ನವದೆಹಲಿ : 1984 ರ ಸಿಖ್ ವಿರೋಧಿ ದಂಗೆಯ ವೇಳೆ ಸರಸ್ವತಿ ವಿಹಾರ್ ಪ್ರದೇಶದಲ್ಲಿ ತಂದೆ-ಮಗನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ನ ಮಾಜಿ ಸಂಸದ ಸಜ್ಜನ್ಕುಮಾರ್ಗೆ ದೆಹಲಿ ಕೋರ್ಟ್ ಜೀವಾವಧಿ ಶಿಕ್ಷೆಯನ್ನು ಮಂಗಳವಾರ ಪ್ರಕಟಿಸಿತು.
ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಈ ತೀರ್ಪು ನೀಡಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 21 ರಂದು ನಡೆದಿದ್ದ ವಿಚಾರಣೆಯಲ್ಲಿ ಕಾಂಗ್ರೆಸ್ನ ಮಾಜಿ ನಾಯಕನನ್ನು ದೋಷಿ ಎಂದು ಘೋಷಿಸಿ, ತೀರ್ಪು ಕಾಯ್ದಿರಿಸಿದ್ದರು. ಇಂದು ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧೀಶರು ಪ್ರಕಟಿಸಿದರು. ದಂಗೆ ಸಂತ್ರಸ್ತರು ಮತ್ತು ತನಿಖೆ ನಡೆಸಿದ ಪೊಲೀಸರು ಸಜ್ಜನ್ಕುಮಾರ್ಗೆ ಮರಣದಂಡನೆ ನೀಡಬೇಕು. ಇದು ಅಪರೂಪದ ಪ್ರಕರಣ ಎಂದು ಕೋರ್ಟ್ ಮುಂದೆ ವಾದಿಸಿದ್ದರು. ಆದರೆ, ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಎರಡನೇ ಜೀವಾವಧಿ ಶಿಕ್ಷೆ : ಸಜ್ಜನ್ಕುಮಾರ್ ಅವರಿಗೆ ವಿಧಿಸಲಾಗುತ್ತಿರುವ ಎರಡನೇ ಜೀವಾವಧಿ ಶಿಕ್ಷೆ ಇದಾಗಿದೆ. 1984 ರ ಸಿಖ್ ವಿರೋಧಿ ದಂಗೆಗೆ ಸಂಬಂಧಿಸಿದಂತೆ ದೆಹಲಿಯ ಕಂಟೋನ್ಮೆಂಟ್ ನಡೆದ ದಂಗೆಯಲ್ಲಿ ಭಾಗಿಯಾದ ಪ್ರಕರಣದಲ್ಲಿ ಅವರಿಗೆ 2018 ರಲ್ಲಿ ದೆಹಲಿಯ ವಿಶೇಷ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದರಿಂದ ಸಜ್ಜನ್ಕುಮಾರ್ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇದರ ವಿರುದ್ಧ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿದೆ.
1984 ರಲ್ಲಿ ನಡೆದಿದ್ದೇನು ? 1984ರ ಅಕ್ಟೋಬರ್ 31ರಂದು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ಸಿಖ್ ಗನ್ಮ್ಯಾನ್ಗಳು ಕೊಂದ ಬಳಿಕ, ಇದರ ವಿರುದ್ಧ ಸೇಡು ತೀರಿಸಿಕೊಳ್ಳಲು ಅಂದಿನ ಪ್ರಭಾವಿ ಕಾಂಗ್ರೆಸ್ ನಾಯಕರಾಗಿದ್ದ ಸಜ್ಜನ್ಕುಮಾರ್ ಅವರು ಶಸ್ತ್ರಾಸ್ತ್ರ ಪಡೆಯನ್ನು ರೂಪಿಸಿದ್ದರು. ಜೊತೆಗೆ ಅದರ ನೇತೃತ್ವವನ್ನೂ ವಹಿಸಿದ್ದರು.
