅವರ ಹೆಸರು ಮುಂಚೂಣಿಯಲ್ಲಿ ಇದ್ದೇ ಇರುತ್ತಿತ್ತು. ಜಿದ್ದಾಜಿದ್ದಿ, ಜಗಳ, ಸ್ಟ್ರಾಟಜಿ ಎಲ್ಲದರಲ್ಲಿಯೂ ಸಂಗೀತಾ ಮುಂದಿರುತ್ತಿದ್ದರು. ಹೀಗಾಗಿಯೇ ಅವರನ್ನು ಮನೆಯೊಳಗೆ ವಿರೋಧಿಸುತ್ತಿದ್ದವರೂ ಕೂಡ ಟಾಪ್‌ 5ನಲ್ಲಿ ಸಂಗಿತಾ ಇರುತ್ತಾರೆ ಎಂದು ಊಹಿಸಿದ್ದರು. ಭಾಗ್ಯಶ್ರೀ, ನೀತು, ಸ್ನೇಹಿತ್, ಪವಿ ಪೂವಪ್ಪ, ಅವಿನಾಶ್, ಸಿರಿ, ತನಿಷಾ ನಮೃತಾ ಇವರೆಲ್ಲರೂ ಟಾಪ್‌ 5ನಲ್ಲಿ ಸಂಗೀತಾ ಇರುತ್ತಾರೆ ಎಂದು ಊಹಿಸಿದ್ದರು. ಅದರಲ್ಲಿ ತನಿಷಾ ಮತ್ತು ನಮ್ರತಾ ಅವರು ಈ ಬಾರಿಯ ಬಿಗ್‌ ಬಾಸ್‌ ಅನ್ನು ಸಂಗೀತಾ ಅವರೇ ಗೆಲ್ಲಬಹುದು ಎಂದು ಊಹಿಸಿದ್ದಾರೆ.

ತುಕಾಲಿ ಸಂತೋಷ್​

2.ತುಕಾಲಿ ಸಂತೋಷ್

ರಂಜನೆ ಮತ್ತು ತಂತ್ರಗಾರಿಕೆ ಎರಡರ ಮಿಶ್ರಣದಂತಿರುವ ತುಕಾಲಿ ಸಂತೋಷ್ ತಮ್ಮ ಜಾಣತನದಿಂದಲೇ ಬಿಗ್‌ ಬಾಸ್ ಮನೆಯೊಳಗೆ ತಮ್ಮ ಸ್ಥಾನವನ್ನು ಭದ್ರಮಾಡಿಕೊಳ್ಳುತ್ತಾ ಬಂದರು. ವರ್ತೂರು ಸಂತೋಷ್ ಜೊತೆಗಿನ ಅವರ ಸ್ನೇಹ ಸಂಬಂಧವಂತೂ ಅವರ ಜನಪ್ರಿಯತೆಯನ್ನು ಹೆಚ್ಚಿಸಿತು. ಮನೆಯೊಳಗಿನ ಅವರ ವರ್ತನೆ, ತಂತ್ರಗಾರಿಕೆಯನ್ನು ಗಮನಿಸಿದ ಉಳಿದ ಸದಸ್ಯರು ತುಕಾಲಿ ಟಾಪ್‌ 5ನಲ್ಲಿ ಇರುತ್ತಾರೆ ಎಂದು ಊಹಿಸಿದ್ದರು. ನಮ್ರತಾ, ಮೈಕಲ್, ಸಿರಿ, ಸ್ನೇಹಿತ್, ಭಾಗ್ಯಶ್ರೀ ಮತ್ತು ನೀತು ಅವರು ತುಕಾಲಿ ಅವರನ್ನು ಟಾಪ್‌ 5ನಲ್ಲಿ ನೋಡುತ್ತೇವೆ ಎಂದು ಹೇಳಿದ್ದರು.

