ಮುಂಬೈ , ಮಹಾರಾಷ್ಟ್ರ:ಕಳೆದ ಕೆಲವು ದಿನಗಳಿಂದ ಮುಂಬೈನಲ್ಲಿ ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ಇತ್ತೀಚೆಗೆ ಕುರ್ಲಾದಲ್ಲಿ ನಡೆದ ಬಸ್ ಅಪಘಾತದಲ್ಲಿ ಏಳರಿಂದ ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದರು. ಕುರ್ಲಾದ ಈ ಅಪಘಾತದ ನೆನಪು ಮಾಸುವ ಮುನ್ನವೇ ಶುಕ್ರವಾರ ರಾತ್ರಿ ಕುರ್ಲಾ ಪಕ್ಕದ ಘಾಟ್ಕೋಪರ್ನಲ್ಲಿ ಭಾರಿ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಟೆಂಪೋ ಐವರು ಪಾದಚಾರಿಗಳ ಮೇಲೆ ಹರಿದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಈ ಅಪಘಾತದ ನಂತರ ಟೆಂಪೋ ಚಾಲಕ ಉತ್ತಮ್ ಖಾರತ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅಪಘಾತ ಹೇಗೆ ಸಂಭವಿಸಿತು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇನ್ನು ಮೃತ ಮಹಿಳೆಯನ್ನು ಪ್ರೀತಿ ಪಟೇಲ್ (ವಯಸ್ಸು 35, ಪಶ್ಚಿಮದ ಘಾಟ್ಕೋಪರ್ ನಿವಾಸಿ) ಎಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ ರೇಷ್ಮಾ ಶೇಖ್, ಮಾರುಫಾ ಶೇಖ್, ಮೊಹಮ್ಮದ್ ಅಲಿ ಅಬ್ದುಲ್ ಶೇಖ್, ಓಜರ್ ಶೇಖ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಮೀಪದ ರಾಜವಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.