Published : Nov 27, 2023, 10:46 PM IST
ಬೆಳಗಾವಿ: ಜೈಲಿನಿಂದ ಬಿಡುಗಡೆಗೊಂಡ ಬಿಜೆಪಿ ನಗರ ಸೇವಕನಿಗೆ ಅದ್ಧೂರಿ ಸ್ವಾಗತ
ಬೆಳಗಾವಿ : ಟಾವರ್ ನಿರ್ಮಾಣ ವಿಚಾರದಲ್ಲಿ ಗಲಾಟೆಯಾಗಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಬಂಧಿಯಾಗಿದ್ದ ಬಿಜೆಪಿ ನಗರ ಸೇವಕ ಅಭಿಜಿತ್ ಜವಳಕರ್ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಇಲ್ಲಿನ ನಾಲ್ಕನೇ ಜೆಎಂಎಫ್ಸಿ ನ್ಯಾಯಾಲಯ ಆದೇಶ ಹೊರಡಿಸಿದ್ದು, ಸೋಮವಾರ ಸಂಜೆ ಜೈಲಿನಿಂದ ಹೊರ ಬಂದ ಅಭಿಜಿತ್ಗೆ ಬಿಜೆಪಿ ಭವ್ಯ ಸ್ವಾಗತ ಕೋರಿದೆ.
ಮೇಯರ್ ಶೋಭಾ ಸೋಮನ್ನಾಚೆ, ಉಪ ಮೇಯರ್ ರೇಷ್ಮಾ ಪಾಟೀಲ ಸೇರಿ ಹಲವು ಬಿಜೆಪಿ ಪಾಲಿಕೆ ಸದಸ್ಯರು ಮತ್ತು ಕಾರ್ಯಕರ್ತರು ಅಭಿಜಿತ್ ಜವಳಕರ್ಗೆ ಹೂಮಾಲೆ ಹಾಕಿ, ಪುಷ್ಪಗುಚ್ಛ ನೀಡಿ, ಜಯಘೋಷ ಕೂಗಿ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಬಳಿಕ ಬೆಳಗಾವಿ ಹಿಂಡಲಗಾ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಭಾಗ್ಯನಗರದ ನಿವಾಸಿ ರಮೇಶ್ ಪಾಟೀಲ ಹಲ್ಲೆಯಿಂದ ಅಭಿಜಿತ್ ಜವಳಕರ್ ಗಾಯಗೊಂಡು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಎಂಇಎಸ್ ಕಾರ್ಯಕರ್ತರು ಅಭಿಜಿತ್ ಬಂಧನಕ್ಕೆ ಪಟ್ಟು ಹಿಡಿದು ಟಿಳಕವಾಡಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದರು. ನಂತರ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗಲೇ ರಾತ್ರೋರಾತ್ರಿ ಅಭಿಜಿತ್ ಅವರನ್ನು ಟಿಳಕವಾಡಿ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ : ಎಲ್ಲ ರಾಜ್ಯಗಳಲ್ಲಿ ನಾವೇ ಸರ್ಕಾರ ರಚಿಸುತ್ತೇವೆ ಎನ್ನುವ ವಿಶ್ವಾಸವಿದೆ: ಡಿ ಕೆ ಶಿವಕುಮಾರ್