ಬೆಂಗಳೂರು: ಕೇಂದ್ರ ಸರ್ಕಾರಿಸಾಮ್ಯದ ಐಟಿಐ ಲಿಮಿಟೆಡ್ನ 80 ನೌಕರರಿಗೆ 12 ವಾರಗಳಲ್ಲಿ ಭವಿಷ್ಯ ನಿಧಿ ಹಣ ಪಾವತಿಸುವಂತೆ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರಿಗೆ ಹೈಕೋರ್ಟ್ ಆದೇಶಿಸಿದೆ.
ಕರ್ನಾಟಕ ಜನರಲ್ ಲೇಬರ್ ಯೂನಿಯನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರಿದ್ದ ಏಕಸದಸ್ಯಪೀಠ ವಿಚಾರಣೆ ನಡೆಸಿತು. ಪ್ರಾದೇಶಿಕ ನಿಧಿ ಪ್ರಾಧಿಕಾರದ ವಾದವನ್ನು ಒಪ್ಪಲಾಗದು. ಎಂಪ್ಲಾಯಿಸ್ ಪ್ರಾವಿಡೆಂಟ್ ಫಂಡ್ಸ್ ಅಂಡ್ ಮಿಸಿಲೇನಿಯಸ್ ಪ್ರಾವಿಜನ್ಸ್ ಕಾಯಿದೆ 1952ರ ಅನ್ವಯ ಸಕ್ಷಮ ಪ್ರಾಧಿಕಾರ ಅಥವಾ ನ್ಯಾಯಾಲಯಗಳ ಆದೇಶ ಪಾಲಿಸಬೇಕು ಎಂದು ಆದೇಶಿಸಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ಕ್ಲಿಫ್ಟನ್ ರೋಜಾರಿಯೋ, ''ಐಟಿ ನೌಕರರಿಗೆ ಪಿಎಫ್ ಹಣ ಪಾವತಿಸಬೇಕಿದೆ. ಹಣವನ್ನು ಈಗಾಗಲೇ ಪ್ರಾದೇಶಿಕ ಭವಿಷ್ಯ ನಿಧಿ ಪ್ರಾಧಿಕಾರದಲ್ಲಿ ಠೇವಣಿ ಇಡಲಾಗಿದೆ. ಅದು ಪ್ರಾಧಿಕಾರದಲ್ಲಿಯೇ ಕೊಳೆಯುತ್ತಿದ್ದು, ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಬೇಕೆಂದು'' ಕೋರಿದರು.
ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರ ಪರ ವಕೀಲರು, ''ಉದ್ಯೋಗದಾತ ಐಟಿಐ ಸಂಸ್ಥೆ ಪಿಎಫ್ ಹಣ ಠೇವಣಿ ಮಾಡಿರುವ ಬಗ್ಗೆ ಇ-ಚಲನ್ ಅಥವಾ ರಸೀದಿ ಸಲ್ಲಿಸುವವರೆಗೆ ಹಣ ಪಾವತಿಸಲಾಗದು. ಪ್ರಾಧಿಕಾರ ಅಸಹಾಯಕವಾಗಿದೆ'' ಎಂದರು.