ಕರ್ನಾಟಕ

karnataka

ETV Bharat / bharat

ಐವರು ಶಾಸಕರನ್ನು ನಾಮನಿರ್ದೇಶನ ಮಾಡಿದರೆ ಸುಪ್ರೀಂ ಕೋರ್ಟ್​ ಮೊರೆ: ಫಾರೂಕ್ ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಹೆಚ್ಚುವರಿ ಶಾಸಕರನ್ನು ನಾಮ ನಿರ್ದೇಶನ ಮಾಡಿದರೆ ಸುಪ್ರೀಂ ಕೋರ್ಟ್​ಗೆ ಹೋಗುವುದಾಗಿ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

By ETV Bharat Karnataka Team

Published : 5 hours ago

ಫಾರೂಕ್ ಅಬ್ದುಲ್ಲಾ
ಫಾರೂಕ್ ಅಬ್ದುಲ್ಲಾ (IANS)

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಐದು ಹೆಚ್ಚುವರಿ ಶಾಸಕರನ್ನು ನಾಮನಿರ್ದೇಶನ ಮಾಡುವಂತೆ ಲೆಫ್ಟಿನೆಂಟ್ ಗವರ್ನರ್​ಗೆ ಅಧಿಕಾರ ನೀಡುವ ನಿರ್ಧಾರವನ್ನು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ವಿರೋಧಿಸಿದ್ದಾರೆ. ಒಂದೊಮ್ಮೆ ಐವರು ಹೆಚ್ಚುವರಿ ಶಾಸಕರನ್ನು ನಾಮನಿರ್ದೇಶನ ಮಾಡಿದಲ್ಲಿ ಅದನ್ನು ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಹೆಚ್ಚುವರಿ ಶಾಸಕರನ್ನು ನಾಮನಿರ್ದೇಶನ ಮಾಡುವ ಅಧಿಕಾರ ಪ್ರದೇಶದ ಚುನಾಯಿತ ಸರ್ಕಾರಕ್ಕೆ ಮಾತ್ರ ಇದೆ ಎಂದು ಅವರು ಪ್ರತಿಪಾದಿಸಿದರು.

ಸಂವಿಧಾನದ ಅನ್ವಯ LG ನಾಮನಿರ್ದೇಶನ ಮಾಡುವಂತಿಲ್ಲ:"ಭಾರತದ ಸಂವಿಧಾನದ ಪ್ರಕಾರ, ಲೆಫ್ಟಿನೆಂಟ್ ಗವರ್ನರ್​ ನಾಮನಿರ್ದೇಶನ ಮಾಡುವಂತಿಲ್ಲ. ಅಧಿಕಾರಕ್ಕೆ ಬರುವ ಸರ್ಕಾರವೇ ಶಾಸಕರನ್ನು ನಾಮನಿರ್ದೇಶನ ಮಾಡುತ್ತದೆ. ಒಂದು ವೇಳೆ ಲೆಫ್ಟಿನೆಂಟ್ ಗವರ್ನರ್​ ನಾಮನಿರ್ದೇಶನ ಮಾಡಿದರೆ ನಾವು ಸುಪ್ರೀಂ ಕೋರ್ಟ್​ ಮೆಟ್ಟಿಲೇರುತ್ತೇವೆ. ಸುಪ್ರೀಂ ಕೋರ್ಟ್ ನಮ್ಮ ಮನವಿಯನ್ನು ಆಲಿಸುತ್ತದೆ ಮತ್ತು ಸಂವಿಧಾನದ ಪ್ರಕಾರ ನಮಗೆ ನ್ಯಾಯ ಸಿಗುತ್ತದೆ ಎಂದು ನಾವು ಭಾವಿಸುತ್ತೇವೆ" ಎಂದು ಅವರು ಹೇಳಿದ್ದಾರೆ.

