ಪುಣೆ(ಮಹಾರಾಷ್ಟ್ರ):ಅಯೋಧ್ಯೆ ರಾಮಜನ್ಮಭೂಮಿಯನ್ನು ಈಗಾಗಲೇ ನಾವು ಸುಪ್ರೀಂ ಕೋರ್ಟ್ನಲ್ಲಿ ಹೋರಾಡಿ ಪಡೆದುಕೊಂಡಾಗಿದೆ. ಕಾಶಿ, ಮಥುರಾದಲ್ಲಿನ ಮಸೀದಿ ಜಾಗವನ್ನು ಹಿಂದುಗಳಿಗೆ ಬಿಟ್ಟುಕೊಟ್ಟಲ್ಲಿ, ನಾವು ಬೇರೆ ಮಸೀದಿಗಳ ಗೊಡವೆಗೆ ಬರುವುದಿಲ್ಲ ಎಂದು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಖಜಾಂಚಿ ಗೋವಿಂದ್ ದೇವ್ಗಿರಿ ಮಹಾರಾಜ್ ಹೇಳಿದ್ದಾರೆ.
ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಯೋಧ್ಯೆಯ ನಂತರ, ಕಾಶಿ ಮತ್ತು ಮಥುರಾ ಹಿಂದುಗಳಿಗೆ ಧಾರ್ಮಿಕ ಪುಣ್ಯ ಕ್ಷೇತ್ರಗಳಾಗಿವೆ. ಅಲ್ಲಿರುವ ಮಸೀದಿ ಸ್ಥಳವನ್ನು ದೇವಾಲಯಕ್ಕೆ ಹಸ್ತಾಂತರಿಸಿದಲ್ಲಿ ನಾವು ಬೇರೆ ಯಾವುದೇ ದೇವಾಲಯಗಳಿಗೆ ಸಂಬಂಧಿಸಿದ ವಿವಾದವನ್ನು ಕೆದಕುವುದಿಲ್ಲ. ಆ ಸಮಸ್ಯೆಗಳನ್ನು ಬಿಟ್ಟು ಬಿಡುತ್ತೇವೆ ಎಂದರು.
ಪ್ರೀತಿಯಿಂದ ಬಿಟ್ಟುಕೊಡಿ:ಅಯೋಧ್ಯೆ, ಕಾಶಿ, ಮಥುರಾದ ಮೂರು ವಿವಾದಿತ ಸ್ಥಳಗಳು ಶಾಂತಿಯುತವಾಗಿ ಬಗೆಹರಿದಲ್ಲಿ, ನಂತರ ನಾವು ಬೇರೆ ಯಾವುದೇ ಮಸೀದಿಗಳತ್ತ ಹಿಂದುಗಳು ನೋಡುವುದಿಲ್ಲ ಎಂದು ನಾವು ಈಗಾಗಲೇ ಹೇಳಿದ್ದೇನೆ. ಹಾಗಾಗಿ, ಇನ್ನೆರಡು ದೇವಾಲಯಗಳ (ಕಾಶಿ ಮತ್ತು ಮಥುರಾ) ವಿವಾದಿತ ಸ್ಥಳ ಶಾಂತಿಯುತವಾಗಿ, ಪ್ರೀತಿಯಿಂದ ಬಿಟ್ಟುಕೊಟ್ಟರೆ ನಾವು ಇತರ ಎಲ್ಲ ವಿಷಯಗಳನ್ನು ಮರೆತುಬಿಡುತ್ತೇವೆ ಎಂದು ಅವರು ಹೇಳಿದರು.
ಇದು ಹಿಂದು-ಮುಸ್ಲಿಂ ಸಮುದಾಯಗಳ ನಡುವಿನ ಸಮಸ್ಯೆಯಲ್ಲ. ಈ ಹಿಂದೆ ದಾಳಿಕೋರರು ಮಾಡಿದ ತಪ್ಪನ್ನು ಈಗ ಸರಿಪಡಿಸಬೇಕಿದೆ. ದಾಳಿಯಿಂದಾಗ ನಷ್ಟವನ್ನು ಈಗ ಸರಿದೂಗಿಸಬೇಕಿದೆ. ಕಾಶಿ, ಮಥುರಾ ದೇವಾಲಯಗಳ ವಿವಾದವನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಲು ಮುಸ್ಲಿಂ ಸಮುದಾಯದ ಜನರು ಸಿದ್ಧರಿದ್ದಾರೆ. ಆದರೆ, ಕೆಲವರು ಅದನ್ನು ವಿರೋಧಿಸುತ್ತಿದ್ದಾರೆ. ನಾವು ಪರಿಸ್ಥಿತಿಗೆ ಅನುಗುಣವಾಗಿ ನಿಲುವು ತೆಗೆದುಕೊಳ್ಳಬೇಕು. ಮುಸ್ಲಿಂ ಸಮುದಾಯಕ್ಕೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತೇವೆ ಎಂದು ಮಹಾರಾಜ್ ಹೇಳಿದರು.
ಧಾರ್ಮಿಕ ಕಾರ್ಯಕ್ರಮಗಳು:ತಮ್ಮ 75ನೇ ಜನ್ಮದಿನಾಚರಣೆ ಅಂಗವಾಗಿ ಪುಣೆಯಲ್ಲಿ ಫೆಬ್ರವರಿ 4ರಿಂದ 11 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ರವಿಶಂಕರ್ ಗುರೂಜಿ ಸೇರಿದಂತೆ ಇತರರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಈಗಾಗಲೇ ಆರ್ಎಸ್ಎಸ್ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು, ದೇಶದ ಪ್ರತಿ ಮಸೀದಿಗಳ ಕೆಳಗೆ ಶಿವಲಿಂಗವನ್ನು ಹುಡುಕುವುದು ಬೇಡ ಎಂದು ಹೇಳಿಕೆ ನೀಡಿದ್ದಾರೆ. ಅಯೋಧ್ಯೆ ಹೊರತುಪಡಿಸಿ ಯಾವುದೇ ದೇವಾಲಯಗಳ ಹೋರಾಟಕ್ಕೆ ಸಂಘ ಮುಂದಾಳತ್ವ ವಹಿಸುವುದಿಲ್ಲ ಎಂದು ಹೇಳಿದ್ದಾರೆ. ಮಥುರಾ, ಕಾಶಿಯ ವಿವಾದಿತ ಜಾಗವನ್ನು ಮುಸ್ಲಿಮರು, ಹಿಂದುಗಳಿಗೆ ಹಸ್ತಾಂತರಿಸಬೇಕು ಎಂದು ಭಾರತೀಯ ಪುರಾತತ್ವ ಇಲಾಖೆಯ (ಎಎಸ್ಐ) ಮಾಜಿ ನಿರ್ದೇಶಕ ಕೆ.ಕೆ.ಮೊಹಮದ್ ಅವರು ಕೂಡ ಹೇಳಿದ್ದಾರೆ.
ಇದನ್ನೂ ಓದಿ:ಜ್ಞಾನವಾಪಿ ಮಸೀದಿ; ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಿದ ಹಿಂದೂ ಅರ್ಚಕರ ಕುಟುಂಬ..