ಕರ್ನಾಟಕ

karnataka

ETV Bharat / bharat

ಟೀ ಮಾರಾಟಗಾರನ ಸುಳ್ಳು ವದಂತಿಯೇ ಜಲಗಾಂವ್​ ರೈಲು ದುರಂತಕ್ಕೆ ಕಾರಣ: ಡಿಸಿಎಂ ಅಜಿತ್ ಪವಾರ್ - JALGAON TRAIN TRAGEDY

ಚಹಾ ಮಾರಾಟಗಾರನೊಬ್ಬ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವದಂತಿ ಹರಡಿದ್ದರಿಂದಲೇ ಲಖನೌ-ಮುಂಬೈ ಪುಷ್ಪಕ್ ಎಕ್ಸ್​ಪ್ರೆಸ್ ರೈಲಿನಲ್ಲಿ ಗೊಂದಲ ಸೃಷ್ಟಿಯಾಯಿತು ಎಂದು ಡಿಸಿಎಂ ಪವಾರ್ ಹೇಳಿದ್ದಾರೆ.

ಟೀ ಮಾರಾಟಗಾರನ ಸುಳ್ಳು ವದಂತಿಯೇ ಜಲ್ಗಾಂವ್ ರೈಲು ದುರಂತಕ್ಕೆ ಕಾರಣ: ಡಿಸಿಎಂ ಅಜಿತ್ ಪವಾರ್
ಟೀ ಮಾರಾಟಗಾರನ ಸುಳ್ಳು ವದಂತಿಯೇ ಜಲ್ಗಾಂವ್ ರೈಲು ದುರಂತಕ್ಕೆ ಕಾರಣ: ಡಿಸಿಎಂ ಅಜಿತ್ ಪವಾರ್ (IANS)

By PTI

Published : Jan 23, 2025, 3:40 PM IST

ಪುಣೆ: ಪುಷ್ಪಕ್ ಎಕ್ಸ್​ಪ್ರೆಸ್ ರೈಲಿನಲ್ಲಿದ್ದ ಟೀ ಮಾರಾಟಗಾರನೊಬ್ಬ ಬೋಗಿಯೊಳಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಕೂಗಿದ್ದು ಜಲಗಾಂವ್​ ರೈಲು ದುರಂತಕ್ಕೆ ಕಾರಣವಾಯಿತು ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಗುರುವಾರ ಹೇಳಿದ್ದಾರೆ.

ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸುಳ್ಳು ವದಂತಿ ಹರಡಿದ್ದರಿಂದ ಬುಧವಾರ ಲಖನೌ - ಮುಂಬೈ ಪುಷ್ಪಕ್ ಎಕ್ಸ್​ಪ್ರೆಸ್ ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರು ಚೈನ್ ಎಳೆದು ರೈಲು ನಿಲ್ಲಿಸಿದ್ದರು. ಈ ಸಮಯದಲ್ಲಿ ಕೆಲ ಪ್ರಯಾಣಿಕರು ಗಾಬರಿಯಿಂದ ಬೋಗಿಯಿಂದ ಪಕ್ಕದ ಹಳಿಯ ಮೇಲೆ ಜಿಗಿದಿದ್ದರು. ಆದರೆ ಅದೇ ಸಮಯದಲ್ಲಿ ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ಕರ್ನಾಟಕ ಎಕ್ಸ್​ಪ್ರೆಸ್ ರೈಲು ಅವರ ಮೇಲೆ ಹರಿದಿದ್ದರಿಂದ ಕನಿಷ್ಠ 13 ಜನ ಸಾವಿಗೀಡಾಗಿ, ಇನ್ನೂ ಹಲವರು ಗಾಯಗೊಂಡ ದುರಂತ ಘಟನೆ ಮಹಾರಾಷ್ಟ್ರದ ಜಲಗಾಂವ್​ ಜಿಲ್ಲೆಯಲ್ಲಿ ಬುಧವಾರ ಸಂಜೆ ನಡೆದಿತ್ತು.

