ಯಾದಗಿರಿ/ಗುರುಮಠಕಲ್: ದೇಶದಲ್ಲಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಜಿಲ್ಲಾಡಳಿತ ಜನರಲ್ಲಿ ಜಾಗೃತಿ ಮೂಡಿಸಿ ಸೋಂಕು ನಿಯಂತ್ರಣಕ್ಕೆ ಶ್ರಮಿಸುತ್ತಿದೆ. ಈ ಕಾರ್ಯಕ್ಕೆ ಗುರುಮಠಕಲ್ ತಾಲೂಕಿನ ಸೈದಾಪುರ ಹೋಬಳಿಯ ಶೆಟ್ಟಿಹಳ್ಳಿ ಗ್ರಾಮದಲ್ಲಿರುವ ಸಿದ್ಧಿ ವಿನಾಯಕ ಸಂಜೀವಿನಿ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರು ಕೈ ಜೋಡಿಸಿದ್ದಾರೆ.
ಇತರೆ ಸಂಘದ ಮಹಿಳೆಯರೊಂದಿಗೆ ಸೇರಿ ಬಟ್ಟೆಯಿಂದ ಮಾಸ್ಕ್ ತಯಾರಿಸಿ ಜಿಲ್ಲಾಡಳಿತಕ್ಕೆ ನೀಡುವ ಮೂಲಕ ಸಾಥ್ ನೀಡಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಲಾಕ್ಡೌನ್ ಜಾರಿಯಾಗಿ 25 ದಿನಗಳು ಕಳೆದಿವೆ. ಆರಂಭದಲ್ಲಿ ಜಿಲ್ಲಾಮಟ್ಟದ ಹಲವಾರು ಇಲಾಖೆಗಳ ಸಿಬ್ಬಂದಿ ಹಾಗೂ ಜನರಿಗೆ ವಿತರಿಸಲು ಮಾಸ್ಕ್ ಕೊರತೆ ಕಂಡು ಬಂದಿತ್ತು. ಇಂತಹ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಅವರು ಸೈದಾಪುರ ಹೋಬಳಿಯ ಶ್ರೀ ಸಿದ್ಧಿ ವಿನಾಯಕ ಸಂಜೀವಿನಿ ಸ್ವಸಹಾಯ ಸಂಘದ ಪದಾಧಿಕಾರಿಗಳಿಗೆ ಬಟ್ಟೆ ಮಾಸ್ಕ್ ತಯಾರಿಸಲು ಸೂಚಿಸಿದ್ದರು.
ಇದರಿಂದ ಲಾಕ್ಡೌನ್ನಿಂದ ಮನೆಯಲ್ಲಿ ಕಾಲ ಕಳೆಯುತ್ತಿದ್ದ 6ರಿಂದ 7 ಮಹಿಳೆಯರು ಸೇರಿ ಸೈದಾಪುರದ ಒಂದು ಮನೆಯಲ್ಲಿ ಬಟ್ಟೆ ಮಾಸ್ಕ್ ತಯಾರಿಸಲು ಮುಂದಾಗಿದ್ದರು.