ಹಿಂದಿ ದಿವಸ್ ವಿರೋಧಿಸಿ ಕರವೇ ಪ್ರತಿಭಟನೆ
ದೇಶಾದ್ಯಂತ ಹಿಂದಿ ದಿವಸ್ ಆಚರಣೆ ವಿರೋಧಿಸಿ ಜಿಲ್ಲೆಯ ಕರ್ನಾಟಕ ರಕ್ಷಣ ವೇದಿಕೆ ವತಿಯಿಂದ ಚಿಂತಾಮಣಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ದೇಶಾದ್ಯಂತ ಪ್ರತಿ ವರ್ಷ ಸೆ. 14ರಂದು ಹಿಂದಿ ದಿವಸ್ ಆಚರಿಸಲಾಗುತ್ತದೆ. ಹಿಂದಿ ಬದಲಿಗೆ ಕನ್ನಡ ಭಾಷೆಯನ್ನು ಭಾರತ ಸರ್ಕಾರದ ಆಡಳಿತ ಭಾಷೆಯಾಗಿ ಮಾಡಬೇಕು. ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನು ಮಾತ್ರ ಒಕ್ಕೂಟದ ಆಡಳಿತ ಭಾಷೆಯೆಂದು ಕರೆಯುತ್ತಿದೆ. ಅಲ್ಲದೇ ಹಿಂದಿ ಭಾಷೆಯನ್ನು ಮೇಲ್ದರ್ಜೆಯಲ್ಲಿ ಕೂರಿಸಿ ಹಿಂದಿಯೇತರ ಭಾಷೆಗಳನ್ನು ಕಡೆಗಣಿಸುತ್ತಿದೆ. ಹಿಂದಿ ಭಾಷೆಯಂತೆ ಎಲ್ಲಾ ಭಾಷೆಗಳಿಗೂ ಹೆಚ್ಚಿನ ಮನ್ನಣೆ ಸಿಗಬೇಕು ಎಂದು ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.