ಕೋಲ್ಕತ್ತಾ: ತೀವ್ರತರದ ಹವಾಮಾನ್ಯ ವೈಪರೀತ್ಯ ತಡೆಯುವಲ್ಲಿ ಪಶ್ಚಿಮ ಬಂಗಾಳದ ಸುಂದರ್ಬನ್ಸ್ನ ಮ್ಯಾಂಗ್ರೋವ್ ಕಾಡುಗಳು ಪ್ರಮುಖವಾಗಿವೆ. ಆದರೆ, ಹೆಚ್ಚುತ್ತಿರುವ ವಾಯು ಮಾಲಿನ್ಯ ಈ ಅರಣ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಪರಿಸರ ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಕೋಲ್ಕತ್ತಾದ ಬೋಸ್ ಇನ್ಸ್ಟಿಟ್ಯೂಟ್ ಮತ್ತು ಕಾನ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ ಈ ಕುರಿತು ತಿಳಿಸಲಾಗಿದೆ.
ಕೋಲ್ಕತ್ತಾ ಮಹಾನಗರ ಮಾತ್ರವಲ್ಲದೇ, ಇಡೀ ಹಿಂದೂ-ಗಂಗಾ ಬಯಲು ಪ್ರದೇಶದಲ್ಲಿ ದಟ್ಟ ಕಪ್ಪು ಇಂಗಾಲದ ಮಾಲಿನ್ಯಕಾರಕಗಳು ಹೆಚ್ಚುತ್ತಿವೆ. ಮಾಲಿನ್ಯದ ಕಣಗಳು ಸುಂದರ್ಬನ್ಸ್ನಲ್ಲಿರುವ ವಿಸ್ತಾರವಾದ ಮ್ಯಾಂಗ್ರೋವ್ ಅರಣ್ಯದ ಗಾಳಿಯ ಗುಣಮಟ್ಟವನ್ನು ಹದಗೆಡಿಸುತ್ತಿದೆ. ಇಲ್ಲಿನ ಸ್ಥಳೀಯ ದೋಣಿಗಳ ಹಳೆಯ ಮೋಟಾರ್ಗಳಿಂದ ಹೊರಸೂಸುವ ಗಾಳಿಯಲ್ಲಿ ಭಾರೀ ಪ್ರಮಾಣದ ವಿಷಕಾರಿ ಲೋಹಗಳ ಕಂಡುಬಂದಿವೆ. ಇದೇ ವಾಯು ಗುಣಮಟ್ಟ ಕುಸಿತದ ಪ್ರಮುಖ ಮೂಲವೆಂದು ಅಧ್ಯಯನ ಗುರುತಿಸಿದೆ.
ಸುಂದರ್ಬನ್ಸ್ನಲ್ಲಿನ ಜನರ ತಲಾ ಆದಾಯ ಕಡಿಮೆ. ಈ ಹಿನ್ನೆಲೆಯಲ್ಲಿ ಶುದ್ಧ ಇಂಧನಗಳ ಬದಲಿಗೆ ಅವರು, ಕಟ್ಟಿಗೆ ಅಥವಾ ಬೆರಣಿಯಂತಹ ಘನ ಇಂಧನವನ್ನು ಉರುವಲಾಗಿ ಬಳಸುತ್ತಿದ್ದಾರೆ ಎಂದು ಅಧ್ಯಯನದ ಲೇಖಕ ಐಐಟಿ ಕಾನ್ಪುರದ ಡಾ.ಅಭಿನಂದನ್ ಘೋಷ್ ತಿಳಿಸಿದ್ದಾರೆ. ಸುಂದರ್ಬನ್ಸ್ನಲ್ಲಿ ಜನರು ಮನೆಗಳಲ್ಲಿ ಸೀಮೆಎಣ್ಣೆಯ ದೀಪಗಳನ್ನೇ ನೆಚ್ಚಿಕೊಂಡಿದ್ದಾರೆ.
ಸ್ಥಳೀಯ ಸಾರಿಗೆ ಮತ್ತು ಪ್ರಾದೇಶಿಕವಾಗಿ ಹೊರಸೂಸುವ ವಾಯುಮಾಲಿನ್ಯ ಸುಂದರ್ಬನ್ಸ್ನ ಮ್ಯಾಂಗ್ರೋವ್ ಪರಿಸರ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಅಧ್ಯಯನದಲ್ಲಿ ವಿವರಿಸಲಾಗಿದೆ. ಇಲ್ಲಿನ ಪರಿಸರ ವ್ಯವಸ್ಥೆಯನ್ನುಆದ್ಯತೆಯನುಸಾರವಾಗಿ ಪರಿಹರಿಸಬೇಕಾಗಿದೆ ಎಂದು ಅಧ್ಯಯನದ ಸಹ ಲೇಖಕ ಬೋಸ್ ಇನ್ಸುಟಿಟ್ಯೂಟ್ನ ಪ್ರೊಫೆಸರ್ ಅಭಿಜಿತ್ ಚಟರ್ಜಿ ತಿಳಿಸಿದರು.
ಸುಂದರಬನ್ಸ್ನ ಗಾಳಿಯ ಗುಣಮಟ್ಟ ಮತ್ತು ಒಟ್ಟಾರೆ ಪರಿಸರ ವ್ಯವಸ್ಥೆಯ ಅವನತಿ ತಡೆಯಲು ಹತ್ತು ಅಂಶಗಳ ಶಿಫಾರಸು ಮಾಡಲಾಗಿದೆ. ಮಾಲಿನ್ಯಕಾರಕ ಇಂಧನಗಳ ಬದಲಾಗಿ ಸೌರಶಕ್ತಿ, ಪವನ ಶಕ್ತಿ ಬಳಕೆ, ವಿದ್ಯುತ್ ಸಾರಿಗೆ, ಸಬ್ಸಿಡಿಸಹಿತ ಎಲ್ಪಿಜಿ, ನಿಯಂತ್ರಿತ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವುದು. ಡೀಸೆಲ್ ಜನರೇಟರ್ಗಳ ನಿಷೇಧ, ವಿಷಕಾರಿ ಸಾಗಣೆ ನಿಷೇಧ, ಮಾಲಿನ್ಯಕಾರಕ ಕಾರ್ಖಾನೆ ಬಂದ್ ಮಾಡುವುದು. ಇಟ್ಟಿಗೆ ಗೂಡುಗಳ ನಿಯಂತ್ರಣ ಮತ್ತು ಕರಾವಳಿ ನಿಯಮಗಳನ್ನು ಬಲಪಡಿಸಬೇಕು ಎಂದು ಶಿಫಾರಸು ಮಾಡಲಾಗಿದೆ.(ಐಎಎನ್ಎಸ್)
ಇದನ್ನೂ ಓದಿ: ಈಶಾನ್ಯ ರಾಜ್ಯಗಳಲ್ಲಿ ಹೆಚ್ಚುತ್ತಿದೆ ಆರೋಗ್ಯ ಅಪಾಯ: ಬಯೋಮಾಸ್ ಇಂಧನ ಬಳಕೆಯೇ ಇಷ್ಟಕ್ಕೆಲ್ಲ ಕಾರಣ