ನವದೆಹಲಿ: ಬಾಂಗ್ಲಾದೇಶದಲ್ಲಿ ರಾಜಕೀಯ ಅಶಾಂತಿಯ ನಡುವೆ, ಢಾಕಾದಿಂದ 199 ಪ್ರಯಾಣಿಕರು ಮತ್ತು ಆರು ಶಿಶುಗಳನ್ನು ಹೊತ್ತ ಏರ್ ಇಂಡಿಯಾ ವಿಮಾನವು ಬುಧವಾರ ಮುಂಜಾನೆ ದೆಹಲಿಗೆ ಬಂದಿಳಿದಿದೆ. ಢಾಕಾ ವಿಮಾನ ನಿಲ್ದಾಣದಲ್ಲಿ ನಿನ್ನೆ ತಡರಾತ್ರಿ ಮೂಲಸೌಕರ್ಯ ಸವಾಲುಗಳ ನಡುವೆಯೂ ಏರ್ ಇಂಡಿಯಾ ವಿಶೇಷ ಚಾರ್ಟರ್ ಫ್ಲೈಟ್ ಅನ್ನು ಕಡಿಮೆ ಸಮಯದಲ್ಲಿ ನಿರ್ವಹಿಸಿತು ಮತ್ತು ಇಂದು ಮುಂಜಾನೆ ದೆಹಲಿಗೆ ಬಂದಿಳಿದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಅಲ್ಲಿನ ಪರಿಸ್ಥಿತಿ ಬಗ್ಗೆ ಮಾತನಾಡಿದ ಪ್ರಯಾಣಿಕ ಅರ್ಪಿತ್, ಈಗ ಹಿಂಸಾಚಾರವನ್ನು ಸಾಕಷ್ಟು ನಿಯಂತ್ರಣಕ್ಕೆ ತರಲಾಗಿದೆ. ಕಾರ್ಖಾನೆಗಳು, ಕಚೇರಿಗಳು, ಬ್ಯಾಂಕ್ಗಳು, ಕಾಲೇಜುಗಳು, ಶಾಲೆಗಳು ಸೇರಿದಂತೆ ನಾಳೆಯಿಂದ ಎಲ್ಲವೂ ಸಂಪೂರ್ಣವಾಗಿ ಕೆಲಸ ಮಾಡಲಿದೆ ಎಂದರು. ಒಂದು ಸಮುದಾಯದ ಜನರನ್ನು ಗುರಿಯಾಗಿಸಿಕೊಂಡಿರುವ ವರದಿಗಳ ಕುರಿತು ಮಾತನಾಡಿದ ಅವರು, ಇಲ್ಲ, ಎಲ್ಲವೂ ಸರಿಯಾಗಿದೆ. ಭಾರತೀಯರಿಗೆ ಯಾವುದೇ ಅಪಾಯವಿಲ್ಲ. ವಿಮಾನಯಾನ ಸಂಸ್ಥೆಗಳು ಸಹ ತೆರೆಯಲ್ಪಟ್ಟಿವೆ. ನನ್ನ ಕುಟುಂಬಸ್ಥರು ಚಿಂತಿತರಾಗಿದ್ದರು. ಹೀಗಾಗಿ ನಾನು ನನ್ನ ಕುಟುಂಬವನ್ನು ನೋಡಲು ಬಂದಿದ್ದೇನೆ ಎಂದು ಹೇಳಿದರು.
ಶೇಖ್ ಹಸೀನಾ ದೇಶ ತೊರೆದಿದ್ದಕ್ಕೆ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ಬುದ್ಧಿವಂತ ಜನರು ಈ ರೀತಿ ಮಾಡಿದ್ದು ತಪ್ಪು. ಅವರು ಅದನ್ನು ನಂತರ ಅರಿತುಕೊಳ್ಳುತ್ತಾರೆ. ಎರಡು ಮೂರು ದಿನಗಳ ನಂತರ ನಾನು ಬಾಂಗ್ಲಾದೇಶಕ್ಕೆ ಹಿಂತಿರುಗುತ್ತೇನೆ ಎಂದು ಅರ್ಪಿತ್ ಹೇಳಿದ್ದಾರೆ.
ಬಾಂಗ್ಲಾದಲ್ಲಿ ಈಗ ಪರಿಸ್ಥಿತಿ ತಿಳಿಯಾಗಿದೆ;ಬಾಂಗ್ಲಾದೇಶದಿಂದ ದೆಹಲಿಗೆ ಬಂದಿಳಿದ ವಿಮಾನದಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಸೌರದೀಪ್ ರಾಯ್ ಮಾತನಾಡಿ, ಆ ದೇಶದ ಪರಿಸ್ಥಿತಿ ಸಾಮಾನ್ಯವಾಗಿದೆ. ನಾನು ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದೇನೆ. ಈಗ ಅಲ್ಲಿ ಎಲ್ಲವೂ ಚೆನ್ನಾಗಿದೆ. ಯಾವುದೇ ಸಮಸ್ಯೆ ಇಲ್ಲ. ಅಲ್ಲಿ ಸಾಕಷ್ಟು ಹತ್ಯಾಕಾಂಡಗಳು ಸಂಭವಿಸಿವೆ ಮತ್ತು ಅನೇಕ ವಿದ್ಯಾರ್ಥಿಗಳನ್ನು ಕೊಲ್ಲಲ್ಪಟ್ಟಿದ್ದಾರೆ. ಅಧಿಕೃತವಾಗಿ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಸುಮಾರು 1000 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.
ಪರಿಸ್ಥಿತಿ ಅಷ್ಟೊಂದು ಚನ್ನಾಗಿಲ್ಲ, ತೀರಾ ಕೆಟ್ಟದ್ದಾಗಿಯೂ ಇಲ್ಲ:ಬಾಂಗ್ಲಾದೇಶದ ಸಿಲ್ಹೆಟ್ದಿಂದ ಬಂದ ಮತ್ತೊಬ್ಬ ಪ್ರಯಾಣಿಕ ತನ್ವೀರ್ ಮಾತನಾಡಿ, ಬಾಂಗ್ಲಾದೇಶದ ಪರಿಸ್ಥಿತಿ ಅಷ್ಟು ಚೆನ್ನಾಗಿಲ್ಲ ಮತ್ತು ಅಷ್ಟು ಕೆಟ್ಟದಾಗಿಯೂ ಇಲ್ಲ. ಮಧ್ಯಂತರ ಸರ್ಕಾರವು ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಮುಂದೆ ಏನಾಗುತ್ತದೆ ಎಂದು ನಮಗೆ ತಿಳಿದಿಲ್ಲ. ಆದರೆ, ಉತ್ತಮ ಫಲಿತಾಂಶಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದು ಹೇಳಿದರು.