ಕಾರ್ತಿಕ್​​ ಮಹೇಶ್

3.ಕಾರ್ತಿಕ್ ಮಹೇಶ್‌

ಲವಲವಿಕೆಯ ವ್ಯಕ್ತಿತ್ವ, ಎಲ್ಲದರಲ್ಲಿಯೂ ಪಾಲ್ಗೊಳ್ಳುವ ಉತ್ಸಾಹ, ಸ್ನೇಹಪರ, ಭಾವುಕ ಮನಸ್ಸು - ಈ ಎಲ್ಲಾ ಗುಣಗಳಿಂದ ಕಾರ್ತಿಕ್ ಮಹೇಶ್ ಮನೆಯ ಬಹುತೇಕ ಸದಸ್ಯರ ಮನಸ್ಸಲ್ಲಿ ಸ್ಥಾನ ಪಡೆಯುವಂತೆ ಮಾಡಿದ್ದವು. ಕಾರ್ತಿಕ್ ಅವರನ್ನು ಫೇಕ್‌ ಎಂದು ಉಳಿದ ಸದಸ್ಯರು ಉಲ್ಲೇಖಿಸಿದ್ದು ತುಂಬಾನೇ ವಿರಳ. ಇದು ಅವರ ವ್ಯಕ್ತಿತ್ವದ ಇನ್ನೊಂದು ಆಯಾಮವನ್ನು ಸೂಚಿಸುವಂತಿದೆ. ತನಿಷಾ, ಮೈಕಲ್, ಪವಿ, ಸಿರಿ, ಸ್ನೇಹಿತ್, ಭಾಗ್ಯಶ್ರೀ, ನೀತು ಅವರು ಕಾರ್ತಿಕ್ ಅವರನ್ನು ಟಾಪ್ 5ನಲ್ಲಿ ನೋಡುತ್ತೇವೆ ಎಂದು ಊಹಿಸಿದ್ದರು. ಅದರಲ್ಲಿಯೂ ಮನೆಯೊಳಗೆ ಆಪ್ತಸ್ನೇಹವನ್ನು ಕಾಪಾಡಿಕೊಂಡಿದ್ದ ತನಿಷಾ ಅವರು, ಕಾರ್ತಿಕ್ ಗೆಲ್ಲಬೇಕು ಎಂಬ ಆಸೆ ಇದೆ. ಆದರೆ ಸಂಗೀತಾ ಗೆಲ್ಲಬಹುದು ಅನಿಸುತ್ತಿದೆ ಎಂದು ಹೇಳಿದ್ದರು. ಸಿರಿ ಕೂಡ, ಕಾರ್ತಿಕ್ ಗೆಲ್ಲಬೇಕು ಎಂದು ಹೇಳಿದ್ದರು.

ವಿನಯ್​ ಗೌಡ

4.ವಿನಯ್ ಗೌಡ

'ಐ ಆ್ಯಮ್ ಎ ವಿಲನ್' ಎನ್ನುತ್ತಲೇ ಬಿಗ್​ ಬಾಸ್​ ಮನೆಯ ಒಳಹೋದ ವಿನಯ್ ಗೌಡ ಮನೆಯೊಳಗಿನ ಹಲವರ ಪಾಲಿಗೆ ಹೀರೋ ಆಗಿದ್ದು ಸತ್ಯ. ಒಂದು ಹಂತದಲ್ಲಿ ಸ್ವತಃ ಸುದೀಪ್‌ ಅವರೇ, ನಮ್ಮ ಕಣ್ಣಿಗೆ ಒಬ್ಬರು ಮಾತ್ರ ಫಿನಾಲೆ ವೀಕ್‌ಗೆ ಹೋಗುವ ಕಂಟೆಸ್ಟೆಂಟ್ ಆಗಿ ಕಾಣಿಸುತ್ತಿದ್ದಾರೆ. ಉಳಿದವರು ಅವರನ್ನು ಗೆಲ್ಲಿಸಲು ಪ್ರಯತ್ನಿಸುತ್ತಿರುವ ಹಾಗೆ ಕಾಣಿಸುತ್ತಿದೆ ಎಂದು ನೇರವಾಗಿ ಹೇಳಿದ್ದರು. ಅವರು ಹೇಳಿದ್ದು ವಿನಯ್ ಅವರ ಬಗ್ಗೆಯೇ. ನಂತರದ ವಾರಗಳಲ್ಲಿ ಈ ಲೆಕ್ಕಾಚಾರ ಬದಲಾಯಿತಾದರೂ, ವಿನಯ್ ಅವರು ತಮ್ಮದೇ ದಾರಿಯಲ್ಲಿ ಮುಂದೆ ನಡೆಯುತ್ತಲೇ ಬಂದರು. ನಮ್ರತಾ, ಮೈಕಲ್, ಪವಿ, ಸ್ನೇಹಿತ್‌ ಎಲ್ಲರೂ ವಿನಯ್ ಹೆಸರನ್ನು ಉಲ್ಲೇಖಿಸಿದ್ದಾರೆ. ಮೈಕಲ್‌, ನಮ್ರತಾ ಮತ್ತು ಸ್ನೇಹಿತ್ ವಿನಯ್ ಗೆಲ್ಲಬೇಕು ಎಂಬುದು ನನ್ನ ಆಸೆ ಎಂದು ಹೇಳಿಕೊಂಡಿದ್ದಾರೆ. ಇನ್ನೂ ಪ್ರತಾಪ್​ ಮತ್ತು ವರ್ತೂರ್ ಸಂತೋಷ್​ ಅವರ ಹೆಸರು ಹೆಚ್ಚು ಉಲ್ಲೇಖವಾಗಿಲ್ಲ.

