ದಾವಣಗೆರೆ: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿರುವ ಶಿಲಾಮಠಕ್ಕೆ ನಟ ಸುನೀಲ್ ಶೆಟ್ಟಿ ಅವರು 15 ಲಕ್ಷ ಮೌಲ್ಯದ ಜೀವಂತ ಆನೆಯನ್ನು ಹೋಲುವ ರೋಬೋಟಿಕ್ ಆನೆಯನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಆನೆಗೆ 'ಉಮಾಮಹೇಶ್ವರ' ಎಂದು ನಾಮಕರಣ ಕೂಡ ಮಾಡಲಾಗಿದೆ.
ಸುಮಾರು 11 ಅಡಿ ಎತ್ತರವಿರುವ ಈ ರೋಬೋಟಿಕ್ ಆನೆ, ಹದಿಮೂರುವರೆ ಅಡಿ (ಕೋರೆ ಹಲ್ಲಿನಿಂದ ಬಾಲದವರೆಗೆ) ಉದ್ದವಿದೆ. ಒಂದೂವರೆ ಅಡಿ ಎತ್ತರದ ಟ್ರ್ಯಾಲಿ ನಿರ್ಮಾಣ ಮಾಡಲಾಗಿದೆ.
ಸೋಮವಾರ ಮಠಕ್ಕೆ ಆಗಮಿಸಿದ ಆನೆಯನ್ನು ಸ್ವಾಮೀಜಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ಗ್ರಾಮಸ್ಥರೆಲ್ಲರೂ ಸೇರಿ ಟ್ರ್ಯಾಲಿಯಲ್ಲಿ ಆನೆಯ ಮೆರವಣಿಗೆ ಮಾಡಿದರು. ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮಠದ ಭಕ್ತರು, ಜನಸಾಮಾನ್ಯರು ರೋಬೋಟಿಕ್ ಆನೆಯ ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳಲು ಮುಗಬಿದ್ದಿದ್ದು ವಿಶೇಷವಾಗಿತ್ತು.
ರಿಮೋಟ್ ಕಂಟ್ರೋಲ್ ಮೂಲಕ ನಿಯಂತ್ರಣ: "ಮುಂಬೈನ ಕುಪಾ ಆ್ಯಂಡ್ ಪೆಟಾ ಇಂಡಿಯಾ ಸಂಸ್ಥೆಯಿಂದ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ಈ ರೋಬೋಟಿಕ್ ಗಜರಾಜನನ್ನು ಉಡುಗೊರೆಯಾಗಿ ನೀಡಿದ್ದಾರೆ. ನಾಡಿನಲ್ಲಿ ಆನೆಗಳಿಗೆ ಆಗುವ ಹಿಂಸೆಯನ್ನು ಮನಗಂಡ ಸಂಸ್ಥೆಯವರು ರಾಜ್ಯದ ಪ್ರತಿಷ್ಠಿತ ಸುತ್ತೂರು, ರಂಬಾಪುರಿ, ಎಡೆಯೂರು ಮತ್ತು ತಾವರೆಕೆರೆ ಮಠಗಳಿಗೆ ರೋಬೋಟ್ ಆನೆಯನ್ನು ನೀಡಿದ್ದಾರೆ. ಇದೀಗ ಶಿಲಾಮಠಕ್ಕೂ ಸಂಸ್ಥೆ ನೀಡಿದೆ. ರೋಬೋಟಿಕ್ ಆನೆಯನ್ನು ಟ್ರ್ಯಾಲಿ ಮೇಲೆ ನಿಲ್ಲಿಸಲಾಗಿದ್ದು, ಟ್ರ್ಯಾಲಿ ಮೂಲಕ ಆನೆ ಚಲಿಸುತ್ತದೆ. ರೋಬೋಟಿಕ್ ಆನೆಯನ್ನು ರಿಮೋಟ್ ಕಂಟ್ರೋಲ್ ಮೂಲಕ ನಿಯಂತ್ರಿಸಲಾಗುತ್ತದೆ" ಎಂದು ಡಾ. ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
"ಕಾಡು ಪ್ರಾಣಿಗಳಿಗೆ ಹಿಂಸೆ ನೀಡುವುದನ್ನು ನಿಷೇಧಿಸಲಾಗಿದೆ. ಹೀಗಾಗಿ, ಪರ್ಯಾಯ ಮಾರ್ಗ ಎಂಬಂತೆ ರೋಬೋಟಿಕ್ ಆನೆಯನ್ನು ಶ್ರೀಮಠ ತರಿಸಿದೆ. ಯಾವುದೇ ಖರ್ಚು-ವೆಚ್ಚವಿಲ್ಲದೆ ಆನೆಯನ್ನು ಪಾಲನೆ ಮಾಡಬಹುದಾಗಿದೆ. ಪ್ರಸಿದ್ಧ ಮಹೇಶ್ವರ ಜಾತ್ರೆ, ಮಠದ ಹಿರಿಯ ಗುರುಗಳ ಸ್ಮರಣೋತ್ಸವ, ಶಿವರಾತ್ರಿ ವೇಳೆ ಈ ಆನೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ" ಎಂದು ಹೇಳಿದರು.
