ತರನ್ ತರನ್ (ಪಂಜಾಬ್): ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡ ಪರಿಣಾಮ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಚೌಧರಿಯನ್ವಾಲಾ ಎಂಬ ಗ್ರಾಮದಲ್ಲಿ ನಡೆದಿದೆ. ಬೆಂಕಿಯ ಭೀಕರತೆ ಎಷ್ಟಿತ್ತೆಂದರೆ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ, ಇಬ್ಬರಿಗೆ ತೀವ್ರ ಸುಟ್ಟು ಗಾಯಗಳಾಗಿವೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಪಂಜಾಬ್ ಪೊಲೀಸ್ ಮತ್ತು ಅಗ್ನಿಶಾಮಕ ದಳ ಬೆಂಕಿ ನಂದಿಸಿವೆ.
"ಕಳೆದ ಹಲವು ವರ್ಷಗಳಿಂದ ಗ್ರಾಮದಲ್ಲಿ ಕುಟುಂಬವೊಂದು ಅಕ್ರಮ ಪಟಾಕಿಗಳನ್ನು ತಯಾರಿಸುತ್ತಿದೆ. ಗುರುವಾರ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದರಿಂದಾಗಿ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪರವಾನಗಿ ಇಲ್ಲದೆ ಕಾರ್ಖಾನೆಯನ್ನು ನಡೆಸಲಾಗುತ್ತಿದೆ. ಪಟಾಕಿಗಳನ್ನು ತಯಾರಿಸುತ್ತಿದ್ದ ಮನೆಯಲ್ಲಿದ್ದ ಜಾನುವಾರುಗಳನ್ನು ಸ್ಥಳೀಯರು ಬಹಳ ಕಷ್ಟಪಟ್ಟು ರಕ್ಷಿಸಿದ್ದಾರೆ. ಮನೆಯ ಪಕ್ಕದಲ್ಲಿದ್ದ ಹುಲ್ಲು ಕೂಡ ಸುಟ್ಟುಹೋಗಿದೆ" ಎಂದು ಗ್ರಾಮದ ನಿವಾಸಿ ಮೇಜರ್ ಸಿಂಗ್ ಎಂಬುವರು ಮಾಹಿತಿ ನೀಡಿದ್ದಾರೆ.
ಬುಧವಾರ, ತಮಿಳುನಾಡಿನ ಕೋವಿಲ್ಪುಲಿಕುಥಿಯಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ರಾಮಲಕ್ಷ್ಮಿ ಎಂಬ ಓರ್ವ ಮಹಿಳೆ ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದರು. ಕಾರ್ಖಾನೆಯ ರಾಸಾಯನಿಕ ಮಿಶ್ರಣ ಘಟಕದಲ್ಲಿ ಈ ಘಟನೆ ನಡೆದಿದ್ದು, ಹಲವು ಉತ್ಪಾದನಾ ಘಟಕಗಳಿಗೆ ಹಾನಿಯಾಗಿದೆ. ಸಾತೂರ್ ಮತ್ತು ಶಿವಕಾಶಿಯಿಂದ ಬಂದ ಅಗ್ನಿಶಾಮಕ ದಳದ ತಂಡಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ ಪಟಾಕಿ ಕಾರ್ಖಾನೆ ಸ್ಫೋಟ: 6 ಮಂದಿ ಕಾರ್ಮಿಕರು ದಾರುಣ ಸಾವು - FIRECRACKERS UNIT BLAST