ಕರ್ನಾಟಕ

karnataka

ವೈದ್ಯೆ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಕೇಸ್: ಬೇಡಿಕೆಗಳಿಗೆ ಕೇಂದ್ರ ಸಚಿವರ ಒಪ್ಪಿಗೆ, ಮುಷ್ಕರ ಹಿಂಪಡೆದ ಫೋರ್ಡಾ - Kolkata Doctor Rape Murder Case

By PTI

Published : Aug 14, 2024, 9:02 AM IST

ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಬೇಡಿಕೆಗಳಿಗೆ ಕೇಂದ್ರ ಸಚಿವರ ಒಪ್ಪಿಗೆ ಫೋರ್ಡಾ ಮುಷ್ಕರ ಹಿಂಪಡೆದಿದೆ. ಆದ್ರೆ, ವಿವಿಧ ವೈದ್ಯರ ಸಂಘಟನೆಗಳು, ಲಿಖಿತ ಭರವಸೆ ನೀಡುವವರೆಗೆ ಅನಿರ್ದಿಷ್ಟ ಪ್ರತಿಭಟನೆ ಮುಂದುವರೆಸಲಾಗುವುದು ಎಂದು ತಿಳಿಸಿವೆ.

AIIMS  FORDA Union Health Minister J P Nadda
ಬೇಡಿಕೆಗಳಿಗೆ ಕೇಂದ್ರ ಸಚಿವರ ಒಪ್ಪಿಗೆ ಮುಷ್ಕರ ಹಿಂಪಡೆದ ಫೋರ್ಡಾ (IANS)

ನವದೆಹಲಿ:ಕೋಲ್ಕತ್ತಾದಲ್ಲಿ ತರಬೇತಿ ನಿರತ ವೈದ್ಯೆಯೊಬ್ಬರ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ​​(ಫೋರ್ಡಾ) ಇಟ್ಟಿದ್ದ ಬೇಡಿಕೆಗಳನ್ನು ಕೇಂದ್ರ ಆರೋಗ್ಯ ಸಚಿವರು ಒಪ್ಪಿಕೊಂಡಿದ್ದರಿಂದ ಮುಷ್ಕರವನ್ನು ಹಿಂಪಡೆದಿದೆ.

ಕೇಂದ್ರ ಸರ್ಕಾರ ನಡೆಸುವ ಏಮ್ಸ್, ಇಂದಿರಾಗಾಂಧಿ ಆಸ್ಪತ್ರೆ ಮತ್ತು ಅಖಿಲ ಭಾರತ ವೈದ್ಯಕೀಯ ಸಂಘಗಳ ಒಕ್ಕೂಟ (ಎಫ್‌ಎಐಎಂಎ) ಸೇರಿದಂತೆ ಇತರ ವೈದ್ಯರ ಸಂಘಗಳ ವೈದ್ಯಾಧಿಕಾರಿಗಳು, ಮಂಗಳವಾರ ದಾಳಿಗಳನ್ನು ತಡೆಯಲು ಕೇಂದ್ರ ಕಾನೂನು ಜಾರಿಗೆ ಬರುವವರೆಗೆ ತಮ್ಮ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.

ಫೋರ್ಡಾದ ನಿಯೋಗ ಮಂಗಳವಾರ ರಾತ್ರಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದೆ. ರೋಗಿಗಳ ಹಿತದೃಷ್ಟಿಯಿಂದ ಇಂದು (ಬುಧವಾರ) ಬೆಳಗ್ಗೆಯಿಂದ ಮುಷ್ಕರ ಅಂತ್ಯಗೊಳಿಸಲು ನಿರ್ಧರಿಸಲಾಗಿದೆ ಎಂದು ಸಂಘ ತಿಳಿಸಿದೆ.

