ಕರ್ನಾಟಕ

karnataka

ಮಾನಹಾನಿ ಪ್ರಕರಣ: ಯೂಟ್ಯೂಬರ್ ಸವುಕ್ಕು ಶಂಕರ್ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ಆದೇಶ - YouTuber Savukku Shankar

By ETV Bharat Karnataka Team

Published : Aug 9, 2024, 4:06 PM IST

ಪೊಲೀಸ್ ಇಲಾಖೆಯ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪದ ಮೇಲೆ ಬಂಧನದಲ್ಲಿರುವ ಯೂಟ್ಯೂಬರ್ ಸವುಕ್ಕು ಶಂಕರ್ ಅವರನ್ನು ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.

ಯೂಟ್ಯೂಬರ್ ಸವುಕ್ಕು ಶಂಕರ್
ಯೂಟ್ಯೂಬರ್ ಸವುಕ್ಕು ಶಂಕರ್ (ಫೊಟೋ- ETV Bharat Tamil Nadu)

ಚೆನ್ನೈ: ತಮಿಳು ಯೂಟ್ಯೂಬರ್ 'ಸವುಕ್ಕು' ಶಂಕರ್ ವಿರುದ್ಧದ ಬಂಧನ ಆದೇಶವನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಬೇರೆ ಯಾವುದೇ ಪ್ರಕರಣದಲ್ಲಿ ಅವರ ಬಂಧನದ ಅಗತ್ಯವಿಲ್ಲದಿದ್ದರೆ ಅವರನ್ನು ಬಿಡುಗಡೆ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.

ಯೂಟ್ಯೂಬರ್ ಶಂಕರ್ ವಿರುದ್ಧ ದಾಖಲಾಗಿರುವ 17 ಎಫ್ಐಆರ್​ಗಳನ್ನು ಕ್ರೋಢೀಕರಿಸುವಂತೆ ಕೋರಿ ಆತನ ತಾಯಿ ಎ.ಕಮಲಾ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಎಂ. ಸುಬ್ರಮಣ್ಯಂ ಮತ್ತು ನ್ಯಾಯಮೂರ್ತಿ ವಿ.ಶಿವಜ್ಞಾನಂ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.

ಗೂಂಡಾ ಕಾಯ್ದೆಯಡಿ ಬಂಧನದಿಂದ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಶಂಕರ್ ಅವರಿಗೆ ಮಧ್ಯಂತರ ಪರಿಹಾರ ನೀಡಿದ ವಾರಗಳ ನಂತರ ಈ ಬೆಳವಣಿಗೆ ನಡೆದಿದೆ.

ಪ್ರಕರಣವೇನು?: ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ತಮಿಳುನಾಡಿನ ಮಹಿಳಾ ಪೊಲೀಸ್ ಸಿಬ್ಬಂದಿಯ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ 48 ವರ್ಷದ ಶಂಕರ್ ಅವರನ್ನು ಮೇ 4ರಂದು ಬಂಧಿಸಲಾಗಿತ್ತು. ತಮಿಳುನಾಡಿನ ಅನೇಕ ಮಹಿಳಾ ಪೊಲೀಸ್ ಕಾನ್​ಸ್ಟೆಬಲ್​ಗಳು ಮತ್ತು ಸಬ್ ಇನ್​ಸ್ಪೆಕ್ಟರ್​ಗಳು ತಮಗೆ ಬೇಕಾದಂತೆ ವರ್ಗಾವಣೆ ಮಾಡಿಸಿಕೊಳ್ಳಲು, ಪೋಸ್ಟಿಂಗ್ ಮತ್ತು ಬಡ್ತಿಗಳಿಗಾಗಿ ಹಿರಿಯ ಪುರುಷ ಅಧಿಕಾರಿಗಳೊಂದಿಗೆ ರಾಜಿ ಮಾಡಿಕೊಳ್ಳುತ್ತಿದ್ದಾರೆ ಎಂದು ಶಂಕರ್ ಹೇಳಿದ್ದಾರೆ ಎಂದು ಆರೋಪಿಸಲಾಗಿದೆ.