ಏತನ್ಮಧ್ಯೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ವಿಧಾನಸಭೆಯ 90 ಚುನಾಯಿತ ಸದಸ್ಯರ ಜೊತೆಗೆ ಐದು ಸದಸ್ಯರನ್ನು ನಾಮನಿರ್ದೇಶನ ಮಾಡಲು ಸಜ್ಜಾಗಿದ್ದಾರೆ.

ಕಾಶ್ಮೀರದಲ್ಲಿ ಬಿಜೆಪಿ ದ್ವೇಷ ಹರಡುತ್ತಿದೆ ಎಂದ ಅಬ್ದುಲ್ಲಾ:ಕಾಂಗ್ರೆಸ್ ಬಗ್ಗೆ ಪ್ರಧಾನಿ ಮೋದಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅಬ್ದುಲ್ಲಾ, ಪ್ರಧಾನಿ ಮತ್ತು ಇತರ ಬಿಜೆಪಿ ನಾಯಕರು ಜಮ್ಮು ಪ್ರದೇಶದಲ್ಲಿ ದ್ವೇಷವನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದರು. "ಜಮ್ಮುವಿನಲ್ಲಿ ದ್ವೇಷಕ್ಕೆ ಜನ್ಮ ನೀಡಿದವರು ಯಾರು, ಅದು ಕಾಂಗ್ರೆಸ್ಸಾ? ಗೃಹ ಸಚಿವರು ಬಂದರು, ಪ್ರಧಾನಿ ಬಂದರು, ಅವರ ಅನೇಕ ಮಂತ್ರಿಗಳು ದ್ವೇಷವನ್ನು ಪ್ರಚೋದಿಸಲು ಇಲ್ಲಿಗೆ ಬಂದರು... ನಾವು ಎಂದಿಗೂ ಭಯೋತ್ಪಾದನೆಯನ್ನು ಬೆಂಬಲಿಸಿಲ್ಲ ಮತ್ತು ಎಂದಿಗೂ ಬೆಂಬಲಿಸುವುದಿಲ್ಲ." ಎಂದರು. ಕಾಂಗ್ರೆಸ್​ ರಾಜಕೀಯ ಲಾಭಕ್ಕಾಗಿ ಹಿಂದೂ ಸಮಾಜವನ್ನು ವಿಭಜಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಆರೋಪಿಸಿದ್ದರು.

NC - ಕಾಂಗ್ರೆಸ್​ ಮೈತ್ರಿಕೂಟಕ್ಕೆ ಸರಳ ಬಹುಮತ:ಏತನ್ಮಧ್ಯೆ, ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಕೂಟವು 49 ಸ್ಥಾನಗಳನ್ನು ಗೆಲ್ಲುವ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಪೂರ್ಣ ಬಹುಮತವನ್ನು ಗಳಿಸಿದೆ. ನ್ಯಾಷನಲ್ ಕಾನ್ಫರೆನ್ಸ್​ 42 ಮತ್ತು ಕಾಂಗ್ರೆಸ್ 6 ಸ್ಥಾನಗಳನ್ನು ಪಡೆದುಕೊಂಡಿವೆ. ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಫಾರೂಕ್ ಅಬ್ದುಲ್ಲಾ ಈಗಾಗಲೇ ಘೋಷಿಸಿದ್ದಾರೆ. ಆದರೆ ಸಿಎಂ ಆಯ್ಕೆಯ ವಿಚಾರ ಶಾಸಕರು ಮತ್ತು ಮೈತ್ರಿಕೂಟಕ್ಕೆ ಬಿಟ್ಟಿದ್ದು ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಇದನ್ನೂ ಓದಿ : ಫೋರ್ಬ್ಸ್ 100 ಶ್ರೀಮಂತ ಭಾರತೀಯರ ಪಟ್ಟಿ: ಅಂಬಾನಿ ನಂ.1, 2ನೇ ಸ್ಥಾನದಲ್ಲಿ ಅದಾನಿ

ABOUT THE AUTHOR

...view details