ಭರವಸೆ ನೀಡಿದ ಆರೋಗ್ಯ ಸಚಿವಾಲಯ:"ಕೇಂದ್ರ ರಕ್ಷಣಾ ಕಾಯ್ದೆಯ ಕುರಿತು ಕೆಲಸ ಮಾಡಲು ಫೋರ್ಡಾದ ಪಾಲ್ಗೊಳ್ಳುವಿಕೆಯೊಂದಿಗೆ ಸಮಿತಿಯನ್ನು ರಚಿಸಲು ಆರೋಗ್ಯ ಸಚಿವರು ಒಪ್ಪಿಗೆ ನೀಡಿರುವುದು ಸಭೆಯ ಯುಶಸ್ಸು ಆಗಿದೆ. ಮುಂದಿನ 15 ದಿನಗಳಲ್ಲಿ ಇದರ ಕೆಲಸ ಪ್ರಾರಂಭವಾಗಲಿದೆ ಎಂದು ಸಚಿವಾಲಯ ಭರವಸೆ ನೀಡಿದೆ" ಎಂದು ಫೋರ್ಡಾ ಮಂಗಳವಾರ ತಡರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

"ಆರೋಗ್ಯ ಕಾರ್ಯಕರ್ತರಿಗೆ ಸುರಕ್ಷಿತ ಕೆಲಸದ ವಾತಾವರಣವನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿರುವ ಕಾಯ್ದೆಯ ಸಮಯೋಚಿತ ಅನುಷ್ಠಾನದ ಮೇಲೆ ಸಮಿತಿಯು ಗಮನಹರಿಸುತ್ತದೆ. ಈ ಉಪಕ್ರಮದ ಸಭೆಗಳು ಮುಂದಿನ ಎರಡು ವಾರಗಳಲ್ಲಿ ಪ್ರಾರಂಭವಾಗಲಿವೆ. FORDA ನಿಯೋಗ ಭಾಗವಹಿಸಲಿದೆ. ಆರೋಗ್ಯ ಸಚಿವಾಲಯದಿಂದ ಅಧಿಕೃತ ಸೂಚನೆ ಶೀಘ್ರದಲ್ಲೇ ಬರಲಿದೆ'' ಎಂದು ಹೇಳಿಕೆ ತಿಳಿಸಿದೆ.

''ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ದುರಂತ ಘಟನೆಯ ಕುರಿತು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಯನ್ನು ಪ್ರಾರಂಭಿಸುವ ಸರ್ಕಾರದ ನಿರ್ಧಾರವು ಚರ್ಚೆಯ ಪ್ರಮುಖ ಅಂಶವಾಗಿದೆ. ಸಿಬಿಐ ತನಿಖೆಗೆ ಹೆಚ್ಚುವರಿಯಾಗಿ, ರಾಷ್ಟ್ರೀಯ ವೈದ್ಯಕೀಯ ಆಯೋಗವು (NMC) ರಾಷ್ಟ್ರವ್ಯಾಪಿ ಅಪ್ಲಿಕೇಶನ್‌ಗಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್‌ಗಳನ್ನು (ಎಸ್‌ಒಪಿ) ಸ್ಥಾಪಿಸುವ ಮೂಲಕ ಆರೋಗ್ಯ ಸಂಸ್ಥೆಗಳಲ್ಲಿ ವರ್ಧಿತ ಭದ್ರತೆಗಾಗಿ ಸಂಘದ ಬೇಡಿಕೆಗಳಿಗೆ ಪ್ರತಿಕ್ರಿಯಿಸಿದೆ. ಎಸ್‌ಒಪಿಯಿಂದ ಸಂಸ್ಥೆಗಳಿಗೆ ಅಧಿಕಾರ ನೀಡುವ ನಿರೀಕ್ಷೆಯಿದೆ. ದೇಶಾದ್ಯಂತ ಉತ್ತಮ ಭದ್ರತಾ ಕ್ರಮಗಳನ್ನು ಒತ್ತಾಯಿಸಲು ಸಹಾಯವಾಗುತ್ತದೆ.

