ಬೆಳಗಾವಿ: ''ಬೀದರ್ ಎಟಿಎಂ ದರೋಡೆ ಪ್ರಕರಣದಲ್ಲಿ ಖಚಿತ ಮಾಹಿತಿ ಸಿಕ್ಕಿದೆ. ಉತ್ತರಪ್ರದೇಶದಲ್ಲಿ ಆರೋಪಿಗಳು ಇರುವ ಬಗ್ಗೆ ಗೊತ್ತಾಗಿದೆ. ಮೂರ್ನಾಲ್ಕು ದಿನಗಳಲ್ಲಿ ಅವರನ್ನು ಬಂಧಿಸಲಾಗುತ್ತದೆ'' ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ಈ ಬಗ್ಗೆ ಮಾಹಿತಿ ನೀಡಿದರು. ''ಜೊತೆಗೆ, ಮಂಗಳೂರಿನಲ್ಲಿ ಬ್ಯಾಂಕ್ ದರೋಡೆ ಮಾಡಿದ ಆರು ಜನರ ಪೈಕಿ ಮೂವರನ್ನು ತಮಿಳುನಾಡಿನ ತಿರುನಲ್ಲವೇಲಿಯಲ್ಲಿ ಚಿನ್ನಾಭರಣ ಮತ್ತು ನಗದು ಸಮೇತ ಬಂಧಿಸಲಾಗಿದೆ'' ಎಂದು ಹೇಳಿದರು.
ಬಂಧಿತ ಆರೋಪಿಗಳಿಂದ ಅವರು ದರೋಡೆ ಮಾಡಿದ್ದ ಎಲ್ಲವನ್ನೂ ವಶಕ್ಕೆ ಪಡೆಯಲಾಗಿದೆ. 3-4 ಕೆಜಿ ಚಿನ್ನಾಭರಣ, ನಗದು ಸೇರಿ ಒಟ್ಟು 4 ಕೋಟಿ ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಸದ್ಯ ವಿಚಾರಣೆ ಮಾಡುತ್ತಿದ್ದು, ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ತಿಳಿಸುತ್ತೇವೆ ಎಂದರು.
ದರೋಡೆ ಆರೋಪಿಗಳು ಬೇರೆ ಬೇರೆ ಗ್ಯಾಂಗ್: ''ಮಂಗಳೂರು ಮತ್ತು ಬೀದರ್ ಬ್ಯಾಂಕ್ ದರೋಡೆ ಪ್ರಕರಣಗಳು ಎರಡೂ ಬೇರೆ ಬೇರೆ ಗ್ಯಾಂಗ್ಗಳು. ಮಂಗಳೂರು ಪ್ರಕರಣದಲ್ಲಿ ತಮಿಳುನಾಡು ಮತ್ತು ಕೇರಳ ಆರೋಪಿಗಳಿದ್ದರೆ, ಬೀದರ್ ಪ್ರಕರಣದಲ್ಲಿ ಉತ್ತರಪ್ರದೇಶದವರಿದ್ದಾರೆ'' ಎಂದು ಮಾಧ್ಯಮದವರ ಪ್ರಶ್ನೆಗೆ ಪರಮೇಶ್ವರ್ ಉತ್ತರಿಸಿದರು.
ಇದನ್ನೂ ಓದಿ: ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ : ತಮಿಳುನಾಡಿನಲ್ಲಿ ಮೂವರು ಅರೆಸ್ಟ್
''ವಿಜಯಪುರದಲ್ಲಿ ಕಾರ್ಮಿಕರ ಮೇಲಿನ ಹಲ್ಲೆ ಬಗ್ಗೆ ಗೊತ್ತಾಗಿದೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಯಾರೂ ಕೂಡ ಅಷ್ಟೊಂದು ಅಮಾನವೀಯತೆಯಿಂದ ನಡೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ, ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ'' ಎಂದು ಸ್ಪಷ್ಟಪಡಿಸಿದರು.
ಹೊನ್ನಾವರದಲ್ಲಿ ಹಸು ಹತ್ಯೆ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಜಿ.ಪರಮೇಶ್ವರ್, ''ತನಿಖೆಗೆ ನಿನ್ನೆ ದಿನವೇ ಎರಡು ತಂಡಗಳನ್ನು ರಚಿಸಲಾಗಿದೆ. ಆದಷ್ಟು ಬೇಗನೇ ಆರೋಪಿಗಳನ್ನು ಬಂಧಿಸುತ್ತೇವೆ'' ಎಂದು ತಿಳಿಸಿದರು.
ಇದನ್ನೂ ಓದಿ: ಮೈಸೂರು: ಹಾಡಹಗಲೇ ಕಾರು ಕದ್ದೊಯ್ದ ದರೋಡೆಕೋರರು; ತನಿಖೆಗೆ 3 ಪೊಲೀಸ್ ತಂಡ ರಚನೆ