ಯಾದಗಿರಿ: ಗುರಮಿಠಕಲ್ ತಾಲೂಕಿನ ಧರ್ಮಪುರಿ ಗೇಟ್ ಬಳಿ ಲಾರಿ, ಟ್ರ್ಯಾಕ್ಟರ್ ಮತ್ತು ಬೈಕ್ ಮಧ್ಯೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರಾಜಪ್ಪ (40) ಮತ್ತು ಗಂಗಮ್ಮ (35) ಅಪಘಾತದಲ್ಲಿ ಮೃತಪಟ್ಟವರು. ಗುರಮಿಠಕಲ್ ಪಟ್ಟಣದಿಂದ ಯಾದಗಿರಿಗೆ ಕೆಲಸದ ನಿಮಿತ್ತ ರಾಜಪ್ಪ ಹಾಗೂ ಗಂಗಮ್ಮ ಒಂದೇ ಬೈಕ್ ನಲ್ಲಿ ತೆರಳುತ್ತಿದ್ದರು. ಇದೇ ಮಾರ್ಗವಾಗಿ ತೆರಳುತ್ತಿದ್ದ ಲಾರಿ ಹಿಂಬದಿಯಿಂದ ಬೈಕ್ ಗೆ ಡಿಕ್ಕಿ ಹೊಡೆದಿದ್ದರೆ, ಲಾರಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಮೃತ ಗಂಗಮ್ಮ ಗುರಮಿಠಕಲ್ ಪಟ್ಟಣದ ನಿವಾಸಿಯಾಗಿದ್ದು, ರಾಜಪ್ಪ ಹಂದ್ರಕಿ ಗ್ರಾಮದವರೆಂದು ತಿಳಿದುಬಂದಿದೆ. ಇವರಿಬ್ಬರು ದೂರದ ಸಂಬಂಧಿಗಳು ಅಂತ ಹೇಳಲಾಗುತ್ತಿದೆ.
ಸ್ಥಳಕ್ಕೆ ಭೇಟಿ ನೀಡಿದ್ದ ಗುರಮಿಠಕಲ್ ಠಾಣೆಯ ಪೊಲೀಸರು ಲಾರಿ ಚಾಲಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಗುರಮಿಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.