ಪ್ರತಾಪ್​

5.ಪ್ರತಾಪ್​: ಡ್ರೋಣ್​ ವಿಚಾರವಾಗಿ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದ್ದ ಪ್ರತಾಪ್​​ ಬಿಗ್​ ಬಾಸ್​ ಮನೆ ಪ್ರವೇಶಿಸಿದ ಬಳಿಕ ಸಾಕಷ್ಟು ಜನಪ್ರಿಯರಾದರು. ಈಗಿನ ಪ್ರತಾಪ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ, ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಜನಪ್ರಿಯತೆ ಸಾಕಷ್ಟು ಹೆಚ್ಚಾಗಿದೆ.

ವರ್ತೂರ್ ಸಂತೋಷ್

6.ವರ್ತೂರ್ ಸಂತೋಷ್​: ಒಮ್ಮೆ ಮನೆಯಿಂದ ಹೊರ ಹೋಗುತ್ತೇನೆಂದು ಸ್ವತಃ ನಿರ್ಧಾರ ಕೈಗೊಂಡಿದ್ದ ವರ್ತೂರ್​ ಸಂತೋಷ್​ ಅವರೀಗ ಬಿಗ್​ ಬಾಸ್​ ಫೈನಲಿಸ್ಟ್. ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದು, ಗೆಲ್ಲಲಿ ಎಂಬ ಶುಭ ಹಾರೈಕೆಗಳು ಸೋಷಿಯಲ್​ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ:ಗ್ರ್ಯಾಂಡ್‌ ಫಿನಾಲೆ ಹೊಸ್ತಿಲಲ್ಲಿ ಬಿಗ್‌ ಬಾಸ್ ಕನ್ನಡ: ಟ್ರೋಫಿ ಗೆಲ್ಲುವ ಸ್ಪರ್ಧಿ ಯಾರು?

ಮನೆಯಿಂದ ಹೊರಬಂದ ಸ್ಪರ್ಧಿಗಳ ಊಹೆ ಏನೇ ಇದ್ದರೂ ಅದು ಊಹೆ ಮಾತ್ರವೇ. ಬಿಗ್‌ ಬಾಸ್ ಗೆಲ್ಲಲು ಸಾಧ್ಯವಾಗುವುದು ಜನರ ವೋಟ್‌ನಿಂದ. ಮನೆಯಿಂದಾಚೆಗೆ ಜನರ ಕಣ್ಣಿಗೆ ಅವರ ವ್ಯಕ್ತಿತ್ವ ಹೇಗೆ ಕಾಣಿಸುತ್ತಿದೆ, ಅದನ್ನು ಅವರು ಎಷ್ಟು ಮೆಚ್ಚಿಕೊಳ್ಳುತ್ತಿದ್ದಾರೆ, ಆ ಮೆಚ್ಚುಗೆ ಎಷ್ಟರಮಟ್ಟಿಗೆ ಮತಗಳಾಗಿ ಬದಲಾಗುತ್ತಿವೆ ಎನ್ನುವುದೇ ಗೆಲುವಿನ ನಿರ್ಣಾಯಕ ಸಂಗತಿ. ಹಾಗೇ ನೋಡಿದಾಗ, ಮನೆಯೊಳಗೆ ಉಳಿದಿರುವ ಪ್ರತಾಪ್, ವರ್ತೂರು ಸಂತೋಷ್ ಅವರ ಜನಪ್ರಿಯತೆ ಏನೂ ಕಮ್ಮಿ ಇಲ್ಲ. ಹಾಗಾಗಿ ಎಲಿಮಿನೇಟೆಡ್ ಸ್ಪರ್ಧಿಗಳ ಊಹೆಯನ್ನು ಸುಳ್ಳಾಗಿಸಿ ಇವರಿಬ್ಬರಲ್ಲಿ ಒಬ್ಬರು 'ಈ ಸಲ ಕಪ್ ನಮ್ದೆ' ಎಂದು ಗೆಲುವಿನ ನಗು ಬೀರಿದರೂ ಅಚ್ಚರಿಯಿಲ್ಲ. ಈ ಎಲ್ಲಾ ಊಹೆ, ನಿರೀಕ್ಷೆ, ಕುತೂಹಲ, ಆತಂಕಗಳಿಗೆ ಉತ್ತರ ಸಿಗಲು ಹೆಚ್ಚು ಕಾಯಬೇಕಾಗಿಲ್ಲ. ನಾಳೆ ಸಂಜೆ ಫಿನಾಲೆ ಕಾರ್ಯಕ್ರಮ ಪ್ರಸಾರ ಆಗಲಿದೆ. ಭಾನುವಾರ ನಡೆಯಲಿರುವ ಫಿನಾಲೆಯಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ.

ಇದನ್ನೂ ಓದಿ:ಬಿಗ್​ ಬಾಸ್​: ತುಕಾಲಿ ಮಹಾರಾಜರಿಗೆ ಮನೆಮಂದಿಯೆಲ್ಲ ಸೇವಕರು!

ABOUT THE AUTHOR

...view details