ನವದೆಹಲಿ: ನಾಲ್ಕು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಬಳಿಕ ಎರಡೇ ತಿಂಗಳಲ್ಲಿ ಬೇರ್ಪಟ್ಟ ದಂಪತಿಗೆ ಸುಪ್ರೀಂಕೋರ್ಟ್ ವಿಚ್ಛೇದನ ನೀಡಿದೆ. ಜೊತೆಗೆ ಪತ್ನಿಗೆ ಜೀವನಾಂಶವಾಗಿ 10 ಲಕ್ಷ ರೂಪಾಯಿ ನೀಡಲು ಪತಿಗೆ ಸೂಚಿಸಿತು.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪ್ರಸನ್ನ ಬಿ. ವರಾಲೆ ಅವರಿದ್ದ ದ್ವಿಸದಸ್ಯ ಪೀಠವು, ಇಬ್ಬರ ದಾಂಪತ್ಯ ಮತ್ತೆ ಹಳಿಗೆ ಬರುವ ಯಾವುದೇ ಸೂಚನೆ ಇಲ್ಲದ ಕಾರಣ, ವಿಚ್ಛೇದನ ನೀಡಲಾಗುತ್ತಿದೆ. ವ್ಯಕ್ತಿಯು ತನ್ನ ಪರಿತ್ಯಕ್ತ ಪತ್ನಿಗೆ 10 ಲಕ್ಷ ರೂಪಾಯಿ ಜೀವನಾಂಶವನ್ನು ಮೂರು ತಿಂಗಳೊಳಗೆ ನೀಡಬೇಕು ಎಂದು ಗಡುವು ನೀಡಿ ಪ್ರಕರಣವನ್ನು ಮುಗಿಸಿತು.
ಪ್ರಕರಣದ ವಿವರ : ನಾಲ್ಕು ವರ್ಷಗಳ ಕಾಲ ಪ್ರೀತಿಸಿದ್ದ ಜೋಡಿಯೊಂದು 2012 ರಲ್ಲಿ ವಿವಾಹವಾಗಿದ್ದರು. ಬಳಿಕ ಎರಡು ತಿಂಗಳು ದಾಂಪತ್ಯ ಜೀವನ ನಡೆಸಿದ್ದ ಅವರಲ್ಲಿ ಮುನಿಸು ಉಂಟಾಗಿತ್ತು. ಗಂಡನಿಂದ ದೂರವಾಗಿ ಪತ್ನಿ ಬಳಿಕ ತನಗೆ ವಿಚ್ಛೇದನ ನೀಡಬೇಕು ಎಂದು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಕೌಟುಂಬಿಕ ಕೋರ್ಟ್, ಮಹಿಳೆ ಮಾಡಿದ ವರದಕ್ಷಿಣೆ, ಮಾನಸಿಕ ಕ್ರೌರ್ಯ, ಹಿಂಸೆಯ ಆರೋಪಗಳನ್ನು ನಿರಾಕರಿಸಿತ್ತು. 4 ವರ್ಷಗಳ ಕಾಲ ಆತನನ್ನು ಪ್ರೀತಿಸಿ ವಿವಾಹವಾದ ಎರಡು ತಿಂಗಳಲ್ಲಿ ಪತಿಯನ್ನು ತ್ಯಜಿಸಿದ್ದಾಳೆ. ಇದು ಕೌಟುಂಬಿಕ ಹಿಂಸೆ ಅಡಿ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದಿತ್ತು. ಜೊತೆಗೆ ಪತಿಯ ಪರವಾಗಿ ತೀರ್ಪು ನೀಡಿ, 2017 ರಲ್ಲಿ ವಿವಾಹವನ್ನು ರದ್ದು ಮಾಡಿತ್ತು.
ಈ ತೀರ್ಪನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದು ಅರ್ಜಿಯನ್ನು ವಜಾ ಮಾಡಿತ್ತು. ಎರಡೂ ಕೋರ್ಟ್ಗಳಲ್ಲಿ ತನಗಾದ ಹಿನ್ನಡೆಯನ್ನು ಪ್ರಶ್ನಿಸಿ ಮಹಿಳೆ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಪತಿ ಮತ್ತು ಪತ್ನಿ ಇಬ್ಬರೂ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಈಗಾಗಲೇ ವ್ಯಕ್ತಿಯು ಇನ್ನೊಂದು ವಿವಾಹವಾಗಿದ್ದಾನೆ. ಹೀಗಾಗಿ, ಮೊದಲ ಪತ್ನಿಗೆ ಜೀವನಾಂಶ ನೀಡಬೇಕು ಎಂದಿತು. ಮಹಿಳೆಯೂ ಪರಿತ್ಯಕ್ತ ಪತಿಯೊಂದಿಗೆ ಎರಡೇ ತಿಂಗಳು ಸಹಬಾಳ್ವೆ ನಡೆಸಿದ ಕಾರಣ, ದೊಡ್ಡ ಮೊತ್ತದ ಬೇಡಿಕೆ ಇಡಲು ಸಾಧ್ಯವಿಲ್ಲ. ಇಲ್ಲಿ ಯಾವುದೇ ಕ್ರೌರ್ಯವೂ ನಡೆದಿಲ್ಲ ಎಂದು ಅಭಿಪ್ರಾಯಪಟ್ಟಿತು.
ಸಮಯ ನೀಡದ್ದೇ ದೊಡ್ಡ ಕಾರಣ : ದಂಪತಿಯ ವಿಚ್ಛೇದನಕ್ಕೆ 'ಸಮಯ' ಕಾರಣವಾಗಿದೆ. ವಿವಾಹವಾದ 15 ದಿನದಲ್ಲಿ ವ್ಯಕ್ತಿಯ ತಂದೆಯು ಅನಾರೋಗ್ಯಕ್ಕೀಡಾಗಿದ್ದರು. ವೈದ್ಯಕೀಯ ತಪಾಸಣೆ ಹಿನ್ನೆಲೆಯಲ್ಲಿ ಪತಿಯು ಮಹಿಳೆಗೆ ಹೆಚ್ಚಿನ ಸಮಯ ನೀಡಿರಲಿಲ್ಲ. ಹೀಗಾಗಿ, ಮುನಿಸಿಕೊಂಡ ಪತ್ನಿ ಎರಡೇ ತಿಂಗಳಲ್ಲಿ ಮನೆಯಿಂದ ಹೊರಬಿದ್ದಿದ್ದರು. ಜೊತೆಗೆ ಕೂಡು ಕುಟುಂಬದ ಜೊತೆ ಬದುಕಲು ಆ ಮಹಿಳೆಗೆ ಇಷ್ಟವಿರಲಿಲ್ಲ ಎಂಬ ಆರೋಪವೂ ಇದೆ.