ಇಂದಿರಾ ಹತ್ಯೆಯಾದ ಮರುದಿನ ಅಂದರೆ, ನವೆಂಬರ್ 1ರಂದು ದೆಹಲಿಯ ಸರಸ್ವತಿ ವಿಹಾರ್ ಪ್ರದೇಶದಲ್ಲಿ ತಮ್ಮ ಶಸ್ತ್ರಸಜ್ಜಿತ ಗುಂಪನ್ನು ನುಗ್ಗಿಸಿ ದಂಗೆ ಎಬ್ಬಿಸಿದ್ದ ಆರೋಪ ಇವರ ಮೇಲಿದೆ. ಗಲಭೆಯಲ್ಲಿ ಸಿಖ್ ಸಮುದಾಯದ ಜಸ್ವಂತ್ ಸಿಂಗ್ ಮತ್ತು ಅವರ ಮಗ ತರುಣ್ದೀಪ್ ಸಿಂಗ್ ಅವರ ಕೊಲೆಯಾಗಿತ್ತು. ಬಳಿಕ ಸಜ್ಜನ್ಕುಮಾರ್ ನೇತೃತ್ವದ ಗುಂಪಿನ ವಿರುದ್ಧ ಪಂಜಾಬಿ ಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖಾ ವರದಿಯಲ್ಲಿ ಏನಿತ್ತು ? ಈ ಬಗ್ಗೆ ತನಿಖೆ ನಡೆಸಿದ ವಿಶೇಷ ತನಿಖಾ ತಂಡ ಕೋರ್ಟ್ಗೆ ವರದಿ ನೀಡಿತ್ತು. ಅದರಲ್ಲಿ ಸಜ್ಜನ್ಕುಮಾರ್ ಅವರ ನೇತೃತ್ವದ ಶಸ್ತ್ರಸಜ್ಜಿತ ಗುಂಪಿನ ವಿರುದ್ಧ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿತ್ತು. ಚಾರ್ಜ್ಶೀಟ್ನಲ್ಲಿ ತಿಳಿಸಿದಂತೆ, ಸಶಸ್ತ್ರ ಪಡೆಯು ಇಂದಿರಾ ಅವರ ಹತ್ಯೆಗೆ ಪ್ರತೀಕಾರವಾಗಿ ನವೆಂಬರ್ 1 ಮತ್ತು 2 ರಂದು ಸಿಖ್ಖರ ನರಮೇಧ ನಡೆಸಿತು. ಸರಸ್ವತಿ ವಿಹಾರ್ನಲ್ಲಿ ತಂದೆ- ಮಗನನ್ನು ಸಜೀವ ದಹನ ಮಾಡಿದ್ದರು. ಮನೆಗೆ ಬೆಂಕಿ ಹಚ್ಚಲಾಯಿತು. ಆಸ್ತಿಪಾಸ್ತಿ ನಾಶ ಮಾಡಿದ್ದರು. ಬಳಿಕ ದೆಹಲಿ ಕಂಟೋನ್ಮೆಂಟ್ನಲ್ಲಿ ಐವರನ್ನು ಹತ್ಯೆ ಮಾಡಲಾಗಿತ್ತು. ಈ ಎಲ್ಲಾ ಹತ್ಯೆಗಳಲ್ಲಿ ಸಜ್ಜನ್ಕುಮಾರ್ ಅವರ ನೇತೃತ್ವದ ಗುಂಪು ಭಾಗಿಯಾಗಿದೆ ಎಂದು ಎಸ್ಐಟಿ ಹೇಳಿತ್ತು. ಪ್ರಕರಣದ ಕುರಿತು ಸುದೀರ್ಘ ವಿಚಾರಣೆ ನಡೆದು ಇದೀಗ ತೀರ್ಪು ಪ್ರಕಟವಾಗಿದೆ.
ಇನ್ನೂ, 1984 ರ ಅಕ್ಟೋಬರ್ 31 ರಂದು ಪ್ರಧಾನಿ ಇಂದಿರಾ ಗಾಂಧಿ ಅವರು ತಮ್ಮ ಸಿಖ್ ಅಂಗರಕ್ಷಕರಿಂದ ಹತ್ಯೆಯಾದ ನಂತರ ಗಲಭೆಗಳು ಭುಗಿಲೆದ್ದಿದ್ದವು. ದೆಹಲಿಯಲ್ಲಿಯೇ ಕನಿಷ್ಠ 2,800 ಸಿಖ್ಖರ ಹತ್ಯೆ ನಡೆದಿತ್ತು. ದಂಗೆಗೆ ಸಂಬಂಧಿಸಿದಂತೆ 587 ಎಫ್ಐಆರ್ಗಳು ದಾಖಲಾಗಿಧ್ದವು. ಇದರಲ್ಲಿ 240 ಎಫ್ಐಆರ್ಗಳು ರದ್ದಾಗಿ, 250 ಕೇಸ್ಗಳಲ್ಲಿ ಆರೋಪಿಗಳಿಗೆ ಖುಲಾಸೆ ಸಿಕ್ಕಿದೆ. ಕೇವಲ 28 ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಗಿದೆ. ಸಜ್ಜನ್ಕುಮಾರ್ ಸೇರಿದಂತೆ ಸುಮಾರು 50 ಮಂದಿ ಹತ್ಯೆ ಕೇಸಲ್ಲಿ ಶಿಕ್ಷೆಗೊಳಗಾಗಿದ್ದಾರೆ.
ಇದನ್ನೂ ಓದಿ: 84ರ ಸಿಖ್ ವಿರೋಧಿ ದಂಗೆ: ಕೊಲೆ ಕೇಸಲ್ಲಿ ಕಾಂಗ್ರೆಸ್ನ ಮಾಜಿ ಸಂಸದ ಸಜ್ಜನ್ ಕುಮಾರ್ ದೋಷಿ
ಸಿಖ್ ವಿರೋಧಿ ದಂಗೆ ಪ್ರಕರಣ: ಜಾಮೀನು ಕೋರಿ ಸಲ್ಲಿಸಿದ ಸಜ್ಜನ್ ಕುಮಾರ್ ಅರ್ಜಿ ವಜಾ