ಕರ್ನಾಟಕ

karnataka

ಕಿರುತೆರೆಗೆ ಮರಳಿದ 'ಅಶ್ವಿನಿ ನಕ್ಷತ್ರ' ಖ್ಯಾತಿಯ ಮಯೂರಿ - Actress Mayuri

By ETV Bharat Karnataka Team

Published : Jul 3, 2024, 8:08 AM IST

'ನನ್ನ ದೇವ್ರು' ಧಾರಾವಾಹಿ ಮೂಲಕ 'ಅಶ್ವಿನಿ ನಕ್ಷತ್ರ' ಖ್ಯಾತಿಯ ನಟಿ ಮಯೂರಿ ಕಿರುತೆರೆಗೆ ಮರಳಿದ್ದಾರೆ.

Mayuri with Avinash Diwakar
ಮಯೂರಿ ಅವಿನಾಶ್ ದಿವಾಕರ್ ಸ್ಕ್ರೀನ್​ ಶೇರ್ (ETV Bharat)

ಕೌಟುಂಬಿಕ ಮೌಲ್ಯಗಳನ್ನು ಬಿಂಬಿಸುವ ಸದಭಿರುಚಿಯ ಧಾರಾವಾಹಿಗಳಿಗೆ ಹೆಸರಾದ ಕಲರ್ಸ್ ಕನ್ನಡ ವಾಹಿನಿ ಇದೀಗ 'ನನ್ನ ದೇವ್ರು' ಎಂಬ ಹೊಸ ಕಥೆಯನ್ನು ಹೊತ್ತು ತಂದಿದೆ. ಈ ಮೂಲಕ ನಟಿ ಮಯೂರಿ ಬಹಳ ವರ್ಷಗಳ ನಂತರ ಕಿರುತೆರೆಗೆ ಮರಳಿದ್ದಾರೆ.

ಈ ಧಾರಾವಾಹಿಯಲ್ಲಿ ಮಯೂರಿಯದು ಸಣ್ಣ ಊರಿನ ಬಡ ನರ್ಸ್ ಪಾತ್ರ. ಊರೇ ಮೆಚ್ಚುವ ಉದ್ಯಮಿ ಸಚ್ಚಿದಾನಂದಗೆ ಸೇರಿದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ ಬಡ ಹುಡುಗಿಯೇ ಮಯೂರಿ. ಜನಾನುರಾಗಿ ಸಚ್ಚಿದಾನಂದನ ಇಪ್ಪತ್ತು ವರ್ಷದ ಮಗಳಿಗೆ ಅಪ್ಪನನ್ನು ಕಂಡರೆ ಇಷ್ಟವಿಲ್ಲ. ತನ್ನಿಂದ ದೂರಾಗಿ ಬದುಕುತ್ತಿರುವ ಮಗಳ ವಿಶ್ವಾಸವನ್ನು ಮರಳಿ ಗಳಿಸಿಕೊಳ್ಳಲು ಹಂಬಲಿಸುತ್ತಿರುವ ಸಚ್ಚಿದಾನಂದನ ಬದುಕಲ್ಲಿ ಮಯೂರಿಯ ಪ್ರವೇಶವಾಗುತ್ತದೆ. ತಾನು ಆರಾಧಿಸುವ ಸಚ್ಚಿದಾನಂದ ಅವರ ಬಾಳನ್ನು ಸರಿದಾರಿಗೆ ತರುವ ಹಾದಿಯಲ್ಲಿ ಮಯೂರಿ ಎದುರಿಸುವ ಸವಾಲುಗಳೇನು ಎಂಬುದೇ ಮುಂದಿನ ಕತೆ. ಸುತ್ತಲಿನವರ ಸಂಚುಗಳಿಂದ ಮಯೂರಿ ಹೇಗೆ ಸಚ್ಚಿದಾನಂದನನ್ನು ಕಾಪಾಡುತ್ತಾಳೆ ಎಂಬುದು ಕುತೂಹಲ.