ಪ್ರಾಣಿ ಸಂಕುಲದ ಉಳಿವಿಗಾಗಿ ಈ ನಿರ್ಧಾರ: ಬೀರೂರಿನ ರಂಭಾಪುರಿ ಶಾಖಾಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಪ್ರತಿಕ್ರಿಯಿಸಿ "ಪ್ರಾಣಿ ಸಂಕುಲ ಉಳಿಸುವ ಉದ್ದೇಶದಿಂದಾಗಿ ತಾವರೆಕೆರೆ ಮಠಕ್ಕೆ ರೋಬೋಟಿಕ್ ಆನೆ ಕೊಡಲಾಗಿದೆ. ಇದನ್ನು ಹಬ್ಬ ಹರಿದಿನಗಳಲ್ಲಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಳಕೆ ಮಾಡಲಾಗುತ್ತದೆ. ಎಲ್ಲಾ ಮಠ ಮಾನ್ಯಗಳಿಗೂ ಈ ರೀತಿಯ ಕೊಡಲಿ ಎಂಬುದು ಆಶಯವಾಗಿದೆ" ಎಂದರು.
50 ವರ್ಷಗಳ ಮಠದ ಕನಸು ನನಸು: ಶಿಲಾಮಠ ಪೀಠಾಧಿಪತಿ ಡಾ. ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಪ್ರತಿಕ್ರಿಯಿಸಿ, "ಶಿಲಾಮಠಕ್ಕೆ ಧಾರ್ಮಿಕ ಕಾರ್ಯಗಳನ್ನು ನಡೆಸಲು ಆನೆ ಬೇಕು ಎಂದು 50 ವರ್ಷಗಳ ಹಿಂದೆ ಅಂದಿನ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಕೆಲ ಕಾರಣಗಳಿಂದ ಆನೆ ತರಲಾಗಿರಲಿಲ್ಲ. ಪ್ರಸ್ತುತವಾಗಿ ಕುಪಾ ಅಂಡ್ ಪೆಟಾ ಸಂಸ್ಥೆಯವರು ಶಿಲಾಮಠಕ್ಕೆ ರೋಬೋಟ್ ಆನೆಯನ್ನು ದಾನವಾಗಿ ನೀಡಿರುವುದು 50 ವರ್ಷಗಳ ಮಠದ ಕನಸು ನನಸಾದಂತಿದೆ. ವೀರೇಂದ್ರ ಪಾಟೀಲ್ ಅವರ ಸಿಎಂ ಆಗಿದ್ದಾಗ ಮಠಕ್ಕೆ ಜೀವಂತ ಆನೆ ಮಂಜೂರಾಗಿತ್ತು. ಕಾರಣಾಂತರಗಳಿಂದ ತೆಗೆದುಕೊಳ್ಳಲು ಆಗಿರಲಿಲ್ಲ. ಇದು ಜಿಲ್ಲೆಯಲ್ಲೇ ಪ್ರಥಮ ರೋಬೋಟಿಕ್ ಆನೆಯಾಗಿದೆ" ಎಂದು ತಿಳಿಸಿದರು.
ಬಾಲಿವುಡ್ ನಟ ಸುನೀಲ್ ಶೆಟ್ಟಿ ಕಾರ್ಯಕ್ಕೆ ಮೆಚ್ಚುಗೆ: ಬೆಳಕೆ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಪ್ರತಿಕ್ರಿಯಿಸಿ "ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ಆನೆಗಳನ್ನು ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಒಳ್ಳೆಯ ಉದ್ದೇಶದಿಂದ ಕೆಲಸ ಮಾಡ್ತಿದ್ದಾರೆ. ನಮಗೆ ಸಂತಸ ತಂದಿದೆ. ಶಿಲಾಮಠಕ್ಕೆ ರೋಬೋಟಿಕ್ ಆನೆ ಕಳುಹಿಸಿಕೊಟ್ಟಿರುವುದು ಸಂತಸ ತಂದಿದೆ" ಎಂದರು.
ಇದನ್ನೂ ಓದಿ: ಬಾಳೆಹೊನ್ನೂರು ಮಠಕ್ಕೆ ರೋಬೋಟಿಕ್ ಆನೆ ಉಡುಗೊರೆ ನೀಡಿದ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ದಂಪತಿ