ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಿಂದ ಗುಡ್ಡ ಕುಸಿತ: ಸಂಚಾರ ಅಸ್ತವ್ಯಸ್ತ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಸುತ್ತ ಮುತ್ತಲ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಭೂಕುಸಿತ, ರಸ್ತೆ ಕುಸಿತ, ಹಾಗೂ ಗುಡ್ಡ ಕುಸಿತ ಉಂಟಾಗುತ್ತಿದೆ. ಕೊಟ್ಟಿಗೆಹಾರ ರಸ್ತೆಯಿಂದ ಬಾಳೂರು ಹೋಗುವ ರಸ್ತೆ ಮಧ್ಯ ಸಿಗುವ ದೇವಾಂಗಲು ಗ್ರಾಮದಲ್ಲಿ ಗುಡ್ಡದ ಮಣ್ಣು ಕುಸಿತ ಉಂಟಾಗಿದ್ದು, ರಸ್ತೆಗೆ ಗುಡ್ಡದ ಮಣ್ಣು ಅಪ್ಪಳಿಸಿ ಬಿದ್ದಿದೆ. ಸ್ಥಳಕ್ಕೆ ಭೇಟಿ ನೀಡಿರುವ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ, ರಸ್ತೆ ಸರಿ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ರಸ್ತೆಯಲ್ಲಿ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿದ್ದು, ತೆರವು ಕಾರ್ಯ ಮುಗಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.