ಅಶ್ವಿನಿ ನಕ್ಷತ್ರ ಎಂಬ ಜನಪ್ರಿಯ ಧಾರಾವಾಹಿ ಮೂಲಕ ಹೆಸರಾದ ಮಯೂರಿ ಬಹಳ ವರ್ಷಗಳ ನಂತರ ಟಿವಿಗೆ ಮರಳಿದ್ದು, 'ನನ್ನ ದೇವ್ರು' ಧಾರಾವಾಹಿಯಲ್ಲಿ ನಾಯಕಿಯಾಗಿದ್ದಾರೆ. ನಾಯಕನಾಗಿ ನಟಿಸುತ್ತಿರುವ ಅವಿನಾಶ್ ದಿವಾಕರ್ ಹಾಸ್ಯಚಕ್ರವರ್ತಿ ನರಸಿಂಹರಾಜು ಅವರ ಮೊಮ್ಮಗ ಅನ್ನುವುದು ಇನ್ನೊಂದು ವಿಶೇಷ. ಇವರೊಟ್ಟಿಗೆ ಯುಕ್ತಾ ಮಲ್ನಾಡ್, ಸ್ವಾತಿ, ವಿ.ಮನೋಹರ್, ರೇಖಾದಾಸ್, ನಿಶ್ಚಿತಾ ಗೌಡ, ಮಾಲತಿ ಸುಧೀರ್, ಯಮುನಾ ಶ್ರೀನಿಧಿ, ರವಿ ಬ್ರಹ್ಮ, ಅಭಿಷೇಕ್ ಶ್ರೀಕಾಂತ್ ಹೀಗೆ 'ನನ್ನ ದೇವ್ರು' ತಾರಾಗಣದಲ್ಲಿ ಜನಪ್ರಿಯ ನಟ ನಟಿಯರಿದ್ದಾರೆ. ಈ ಮೊದಲು 'ಒಲವಿನ ನಿಲ್ದಾಣ' ಧಾರಾವಾಹಿಯನ್ನು ನಿರ್ಮಿಸಿದ್ದ ಶ್ರುತಿ ನಾಯ್ಡು, ನನ್ನ ದೇವ್ರು ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. ಬೆಳ್ಳಿ ತೆರೆಯ ಮೇಲೆ ಖಳನಟನಾಗಿ ಗಮನ ಸೆಳೆದಿರುವ ರಮೇಶ್ ಇಂದಿರಾ ನನ್ನ ದೇವ್ರು ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.

'ನನ್ನ ದೇವ್ರು' ತಂಡ (ETV Bharat)

ಇದನ್ನೂ ಓದಿ:ಬ್ರೆಸ್ಟ್ ಕ್ಯಾನ್ಸರ್​​ ವಿರುದ್ಧ ಹೋರಾಡುತ್ತಿರುವ ಹೀನಾ ಖಾನ್​ಗೆ ಧೈರ್ಯ ತುಂಬಿದ ಸಮಂತಾ ರುತ್ ಪ್ರಭು - Samantha on Hina Khan

ಹೊಸ ಧಾರಾವಾಹಿ ಬಗ್ಗೆ ಉತ್ಸಾಹ ವ್ಯಕ್ತಪಡಿಸಿರುವ ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್, "ಸದಾ ಹೊಸತನಕ್ಕಾಗಿ ತುಡಿಯುವ ಕಲರ್ಸ್ ಕನ್ನಡ ಈ ಹೊಸ ಧಾರಾವಾಹಿಯ ಮುಖಾಂತರ ಮುಗ್ಧತೆ ಮತ್ತು ಪ್ರಾಮಾಣಿಕತೆಗೆ ತಂದೊಡ್ಡುವ ಸವಾಲುಗಳ ಕಥೆಯೊಂದನ್ನು ವೀಕ್ಷಕರಿಗೆ ಉಣಬಡಿಸಲಿದೆ" ಎಂದು ಹೇಳಿದರು.

ಇದನ್ನೂ ಓದಿ:'ಸನ್ ಆಫ್ ಸರ್ದಾರ್' ಸೀಕ್ವೆಲ್​ಗೆ ಸಜ್ಜಾದ ಅಜಯ್ ದೇವ್​​ಗನ್, ಸಂಜಯ್​ ದತ್​ - Son of Sardaar 2

ಜುಲೈ 8ರಿಂದ ಪ್ರಸಾರವಾಗಲಿರುವ ಧಾರಾವಾಹಿಯನ್ನು ನೀವು ಸೋಮವಾರದಿಂದ ಶುಕ್ರವಾರದವರೆಗೆ ಪ್ರತೀ ಸಂಜೆ 6:30ಕ್ಕೆ ವೀಕ್ಷಿಸಬಹುದು. ಕಲರ್ಸ್ ಕನ್ನಡದಲ್ಲಿ ಮುಂದಿನ ಸೋಮವಾರ ಸಂಜೆ ನನ್ನ ದೇವ್ರು ಧಾರಾವಾಹಿಯ ಮೊದಲ ಕಂತು ಪ್ರಸಾರವಾಗಲಿದೆ. ಇದನ್ನು ಜಿಯೋಸಿನಿಮಾ ಮೂಲಕವೂ ನೋಡಬಹುದಾಗಿದೆ.

ABOUT THE AUTHOR

...view details