ಒಬ್ಬರಿಂದ ಒಬ್ಬರಿಗೆ ಸುದ್ದಿ ಹರಡಿ ಪ್ರಯಾಣಿಕರು ಗಾಬರಿಗೊಂಡಿದ್ದಾರೆ:ಈ ದುರಂತ ಘಟನೆಯ ಬಗ್ಗೆ ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, ಪ್ಯಾಂಟ್ರಿಯಲ್ಲಿದ್ದ ಚಹಾ ಮಾರಾಟಗಾರರೊಬ್ಬರು ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಕೂಗಿದರು. ಆಗ ರೈಲಿನಲ್ಲಿದ್ದ ಉತ್ತರ ಪ್ರದೇಶದ ಶ್ರಾವಸ್ತಿಯ ಇಬ್ಬರು ಪ್ರಯಾಣಿಕರು ಇದನ್ನು ಕೇಳಿಸಿಕೊಂಡು ಇತರರಿಗೂ ಮಾಹಿತಿ ತಲುಪಿಸಿದರು. ಇದರಿಂದ ಅವರು ಪ್ರಯಾಣಿಸುತ್ತಿದ್ದ ಸಾಮಾನ್ಯ ಬೋಗಿ ಮತ್ತು ಪಕ್ಕದ ಬೋಗಿಯಲ್ಲಿ ಗೊಂದಲ ಮತ್ತು ಭೀತಿಗೆ ಕಾರಣವಾಯಿತು ಎಂದು ಅವರು ಹೇಳಿದರು. ಭಯಭೀತರಾದ ಕೆಲವು ಪ್ರಯಾಣಿಕರು ತಮ್ಮನ್ನು ರಕ್ಷಿಸಿಕೊಳ್ಳಲು ಎರಡೂ ಬದಿಗಳಿಂದ ರೈಲಿನಿಂದ ಜಿಗಿದಿದ್ದಾರೆ ಎಂದು ಪವಾರ್ ಹೇಳಿದರು.

ರೈಲು ವೇಗವಾಗಿ ಚಲಿಸುತ್ತಿದ್ದುದರಿಂದ ಪ್ರಯಾಣಿಕರೊಬ್ಬರು ಅಲಾರಂ ಸರಪಳಿ ಎಳೆದಿದ್ದಾರೆ. ಆಗ ರೈಲು ನಿಂತಿದೆ, ನಂತರ ಜನ ತ್ವರಿತವಾಗಿ ಇಳಿಯಲು ಪ್ರಾರಂಭಿಸಿದರು ಮತ್ತು ಪಕ್ಕದ ಟ್ರ್ಯಾಕ್​ನಲ್ಲಿ ಬಂದ ಕರ್ನಾಟಕ ಎಕ್ಸ್​ಪ್ರೆಸ್ ರೈಲಿನಡಿ ಸಿಲುಕಿದರು. ಅಪಘಾತ ಎಷ್ಟು ಭೀಕರವಾಗಿತ್ತೆಂದರೆ ಕೆಲ ಪ್ರಯಾಣಿಕರ ದೇಹಗಳು ಛಿದ್ರಗೊಂಡವು ಮತ್ತು ಅನೇಕರು ಪ್ರಾಣ ಕಳೆದುಕೊಂಡರು ಎಂದು ಪವಾರ್ ಹೇಳಿದರು.

ಒಟ್ಟಾರೆಯಾಗಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಸುಳ್ಳು ವದಂತಿಯಿಂದಲೇ ಈ ಅಪಘಾತ ಸಂಭವಿಸಿದೆ. ಮೃತಪಟ್ಟ 13 ಜನರಲ್ಲಿ 10 ಜನರನ್ನು ಗುರುತಿಸಲಾಗಿದೆ. ವದಂತಿ ಹರಡಿದ ಇಬ್ಬರು ಪ್ರಯಾಣಿಕರು ಕೂಡ ಘಟನೆಯಲ್ಲಿ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದರು.

ಅಪಘಾತದ ಮಾಹಿತಿ ತಿಳಿಯುತ್ತಲೇ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದರು. ಸ್ವಲ್ಪ ಸಮಯದ ನಂತರ, ಎರಡೂ ದಿಕ್ಕುಗಳಲ್ಲಿ ರೈಲುಗಳ ಸಂಚಾರ ಪುನರಾರಂಭವಾಯಿತು ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ : ಉದ್ಯೋಗ ಸೃಷ್ಟಿಯ ಜೊತೆಗೆ ನಿರುದ್ಯೋಗ ಕೊನೆಗೊಳಿಸುವುದು ನಮ್ಮ ಮೊದಲ ಆಯ್ಕೆ: ಕೇಜ್ರಿವಾಲ್ ಪ್ರತಿಜ್ಞೆ - DELHI ELECTION

ABOUT THE AUTHOR

...view details