ಕರ್ನಾಟಕ

karnataka

ETV Bharat / bharat

ತಮಿಳುನಾಡಿನ ಕಾಂಗ್ರೆಸ್ ಶಾಸಕಿ ವಿಜಯಾಧರಣಿ ಬಿಜೆಪಿ ಸೇರ್ಪಡೆ

ತಮಿಳುನಾಡಿನ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಹಾಲಿ ಶಾಸಕಿ ಎಸ್. ವಿಜಯಾಧರಣಿ ಶಾಕ್​ ನೀಡಿದ್ದು, ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ.

By ETV Bharat Karnataka Team

Published : Feb 24, 2024, 3:59 PM IST

Vijayadharani joins BJP
ವಿಜಯಾಧರಣಿ ಬಿಜೆಪಿ ಸೇರ್ಪಡೆ

ನವದೆಹಲಿ: ತಮಿಳುನಾಡಿನ ಹಾಲಿ ಶಾಸಕಿ ಎಸ್.ವಿಜಯಾಧರಣಿ ಕಾಂಗ್ರೆಸ್ ಪಕ್ಷ ತೊರೆದು ಶನಿವಾರ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ಈ ಬೆಳವಣಿಗೆ ನಡೆದಿದೆ. ಕಮಲ ಪಕ್ಷಕ್ಕೆ ಸೇರಿದ ಬೆನ್ನಲ್ಲೇ ವಿಜಯಾಧರಣಿ, ದೇಶಕ್ಕೆ ಪ್ರಧಾನಿ ಮೋದಿ ನಾಯಕತ್ವ ಅತ್ಯಂತ ಮಹತ್ವದ್ದಾಗಿದೆ ಎಂದೂ ಹೇಳಿದ್ದಾರೆ.

ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಇಂದು ಕೇಂದ್ರ ಸಚಿವ ಎಲ್.ಮುರುಗನ್ ಮತ್ತು ತಮಿಳುನಾಡಿನ ಬಿಜೆಪಿ ಚುನಾವಣಾ ಉಸ್ತುವಾರಿ, ರಾಷ್ಟ್ರೀಯ ಕಾರ್ಯದರ್ಶಿ ಅರವಿಂದ್ ಮೆನನ್ ಸಮ್ಮುಖದಲ್ಲಿ ವಿಜಯಾಧರಣಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ವಿಜಯಾಧರಣಿ ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿಲವನ್‌ಕೋಡ್‌ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ವಿಲವನ್‌ಕೋಡ್‌ ಕ್ಷೇತ್ರದಲ್ಲಿ ಬಿಜೆಪಿ ಸಹ ಗೆಲುವು ಸಾಧಿಸಿತ್ತು ಎಂಬುದು ಗಮನಾರ್ಹವಾಗಿದೆ.

ಬಿಜೆಪಿಗೆ ಸೇರುವ ಮೊದಲು ವಿಜಯಾಧರಣಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ತಮ್ಮ ಪತ್ರವನ್ನು ಸಾಮಾಜಿಕ ಜಾಲತಾಣ 'ಎಕ್ಸ್‌' ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಕಾಂಗ್ರೆಸ್​ನ ಹಾಲಿ ಶಾಸಕ ಸ್ಥಾನವನ್ನು ತೊರೆದು ವಿಜಯಾಧರಣಿ ಪಕ್ಷಕ್ಕೆ ಬಂದಿರುವುದರಿಂದ ದಕ್ಷಿಣ ರಾಜ್ಯ ತಮಿಳುನಾಡಿನಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ಶಕ್ತಿ ತುಂಬಿದಂತಾಗಿದೆ. ಅಲ್ಲದೇ, ಬಿಜೆಪಿ ಸೇರಿದ ಬಳಿಕ ಅವರು, ಪ್ರಧಾನಿ ಮೋದಿ, ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಹಾಗೂ ಕೇಂದ್ರ ಸರ್ಕಾರದ ಹಲವಾರು ಉತ್ತಮ ಯೋಜನೆಗಳನ್ನು ಶ್ಲಾಘಿಸಿದ್ದಾರೆ.

