ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರಿಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ಆರೋಪಿ, ಭೀಕರ ದಾಳಿಯ ನಂತರ ಚೆನ್ನಾಗಿ ನಿದ್ರಿಸಿದ್ದ ಮತ್ತು ವರ್ಲಿಗೆ ತೆರಳುವ ಮೊದಲು ಬಟ್ಟೆ ಬದಲಾಯಿಸಿಕೊಂಡಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ನಟನಿಗೆ ಚಾಕುವಿನಿಂದ 6 ಬಾರಿ ಇರಿದ ದುಷ್ಕರ್ಮಿ : ಮುಂಬೈ ಪೊಲೀಸರು ಭಾನುವಾರ ಥಾಣೆ ನಗರದಲ್ಲಿ ಬಾಂಗ್ಲಾದೇಶಿ ಪ್ರಜೆ ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್ನನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಕಳ್ಳತನದ ಉದ್ದೇಶದಿಂದ ಆರೋಪಿ ಜನವರಿ 16ರ ಮುಂಜಾನೆ ಬಾಂದ್ರಾದಲ್ಲಿರುವ ಸದ್ಗುರು ಶರಣ್ ಕಟ್ಟಡದಲ್ಲಿರುವ ಸೈಫ್ ಕರೀನಾ ನಿವಾಸಕ್ಕೆ ನುಗ್ಗಿದ್ದ.
ಐದು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ : ದಾಳಿಯಲ್ಲಿ ನಟ ಸೈಪ್ ಅಲಿ ಖಾನ್ (54)ಗೆ ಹಲವು ಬಾರಿ ಚಾಕುವಿನಿಂದ ಆರೋಪಿ ಇರಿದಿದ್ದ. ಆ ಕೂಡಲೇ ಸೈಫ್ ಲೀಲಾವತಿ ಆಸ್ಪತ್ರೆಗೆ ದಾಖಲಿಸಿ, ಐದು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಯಶಸ್ವಿ ಚಿಕಿತ್ಸೆ ನಡೆದಿದ್ದು, ನಟ ಚೇತರಿಸಿಕೊಳ್ಳುತ್ತಿದ್ದಾರೆ.
ತನ್ನ ಬ್ಯಾಗ್ನಿಂದ ಸಿಕ್ಕಿಬಿದ್ದ ಆರೋಪಿ : ಪೊಲೀಸರಿಂದ ತಪ್ಪಿಸಿಕೊಳ್ಳಲು ಆರೋಪಿ ಶೆಹಜಾದ್ ಎಲ್ಲಾ ಮುನ್ನೆಚ್ಚರಿಕೆ ವಹಿಸಿದ್ದ. ಆದ್ರೆ ತನ್ನ ಬ್ಯಾಗ್ನಿಂದ ಸಿಕ್ಕಿಬಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಸಿಸಿಟಿವಿ ವಿಡಿಯೋದ ಸಹಾಯದಿಂದ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯು ಹೊತ್ತೊಯ್ದಿದ್ದ ಬ್ಯಾಗ್ ತನಿಖೆಗೆ ಆರೋಪಿ ಕುರಿತು ಸುಳಿವು ನೀಡಿದೆ ಎಂದು ಅಧಿಕಾರಿ ತಿಳಿಸಿದರು. ಸಿಸಿಟಿವಿ ದೃಶ್ಯಾವಳಿ, ಆನ್ಲೈನ್ ಪೇಮೆಂಟ್ಸ್ ಮಾಹಿತಿಯನ್ನಾಧರಿಸಿ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾದ ಆರೋಪಿಯ ಮುಖದ ಫೋಟೋದ ಸಹಾಯದಿಂದ, ಪೊಲೀಸರು ತನಿಖೆ ಕೈಗೊಂಡರು. ಅವನಂತೆ ಕಾಣುವ ಕ್ರಿಮಿನಲ್ ದಾಖಲೆಗಳನ್ನು ಹೊಂದಿರುವ ಜನರನ್ನು ಹುಡುಕಿದರು. ತನಿಖೆಯಲ್ಲಿ, ಕೆಲ ಶಂಕಿತರನ್ನು ವಶಕ್ಕೆ ಪಡೆದರು. ಆದ್ರೆ ಇದರಿಂದ ಆರೋಪಿ ಪತ್ತೆಯಾಗದ ಹಿನ್ನೆಲೆ, ಪೊಲೀಸರು ಬಾಂದ್ರಾ ಪ್ರದೇಶದ ಸಿಸಿಟಿವಿ ಫುಟೇಜ್ ಅನ್ನು ಮತ್ತೆ ಪರಿಶೀಲಿಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಶೂಟಿಂಗ್ ಸೆಟ್ಗೆ ಬಾರದ ನಟ; ಮನೆಗೆ ಹೋಗಿ ನೋಡಿದ್ರೆ ಯೋಗೇಶ್ ಮಹಾಜನ್ ಶವವಾಗಿ ಪತ್ತೆ!
ಆರೋಪಿ ಅಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಬಾಂದ್ರಾ ರೈಲು ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆತ ಬಟ್ಟೆ ಬದಲಾಯಿಸಿಕೊಂಡಿದ್ದ ಎಂದು ತಿಳಿಸಿದರು.
ಇದನ್ನೂ ಓದಿ: 'ಸ್ಟ್ರೆಚರ್ ತನ್ನಿ, ನಾನು ಸೈಫ್ ಅಲಿ ಖಾನ್': ರಕ್ತಸಿಕ್ತಗೊಂಡಿದ್ದ ನಟನನ್ನು ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕ ಹೇಳಿದ್ದಿಷ್ಟು
ಈ ಹಿಂದೆ ವರ್ಲಿಯ ಪಬ್ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಶೆಹಜಾದ್, ಜನವರಿ 16ರ ರಾತ್ರಿ ಅಲ್ಲೇ ಆವರಣದಲ್ಲಿಯೇ ಇದ್ದ, ಆದ್ರೆ ಯಾರೂ ಗಮನಿಸಿರಲಿಲ್ಲ. ಮರುದಿನ, ಕೆಲಸಕ್ಕಾಗಿ ಆ ಪ್ರದೇಶದ ಕಾರ್ಮಿಕ ಗುತ್ತಿಗೆದಾರರನ್ನು ಸಂಪರ್ಕಿಸಿ ಥಾಣೆಗೆ ತೆರಳಿದ್ದ.
ಕಾರ್ಮಿಕ ಗುತ್ತಿಗೆದಾರರು, ಶೆಹಜಾದ್ನ ಮೊಬೈಲ್ ನಂಬರ್ ಅನ್ನು ಪೊಲೀಸರಿಗೆ ಒದಗಿಸಿದರು. ಅವನು ಪರಾರಿಯಾಗಿದ್ದಾಗ ಕೆಲ ಆನ್ಲೈನ್ ವಹಿವಾಟುಗಳನ್ನು ನಡೆಸಿದ್ದು, ಅದು ಗಮನಕ್ಕೆ ಬಂದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು. ನ್ಯಾಯಾಲಯ ಆರೋಪಿಯನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.