ಮುಖ್ಯವಾಗಿ, ಕೋಲ್ಕತ್ತಾ ಅಥವಾ ರಾಷ್ಟ್ರದಾದ್ಯಂತ ಮುಷ್ಕರದಲ್ಲಿ ತೊಡಗಿರುವ ವೈದ್ಯರ ವಿರುದ್ಧ ಯಾವುದೇ ಪೊಲೀಸ್ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿದೆ'' ಎಂದು ತಿಳಿಸಿದೆ. "ನಮ್ಮ ಅಂತಿಮ ಗುರಿ ಮಾನವೀಯತೆಗೆ ಪೂರಕಾವಾಗಿ ಉತ್ತಮ ಸೇವೆ ಸಲ್ಲಿಸುವುದು, ಮತ್ತು ನಾವು ಸುರಕ್ಷಿತರಾಗಿದ್ದರೆ ಮಾತ್ರ ನಾವು ಅದನ್ನು ಮಾಡಬಹುದು" ಎಂದು ಹೇಳಿದೆ.

ನಡ್ಡಾ ಅವರನ್ನು ಭೇಟಿ ಮಾಡಿದ ನಿಯೋಗದ ಭಾಗವಾಗಿದ್ದ ಇಲ್ಲಿನ ಜಿಟಿಬಿ ಆಸ್ಪತ್ರೆಯ ವೈದ್ಯರು ಕೂಡ ತಮ್ಮ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಿಂಪಡೆದಿದ್ದಾರೆ ಎಂದು ಆಸ್ಪತ್ರೆ ಆರ್‌ಡಿಎ ಅಧ್ಯಕ್ಷ ರಜತ್ ಶರ್ಮಾ ತಿಳಿಸಿದ್ದಾರೆ. "ಮುಷ್ಕರವನ್ನು ಅಧಿಕೃತವಾಗಿ ಹಿಂತೆಗೆದುಕೊಳ್ಳುವುದರೊಂದಿಗೆ, ದೇಶಾದ್ಯಂತದ ವೈದ್ಯರು ತಕ್ಷಣವೇ ತಮ್ಮ ಕರ್ತವ್ಯಗಳನ್ನು ಪುನರಾರಂಭಿಸಲಿದ್ದಾರೆ. ಇದು ಭಾರತದ ಆರೋಗ್ಯ ವ್ಯವಸ್ಥೆಗೆ ಸವಾಲಿನ ಅವಧಿಯ ಅಂತ್ಯವನ್ನು ಸೂಚಿಸುತ್ತದೆ" ಎಂದು FORDA ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ.

ಲಿಖಿತ ಭರವಸೆ ನೀಡುವವರೆಗೆ ಅನಿರ್ದಿಷ್ಟ ಪ್ರತಿಭಟನೆ: ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ(ಎಐಐಎಂಎಸ್) ವೈದ್ಯರ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ರಘುನಂದನ್ ದೀಕ್ಷಿತ್ ಪ್ರತಿಕ್ರಿಯಿಸಿ, ''ವಿದೇಶಿ ಪ್ರಜೆಗಳು, ಪ್ರಾಯೋಜಿತ ಅಭ್ಯರ್ಥಿಗಳು, ಸಹೋದ್ಯೋಗಿಗಳು ಮತ್ತು ಪದವಿಪೂರ್ವ ವಿದ್ಯಾರ್ಥಿಗಳು ಸೇರಿದಂತೆ ಎಐಐಎಂಎಸ್ ವೈದ್ಯರು ತಮ್ಮ ಸೇವೆಯನ್ನು ಮುಂದುವರಿಸಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ. ಕೇಂದ್ರ ಸಂರಕ್ಷಣಾ ಕಾಯ್ದೆಯ ಅನುಷ್ಠಾನ, ಮಾಜಿ ಪ್ರಾಂಶುಪಾಲರ ಅಮಾನತು ಕುರಿತ ವಿಚಾರಣೆ ಬಾಕಿ ಮತ್ತು ಇತರ ಬೇಡಿಕೆಗಳ ಈಡೇರಿಕೆಗಾಗಿ ಲಿಖಿತ ಭರವಸೆ ನೀಡುವವರೆಗೆ ಅನಿರ್ದಿಷ್ಟ ಪ್ರತಿಭಟನೆ ಮುಂದುವರಿಯಲಿದೆ'' ಎಂದು ತಿಳಿಸಿದರು.

