ಕರ್ನಾಟಕ

karnataka

ETV Bharat / bharat

ಸಾಲದ ವಾರದ ಕಂತು 200 ರೂ. ಪಾವತಿಸಲು ಸಾಧ್ಯವಾಗದೇ ಜೀವಕಳೆದುಕೊಂಡ ದಂಪತಿ! - COUPLE ENDS THEIR LIVES

ಚಂದನ ಖಾಸಗಿ ಸಾಲಗಾರನಿಂದ ವಾರಕ್ಕೆ 200 ರೂ. ಸಾಲದ ಕಂತು ನೀಡುವುದಾಗಿ ಹೇಳಿ, 2.50 ಲಕ್ಷ ಸಾಲವನ್ನು ಪಡೆದಿದ್ದರು.

unable-to-pay-rs-200-weekly-installment-couple-ends-their-lives
ಸಾವನ್ನಪ್ಪಿದ ದಂಪತಿಗಳು (ETV Bharat)

By ETV Bharat Karnataka Team

Published : Jan 1, 2025, 1:01 PM IST

ಭುಪಲಪಲ್ಲಿ (ತೆಲಂಗಾಣ):ಸಾಲ ಪಡೆದು ವಾರದ ಕಂತಾದ 200 ರೂಪಾಯಿ ನೀಡಲು ಸಾಧ್ಯವಾಗದೇ, ಸಾಲಗಾರರ ಕಿರುಕುಳದಿಂದ ದಂಪತಿಗಳಿಬ್ಬರು ಬದುಕಿಗೆ ವಿದಾಯ ಹೇಳಿರುವ ಹೃದಯವಿದ್ರಾವಕ ಘಟನೆ ಭುಪಲಪಲ್ಲಿ ಮಂಡಲದ ಕಮಲಪುರ ಗ್ರಾಮದಲ್ಲಿ ನಡೆದಿದೆ. ಬನೊತ್​ ದೇವೇಂದರ್​ (37) ಮತ್ತು ಆತನ ಹೆಂಡತಿ ಚಂದನ (32) ಸಾವನ್ನಪ್ಪಿದ ದಂಪತಿ. ಕೃಷಿ ಕೆಲಸ ಮಾಡಿಕೊಂಡು ಸಾಗುತ್ತಿದ್ದ ಈ ದಂಪತಿಗೆ 14 ಮತ್ತು 12 ವರ್ಷದ ಮಕ್ಕಳಿದ್ದು, ಅವರು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ.

ಏನಿದು ಘಟನೆ:ಗ್ರಾಮದ ಇತರೆ ಮಹಿಳೆಯರ ಜೊತೆ ಸೇರಿ ಚಂದನ ಖಾಸಗಿ ಸಾಲಗಾರನಿಂದ ವಾರಕ್ಕೆ 200 ರೂ. ಸಾಲದ ಕಂತು ನೀಡುವುದಾಗಿ ಹೇಳಿ, 2.50 ಲಕ್ಷ ಸಾಲವನ್ನು ಪಡೆದಿದ್ದರು. ವರ್ಷಗಳ ಕಾಲ ಸಾಲವನ್ನು ಕಟ್ಟುತ್ತಿದ್ದ ಚಂದನ ಕಳೆದ ಕೆಲವು ತಿಂಗಳಿನಿಂದ ಗಂಡ ಮತ್ತು ಮಕ್ಕಳು ಅನಾರೋಗ್ಯಕ್ಕೆ ತುತ್ತಾದ ಕಾರಣ ವಾರದ ಕಂತು ಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಕಂತು ಪಾವತಿ ಮಾಡದ ಹಿನ್ನೆಲೆ ಸಾಲಗಾರನ ಕಿರುಕುಳ ಕೂಡ ಹೆಚ್ಚಾಗಿದ್ದು, ಕುಟುಂಬದ ಮೇಲೆ ಆರ್ಥಿಕ ಸಂಕಷ್ಟದ ಹೊರೆ ಕೂಡ ಜಾಸ್ತಿಯಾಗಿ, ಇಬ್ಬರೂ ಮಾನಸಿಕವಾಗಿ ಕುಗ್ಗಿದ್ದರು.

ಈ ಒತ್ತಡವನ್ನು ತಾಳಲು ಕಷ್ಟವಾದ ಹಿನ್ನೆಲೆ ಡಿಸೆಂಬರ್​ 6ರಂದು ಚಂದನ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣಕ್ಕೆ ಅವರನ್ನು ನೆರೆಹೊರೆಯವರ ಸಹಾಯದಿಂದ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೇ ವೇಳೆ ಹೆಂಡತಿಯ ಪರಿಸ್ಥಿತಿಯಿಂದ ಚಿಂತೆಗೆ ಒಳಗಾದ ದೇವೆಂದ್ರ ಡಿಸೆಂಬರ್​​ 20ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇತ್ತ ಆಸ್ಪತ್ರೆಯಲ್ಲಿದ್ದ ಚಂದನ ಕೂಡ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಇದೀಗ ತಂದೆ ತಾಯಿಗಳನ್ನು ಕಳೆದುಕೊಂಡ ಇಬ್ಬರು ಮಕ್ಕಳು ಅನಾಥರಾಗಿದ್ದು, ಮಕ್ಕಳಿಗೆ ಸಹಾಯ ಮಾಡುವಂತೆ ಸರ್ಕಾರಕ್ಕೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಭುಪಲಪಲ್ಲಿ ಸಿಐ ನರೇಶ್​ ಕುಮಾರ್​ ತಿಳಿಸಿದ್ದಾರೆ.

ಇದನ್ನೂ ಓದಿ: ಹೊಸ ವರ್ಷದಂದೇ ಭೀಕರ ಕೊಲೆ ; ತಾಯಿ, ನಾಲ್ವರು ಸಹೋದರಿಯರನ್ನು ಕೊಂದ ಯುವಕ

ABOUT THE AUTHOR

...view details