ದೇಶದಲ್ಲಿ ಸಾಕಷ್ಟು ಮಹತ್ತರವಾದ ಕೆಲಸಗಳು ನಡೆಯುತ್ತಿವೆ. ಮಹಿಳೆಯರಿಗೆ ಬಿಜೆಪಿ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ ಎಂದ ವಿಜಯಾಧರಣಿ, ತಮಿಳುನಾಡಿನ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರದಲ್ಲಿ ಕೆಲ ಯೋಜನೆಗಳು ಜಾರಿಯಾಗುತ್ತಿಲ್ಲ ಎಂದು ದೂರಿದರು. ಇದೇ ವೇಳೆ, ಕೇಂದ್ರ ಸಚಿವ ಮುರುಗನ್ ಮಾತನಾಡಿ, ಮೋದಿ ಅವರ ಕೈ ಬಲಪಡಿಸಲು ಸಮಾಜದ ವಿವಿಧ ವರ್ಗಗಳ ಜನರು ಬಿಜೆಪಿ ಸೇರಲು ಮುಂದೆ ಬರುತ್ತಿದ್ದಾರೆ ಎಂದು ತಿಳಿಸಿದರು.

ಮತ್ತೊಂದೆಡೆ, ವಿಜಯಾಧರಣಿ ಸೇರ್ಪಡೆಯನ್ನು ಅಣ್ಣಾಮಲೈ ಸ್ವಾಗತಿಸಿದ್ದು, ಕಾಂಗ್ರೆಸ್ ಪಕ್ಷದ ವಿಲವನ್‌ಕೋಡ್‌ ಕ್ಷೇತ್ರದ ವಿಧಾನಸಭಾ ಸದಸ್ಯೆ, ಸಹೋದರಿ ವಿಜಯಧರಣಿ ಅವರು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ನಾಯಕರ ನಾಯಕತ್ವದಿಂದ ಪ್ರಭಾವಿತರಾಗಿ ಇಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ನಾನು ಸೋದರಿ ವಿಜಯಾಧರಣಿ ಅವರನ್ನು ಸ್ವಾಗತಿಸುತ್ತೇನೆ. ಅವರ ಸೇರ್ಪಡೆಯು ತಮಿಳುನಾಡು ಬಿಜೆಪಿಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು 'ಎಕ್ಸ್‌' ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನು, 2019ರ ಸಾರ್ವತ್ರಿಕ ಚುನಾವಣೆಯಲ್ಲಿ ತಮಿಳುನಾಡಿನ 39 ಲೋಕಸಭಾ ಸ್ಥಾನಗಳಲ್ಲಿ ಒಂದು ಕ್ಷೇತ್ರದಲ್ಲೂ ಬಿಜೆಪಿಗೆ ಗೆಲ್ಲಲು ಸಾಧ್ಯವಾಗಿಲ್ಲ. ಮುಂಬರುವ ಲೋಕಸಭೆ ಚುನಾವಣೆ ಮೇಲೆ ಕೇಸರಿ ಪಡೆ ಸಾಕಷ್ಟು ಗಮನ ಹರಿಸಿದ್ದು, ಅಣ್ಣಾಮಲೈ ಪಾದಯಾತ್ರೆ ಮೂಲಕ ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಇದನ್ನೂ ಓದಿ:ವಿಧಾನಸಭೆ-ಲೋಕಸಭಾ ಚುನಾವಣೆ: 175 ರಲ್ಲಿ 118 ಸ್ಥಾನಗಳ ಅಭ್ಯರ್ಥಿಯ ಮೊದಲ ಪಟ್ಟಿ ಬಿಡುಗಡೆ ಮಾಡಿದ ಜನಸೇನಾ, ಟಿಡಿಪಿ

ABOUT THE AUTHOR

...view details