ಒಪಿಡಿಗಳು, ಒಟಿಗಳು ಮತ್ತು ವಾರ್ಡ್‌ಗಳು ಬಂದ್​ ಆಗಲಿವೆ. ಇಂದಿರಾಗಾಂಧಿ ಆಸ್ಪತ್ರೆಯ ವೈದ್ಯರ ಸಂಘವು FAIMA ಅನ್ನು ಬೆಂಬಲಿಸಿದೆ ಮತ್ತು ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವವರೆಗೆ ಪ್ರಭಟನೆ ಮುಂದುವರಿಸಲು ನಿರ್ಧರಿಸಿದೆ.

ಡಾ.ಧ್ರುವ ಚೌಹಾಣ್ ಪ್ರತಿಕ್ರಿಯೆ:ಆರೋಗ್ಯ ಕಾರ್ಯಕರ್ತ ಮತ್ತು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್‌ನ ಜೂನಿಯರ್ ಡಾಕ್ಟರ್ಸ್ ನೆಟ್‌ವರ್ಕ್‌ನ ರಾಷ್ಟ್ರೀಯ ಕೌನ್ಸಿಲ್ ಸದಸ್ಯ ಡಾ.ಧ್ರುವ ಚೌಹಾಣ್ ಅವರು, "ಮುಷ್ಕರವನ್ನು ಹಿಂತೆಗೆದುಕೊಳ್ಳುವ FORDA ನಿರ್ಧಾರವನ್ನು ಮರುಪರಿಶೀಲಿಸಬೇಕು. ಏಕೆಂದರೆ ಬಹುಪಾಲು ವೈದ್ಯಕೀಯ ಸಹೋದರರು ಇದನ್ನು ವಿರೋಧಿಸುತ್ತಾರೆ. ಕೇಂದ್ರೀಯ ಆಸ್ಪತ್ರೆಗಳು ತಮ್ಮ ಮುಷ್ಕರವನ್ನು ಮುಂದುವರೆಸುತ್ತವೆ. ಮತ್ತು FAIMA ಇದಕ್ಕೆ ಬದ್ಧವಾಗಿದೆ" ಎಂದು ತಿಳಿಸಿದ ಅವರು, ''ಚಳವಳಿಯು ನಿರ್ಣಾಯಕ ಹಂತದಲ್ಲಿದೆ ಮತ್ತು ಅದನ್ನು ಕೈಬಿಡುವುದರಿಂದ ಆವೇಗವನ್ನು ಕಳೆದುಕೊಳ್ಳುವ ಅಪಾಯವಿದೆ. ಇದೇ ರೀತಿಯ ಘಟನೆಗಳು ಮರುಕಳಿಸುವ ಸಾಧ್ಯತೆಯಿದೆ'' ಎಂದು ಆತಂಕ ವ್ಯಕ್ತಪಡಿಸಿದರು.

ಸೋಮವಾರ, ಪಶ್ಚಿಮ ಬಂಗಾಳದ ಕೋಲ್ಕತ್ತಾದ ಆರ್​ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಕರ್ತವ್ಯದಲ್ಲಿದ್ದಾಗ ಸ್ನಾತಕೋತ್ತರ ತರಬೇತಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದ ನಂತರ ರಾಷ್ಟ್ರ ರಾಜಧಾನಿಯಲ್ಲಿ ಹಲವಾರು ಸರ್ಕಾರಿ ಆಸ್ಪತ್ರೆಗಳು ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದವು. ಫೋರ್ಡಾದ ಕರೆಗೆ ಪ್ರತಿಕ್ರಿಯೆಯಾಗಿ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ​​ಆಸ್ಪತ್ರೆಗಳಲ್ಲಿ ವಿವಿಧ ಸೇವೆಗಳನ್ನು ಬಂದ್​ ಮಾಡಿದ್ದವು.

ಇದನ್ನೂ ಓದಿ:ಬಂಗಾಳ ವೈದ್ಯೆ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಕೇಸ್: ಸಿಬಿಐ ತನಿಖೆಗೆ ಆದೇಶಿಸಿದ ಕೋಲ್ಕತ್ತಾ ಹೈಕೋರ್ಟ್​ - Kolkata Doctor Rape Murder Case

ABOUT THE AUTHOR

...view details