ಯೂಟ್ಯೂಬ್​ನಲ್ಲಿ ಸಂದರ್ಶನ ಪ್ರಸಾರವಾದ ನಂತರ, ಕೊಯಮತ್ತೂರಿನ ಸೈಬರ್ ಅಪರಾಧ ಪೊಲೀಸರು ಐಪಿಸಿಯ ಸೆಕ್ಷನ್ 294 (ಬಿ), 353, 509 ಮತ್ತು ತಮಿಳುನಾಡು ಮಹಿಳಾ ಕಿರುಕುಳ ನಿಷೇಧ ಕಾಯ್ದೆಯ ಸೆಕ್ಷನ್ 24ರ ಅಡಿಯಲ್ಲಿ ಅಪರಾಧಗಳಿಗಾಗಿ ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.

ಮಹಿಳೆಯ ಗೌರವಕ್ಕೆ ಅವಮಾನ ಮಾಡಿದ ಮತ್ತು ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೆಲೆ ಶಂಕರ್ ಅವರನ್ನು ಬಂಧಿಸಲಾಯಿತು. ಅಲ್ಲದೆ ಬಂಧಿಸಿದಾಗ ಅವರ ಬಳಿ ಗಾಂಜಾ ಪತ್ತೆಯಾಗಿತ್ತು ಎಂದು ಥೇಣಿ ಪೊಲೀಸರು ಮತ್ತೊಂದು ಪ್ರಕರಣವನ್ನು ಕೂಡ ದಾಖಲಿಸಿದ್ದರು.

ಯಾರೀತ 'ಸವುಕ್ಕು' ಶಂಕರ್?: ಯೂಟ್ಯೂಬ್​ನಲ್ಲಿ ಜನಪ್ರಿಯವಾಗುವ ಮೊದಲು ಶಂಕರ್ ವಿಚಕ್ಷಣಾ ಮತ್ತು ಭ್ರಷ್ಟಾಚಾರ ವಿರೋಧಿ ನಿರ್ದೇಶನಾಲಯದ (ಡಿವಿಎಸಿ) ಉದ್ಯೋಗಿಯಾಗಿದ್ದರು. 2008 ರಲ್ಲಿ ತಮಿಳುನಾಡಿನಲ್ಲಿ ಕಾನೂನು ಜಾರಿ ಸಂಸ್ಥೆಗಳು ನಡೆಸಿದ ಅಕ್ರಮ ಕದ್ದಾಲಿಕೆಯ ಪ್ರಕರಣಗಳನ್ನು ಬಹಿರಂಗಪಡಿಸುವ ಆಡಿಯೋ ರೆಕಾರ್ಡಿಂಗ್​ಗಳನ್ನು ಬಹಿರಂಗ ಮಾಡುವ ಮೂಲಕ ಅವರು ಮೊದಲ ಬಾರಿಗೆ ಗಮನ ಸೆಳೆದಿದ್ದರು. ಈ ಆಡಿಯೋಗಳಿಂದಾಗಿ ಡಿಎಂಕೆ ಸರ್ಕಾರದ ಸಚಿವರೊಬ್ಬರು ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಆಗ ಅವರನ್ನು ಬಂಧಿಸಲಾಗಿತ್ತಾದರೂ, ಅವರು ಭ್ರಷ್ಟಾಚಾರ ವಿರೋಧಿ ಹೋರಾಟಗಾರನಾಗಿ ಗುರುತಿಕೊಳ್ಳುವಂತಾಯಿತು. ನಂತರ ಅವರು ವೆಬ್ ಪೋರ್ಟಲ್ ಮತ್ತು ಯೂಟ್ಯೂಬ್ ಚಾನೆಲ್ ಅನ್ನು ಒಳಗೊಂಡಿರುವ ಸವುಕ್ಕು ಮೀಡಿಯಾವನ್ನು ಪ್ರಾರಂಭಿಸಿದರು.

ಇದನ್ನೂ ಓದಿ: ಸರ್ಕಾರಿ ಕೆಲಸಕ್ಕೆ ಅಡ್ಡಿ: ಪೂಜಾ ಖೇಡ್ಕರ್ ತಂದೆ ವಿರುದ್ಧ ದೂರು ದಾಖಲು - Puja Khedkar Father Case

ABOUT THE AUTHOR

...view details